ಹಣ್ಣು ಕೀಳಿದ್ದಾರೆಂದು ಆರೋಪಿಸಿ ದಲಿತ ಬಾಲಕರನ್ನು ಮರಕ್ಕೆ ಕಟ್ಟಿ ಹಾಕಿ ಮಾರಣಾಂತಿಕ ಹಲ್ಲೆ

Prasthutha|

ಲಖ್ನೋ: ತನ್ನ ಜಮೀನಿನ ಮರದಿಂದ ಹಣ್ಣು ಕೀಳಿದ್ದಾರೆಂದು ಆರೋಪಿಸಿ 10 ಮತ್ತು 11 ವರ್ಷ ವಯಸ್ಸಿನ ದಲಿತ ಹುಡುಗರನ್ನು ಮರಕ್ಕೆ ಕಟ್ಟಿ ಹಾಕಿ ತೋಟದ ಮಾಲೀಕ ಗಂಟೆಗಟ್ಟಲೆ ಮಾರಣಾಂತಿಕವಾಗಿ ಥಳಿಸಿದ ಘಟನೆ ಉತ್ತರ ಪ್ರದೇಶದ ಗೆಹುವಾ ಗ್ರಾಮದಲ್ಲಿ ನಡೆದಿದೆ.  

- Advertisement -

ಕಾಣೆಯಾದ ಮಕ್ಕಳನ್ನು ಹುಡುಕಿ ಬಂದ ಪೋಷಕರಿಗೆ ಮರಕ್ಕೆ ಕಟ್ಟಿ ಹಾಕಿ ಬಂಧಿಸಿದ ಸ್ಥಿತಿಯಲ್ಲಿ ಪ್ರಜ್ಞಾಹೀನರಾಗಿ ಕಂಡು ಬಂದಿದ್ದಾರೆ.  ಈ ಘಟನೆಯ ಬಗ್ಗೆ ಮಹಮ್ಮದಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಪ್ರಕರಣ ದಾಖಲಿಸದ ಪೊಲೀಸರು ಮಕ್ಕಳನ್ನು ಥಳಿಸಿದ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲಾಗುತ್ತಿದ್ದಂತೆಯೇ FIR ದಾಖಲಿಸಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ.

ಪ್ರಮುಖ ಆರೋಪಿ ಮೇಲ್ಜಾತಿಗೆ ಸೇರಿದ ಕೈಲಾಶ್ ವರ್ಮಾನನ್ನು ಬಂಧಿಸಲಾಗಿದೆ. ಘಟನೆಯ ಸಮಯದಲ್ಲಿ ಅವನು ಮದ್ಯದ ಅಮಲಿನಲ್ಲಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. 25 ವರ್ಷದ ಶಾಲಾ ಮಾಲೀಕ ಕೈಲಾಶ್ ಖಾಸಗಿ ಶಾಲಾ ಕ್ಯಾಂಪಸ್ ನ ಮರದಿಂದ ಹಣ್ಣು ಕೀಳುತ್ತಿರುವಾಗ ಹಿಡಿದು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾನೆ ಎಂದು ಸಂತ್ರಸ್ತ ಹುಡುಗರ ಕುಟುಂಬಗಳು ನೀಡಿದ ದೂರಿನಲ್ಲಿ ತಿಳಿಸಿದೆ. ದೂರು ಹಿಂಪಡೆಯುವಂತೆ ಕೈಲಾಶ್ ಕುಟುಂಬದವರು ಒತ್ತಡ ಹೇರುತ್ತಿದ್ದಾರೆ ಎಂದು ಮಕ್ಕಳ ಪೋಷಕರು ಆರೋಪಿಸಿದ್ದಾರೆ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ ಗಳ ಪ್ರಕಾರ ಮತ್ತು ಎಸ್ಸಿ/ಎಸ್ಟಿ ಕಾಯ್ದೆಯ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp