ನೀರು ಬಿಡಲು ನಿರಾಕರಣೆ : ಉತ್ತರ ಪ್ರದೇಶದಲ್ಲಿ ದಲಿತ ರೈತನ ಶಿರಚ್ಛೇದ !

Prasthutha|

ಲಕ್ನೋ : ಜಮೀನಿಗೆ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದಲ್ಲಿ ದಲಿತ ರೈತನೋರ್ವನ ಶಿರಚ್ಛೇದ ಮಾಡಲಾಗಿದೆ. ತನ್ನ ಜಮೀನಿಗೆ ನೀರು ಬಿಡಲು ನಿರಾಕರಿಸಿದ ಬಗ್ಗೆ ಕೋಪಗೊಂಡ ಮತ್ತೊಬ್ಬ ರೈತ, ದಲಿತ ರೈತನ ತಲೆಯನ್ನು ಕತ್ತರಿಸಿ ಹಾಕಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಬಾದೌನ್ ದಿನ್ ನಗರದ ಶೇಖ್ಪುರ ಗ್ರಾಮದಲ್ಲಿ ನಡೆದಿದೆ. ನಾಥು ಲಾಲ್ ಜಾದವ್ ಎಂಬ ದಲಿತ ರೈತ ಕೊಲೆಗೀಡಾದ ವ್ಯಕ್ತಿ. ಮತ್ತೊಬ್ಬ ರೈತ ರೂಪ್ ಕಿಶೋರ್ ಬಂಧಿತನಾದ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ತನ್ನ ಜಮೀನಿಗೆ ನೀರು ಬಿಡುಗಡೆ ಮಾಡಬೇಕೆಂದು ರೂಪ್ ಕಿಶೋರ್ ಒತ್ತಾಯ ಮಾಡಿದ್ದ. ಆದರೆ ನಾಥೂ ಲಾಲ್ ಜಾಧವ್ ಕೃಷಿಗೆ ಹೆಚ್ಚು ನೀರು ಬೇಕೆಂದು ಈ ಬೇಡಿಕೆಯನ್ನು ತಿರಸ್ಕರಿಸಿದ್ದರು. ಸ್ಥಳೀಯ ಕೆಲವರು ಮಧ್ಯಪ್ರವೇಶಿಸಲು ಪ್ರಯತ್ನಿಸಿದರೂ ನಾಥೂ ಲಾಲ್ ಜಾದವ್ ರ ಶಿರಚ್ಛೇದ ಮಾಡಿದ್ದನ್ನು ನೋಡಿ ಭಯದಿಂದ ಓಡಿಹೋದರು. ತಡರಾತ್ರಿಯಾಗಿಯೂ ತಂದೆ ಬರುವುದನ್ನು ಕಾಣದಿದ್ದಾಗ ಮಗ ಜಮೀನಿಗೆ ಹೋದಾಗ ಶವ ಪತ್ತೆಯಾಗಿದೆ. ರೂಪ್ ಕಿಶೋರ್ ಮಾತ್ರವಲ್ಲದೆ ಕೊಲೆಯಲ್ಲಿ ಕೆಲವರು ಭಾಗಿಯಾಗಿದ್ದಾರೆ ಎಂದು ಮಗ ಆರೋಪಿಸಿದ್ದಾನೆ. ಮಗ ಓಂಪಾಲ್ ನ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Join Whatsapp