ಶಾರ್ಜೀಲ್ ಇಮಾಮ್’ರ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿದ ದೆಹಲಿ ನ್ಯಾಯಾಲಯ

Prasthutha|

ನವದೆಹಲಿ: 2020ರ ದೆಹಲಿ ಗಲಭೆ ಸಂಬಂಧ ಹಾಕಿರುವ ದೇಶದ್ರೋಹದ ಮೊಕದ್ದಮೆಗೆ ಸಂಬಂಧಿಸಿದಂತೆ ಜೆಎನ್ ಯು ವಿದ್ಯಾರ್ಥಿ ಶಾರ್ಜೀಲ್ ಇಮಾಮ್’ರ ಜಾಮೀನು ಕೋರಿದ ಒಂದು ನಿಯತ ಮತ್ತು ಇನ್ನೊಂದು ಮಧ್ಯಂತರ ಅರ್ಜಿಗಳ ವಿಚಾರಣೆಯನ್ನು ದೆಹಲಿ ಉಚ್ಚ ನ್ಯಾಯಾಲಯವು ಜನವರಿ 30ಕ್ಕೆ ಮುಂದೂಡಿದೆ.

- Advertisement -


ನ್ಯಾಯಾಧೀಶರಾದ ಸಿದ್ಧಾರ್ಥ್ ಮೃದುಲ್, ತಲವಂತ್ ಸಿಂಗ್ ಅವರಿದ್ದ ದೆಹಲಿ ಉಚ್ಚ ನ್ಯಾಯಾಲಯದ ಪೀಠವು ಭಾರತೀಯ ದಂಡಸಂಹಿತೆ ದೇಶದ್ರೋಹದ 124ಎ ವಿಧಿಯಡಿ ಮೊಕದ್ದಮೆ ಇರುವುದರಿಂದ ಮಧ್ಯಂತರ ಜಾಮೀನು ನೀಡಿಕೆ ಬಗ್ಗೆ ವಿಚಾರಣೆ ನಡೆಸಿತು.
ದೇಶದ್ರೋಹದ ಆರೋಪ ಇರುವ ಇನ್ನೊಂದು ಮೊಕದ್ದಮೆಯಲ್ಲಿ ಇಮಾಮ್’ರಿಗೆ ಜಾಮೀನು ಸಿಕ್ಕಿದೆ ಎಂದು ಅವರ ವಕೀಲರು ಕೋರ್ಟಿಗೆ ತಿಳಿಸಿದರು.
ಒಂದೇ ವಿಷಯದ ಬಗ್ಗೆ ಜಾಮೀನು ಅರ್ಜಿ ಇರುವಾಗ ಎರಡನ್ನೂ ಒಟ್ಟಿಗೇ ನೋಡಬೇಕು. ಪ್ರಪ್ರತ್ಯೇಕವಾಗಿ ಗಮನಿಸಲಾಗದು. ನಾವು ಅವೆರಡನ್ನೂ ಒಟ್ಟಿಗೇ ಗಮನಿಸುತ್ತೇವೆ. ಒಂದು ವಿಷಯಕ್ಕೆ ನೀವು ಎರಡೆರಡು ಬಾರಿ ಕೇಳಲಾಗದು ಎಂದು ಪೀಠ ಹೇಳಿತು.


“ಒಂದೇ ಎಫ್’ಐಆರ್’ಗೆ ಟ್ರಯಲ್ ಕೋರ್ಟಿನಲ್ಲಿ ನೀವು ಸಲ್ಲಿಸಿರುವ ನಿಯತ ಮತ್ತು ಮಧ್ಯಂತರ ಜಾಮೀನು ಅರ್ಜಿಯು ತಿರಸ್ಕೃತವಾಗಿದೆ. ನಾವದನ್ನು ಒಟ್ಟಿಗೆ ವಿಚಾರಿಸುತ್ತೇವೆ. ನೀವು ಒಂದಕ್ಕಿಂತ ಹೆಚ್ಚು ಬಾರಿ ಕೇಳಲಾಗದು. ಇದು ಸರಿಯಾದ ಕ್ರಮವಲ್ಲ” ಎಂದು ನ್ಯಾಯಾಧೀಶರು ಹೇಳಿದರು.
ನಿಯತ ಜಾಮೀನು ವಿಚಾರಣೆಯನ್ನು ಏಪ್ರಿಲ್ ತಿಂಗಳಿಗೆ ಹಾಕಿರುವುದರಿಂದ ನಾವು ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಬೇಕಾಯಿತು. ಅಲ್ಲದೆ ದೇಶದ್ರೋಹದ ಕಾಯ್ದೆ ಅನ್ವಯಿಸಿರುವುದರ ಸಾಧ್ಯತೆಯನ್ನು ಸುಪ್ರೀಂ ಕೋರ್ಟ್ ತೀರ್ಮಾನಿಸಲಿದೆ ಎಂದು ಇಮಾಮ್ ಪರ ವಕೀಲರು ತಿಳಿಸಿದರು.

- Advertisement -


ಸರ್ವೋಚ್ಚ ನ್ಯಾಯಾಲಯವು ದೇಶದ್ರೋಹದ ಆರೋಪ ಹೊತ್ತ ಎಲ್ಲರನ್ನು ಬಿಡುಗಡೆ ಮಾಡುವಂತೆ ಸೂಚಿಸಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿತು. ಅಲ್ಲದೆ ಇಮಾಮ್ ಮೇಲೆ ಈ ಮೊಕದ್ದಮೆಯಲ್ಲಿ ದೇಶದ್ರೋಹದ ಆರೋಪ ಮಾತ್ರವಲ್ಲ, ಇತರ ಆರೋಪಗಳೂ ಇವೆ ಎಂದು ದಿಲ್ಲಿ ಹೈಕೋರ್ಟ್ ಪೀಠ ಹೇಳಿತು.


“ಎರಡು ಜಾಮೀನು ಅರ್ಜಿಗಳ ಅಂತಿಮ ಫಲಿತಾಂಶ ಒಂದೇ. ಇದನ್ನು ನೀವು ಎರಡು ದಾರಿಯಲ್ಲಿ ಎಳೆಯಲಾಗದು. ಈಗ ನಮ್ಮೆದರು ಎರಡು ಜಾಮೀನು ಅರ್ಜಿಗಳೂ ಇವೆ. ಇಂದೇ ನಿಮ್ಮ ವಾದ ಕೇಳಲಾಗದು. ಮುಂದೆ ಆಲಿಸಲಿದ್ದೇವೆ. ನಾವು ಎರಡನ್ನೂ ನೋಡುತ್ತೇವೆ. ಸುಪ್ರೀಂ ಕೋರ್ಟ್ ನೀವು ಬಿಡುಗಡೆ ಆಗಿದ್ದೀರಿ ಎಂದು ಎಲ್ಲೂ ಹೇಳಿಲ್ಲ ಎಂದು ಪೀಠವು ತಿಳಿಸಿತು.
ನನ್ನ ಕಕ್ಷಿದಾರರ ಮೇಲೆ ಚಾರ್ಜ್ ಶೀಟ್ ಸಲ್ಲಿಕೆ ಕೂಡ ತಡವಾಗಿದೆ ಎಂದು ಇಮಾಮರ ವಕೀಲರು ವಾದಿಸಿದರು.
ಕೊನೆಗೆ ದಿಲ್ಲಿ ಉಚ್ಚ ನ್ಯಾಯಾಲಯವು ಏಪ್ರಿಲ್ ಬದಲು ಜಾಮೀನು ಅರ್ಜಿ ವಿಚಾರಣೆಯನ್ನು ಜನವರಿ 30ಕ್ಕೆ ಗೊತ್ತುಪಡಿಸಿತು.

Join Whatsapp