ಗೂಂಡಾಗಳಿಗೆ ಕುಮ್ಮಕ್ಕು ನೀಡುವ ಮುಖ್ಯಮಂತ್ರಿಯನ್ನು ವಜಾಗೊಳಿಸುವಂತೆ ರಾಜ್ಯಪಾಲರಿಗೆ ಸಿಪಿಐ(ಎಂ) ಒತ್ತಾಯ

Prasthutha|

ಬೆಂಗಳೂರು: ಸಂಘಪರಿವಾರ ಶಕ್ತಿಗಳು ಅಂತರ್ಜಾತೀಯ ವಿವಾಹಿತರ ಹಾಗೂ ಅಂತರ್ಧಮೀಯ ಯುವಕ ಯುವತಿಯರು ಒಂದೆಡೆ ಸೇರುತ್ತಿರುವುದನ್ನು ವಿರೋಧಿಸಿ ಧಾಳಿ ನಡೆಸುತ್ತಿರುವುದು ಮತ್ತು ಕಗ್ಗೊಲೆಗೆ ಮುಂದಾಗುತ್ತಿರುವುದನ್ನು ರಾಜ್ಯದ ಮುಖ್ಯಮಂತ್ರಿ ಬಲವಾಗಿ ಖಂಡಿಸಿ, ಕಾನೂನಾತ್ಮಕ ಕ್ರಮವಹಿಸಿ ಅಂತಹ ಶಕ್ತಿಗಳನ್ನು ನಿಗ್ರಹಿಸುವ ಬದಲು, ಅಂತಹ ಶಕ್ತಿಗಳ ಕೆಲಸವನ್ನು ಕ್ರಿಯೆಗೆ-ಪ್ರತಿಕ್ರಿಯೆ ಮತ್ತು ಭಾವನಾತ್ಮಕ ವಿಚಾರವಾಗಿದೆಯೆಂದು ಬಹಿರಂಗವಾಗಿ ಸಮರ್ಥಿಸುತ್ತಿರುವುದು ತೀವ್ರ ಖಂಡನೀಯವಾಗಿದೆ ಎಂದು  ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು.ಬಸವರಾಜ ತಿಳಿಸಿದ್ದಾರೆ.

- Advertisement -

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮುಖ್ಯಮಂತ್ರಿ ಅವರ ಈ ಬಹಿರಂಗ ಹೇಳಿಕೆಗಳು ಭಾರತದ ಸಂವಿಧಾನದ ವಿರೋಧಿ ಹೇಳಿಕೆಗಳಾಗಿವೆ. ಈ ಕೂಡಲೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಅಗತ್ಯ ಕ್ರಮಕೈಗೊಳ್ಳಬೇಕೆಂದು  ರಾಜ್ಯಪಾಲರನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಬಲವಾಗಿ ಒತ್ತಾಯಿಸುತ್ತದೆ. ಇದೇ ಮುಖ್ಯಮಂತ್ರಿಗಳು ರೈತ ವಿರೋಧಿಯಾದ ಕೃಷಿ ಕಾಯ್ದೆಗಳ ವಿರುದ್ದ ಹೋರಾಟ ನಡೆಸುತ್ತಿರುವ ರೈತರನ್ನು ನಕಲಿ ರೈತರೆಂದು ಜರೆಯುವ ಉದ್ಧಟತನವನ್ನು ಮೆರೆದಿದ್ದರು. ಸಂವಿಧಾನ ಜನತೆಗೆ ನೀಡಿದ ಪ್ರಜಾಸತ್ತಾತ್ಮಕ ಹಕ್ಕುಗಳಾದ, ಯುವಜನರು ಪರಸ್ಪರ ಒಪ್ಪಿ ಪ್ರೀತಿಸುವ ಮತ್ತು ವಿವಾಹವಾಗುವ ಹಕ್ಕು, ಮತಾಂತರದ ಹಕ್ಕು, ಆಹಾರದ ಹಕ್ಕು, ಬದುಕುವ ಹಕ್ಕುಗಳು ಮತ್ತು ದೇಶದ ಜಾತ್ಯಾತೀತ ಸ್ವರೂಪ ಹಾಗೂ ಸಾಮಾಜಿಕ ನ್ಯಾಯದ ಮೇಲೆ ಕೋಮುವಾದಿಗಳ ಮತ್ತು ಜಾತಿವಾದಿಗಳ ಧಾಳಿಗಳನ್ನು ಸಮರ್ಥಿಸುವ ಇಂತಹ ಸಂಚಿನ ಹೇಳಿಕೆಗಳು ಕೋಮುವಾದಿ ಹಾಗೂ ಜಾತಿವಾದಿ ಪುಂಡರ ಪುಂಡಾಟಿಕೆಗಳಿಗೆ ಉತ್ತೇಜನ ನೀಡಿದಂತಾಗಿದೆ ಎಂದು ಅವರು ತಿಳಿಸಿದ್ದಾರೆ.

ಹೈನುಗಾರರು, ಸಾರ್ವಜನಿಕ ಹೈನೋದ್ಯಮದ, ಅಲ್ಪಸಂಖ್ಯಾತರು ಹಾಗೂ ದಲಿತರ ಅಸಹಾರದ ಮತ್ತು ಬದುಕುವ ಹಕ್ಕಿನ ವಿರುದ್ದ, ಈಗಾಗಲೇ ಸಂವಿಧಾನ ಬಾಹಿರವಾಗಿ, ಜಾನುವಾರು ಹತ್ಯಾ ನಿಷೇಧ ಕಾಯ್ದೆ – 2020ನ್ನು ಅಂಗೀಕರಿಸಲಾಗಿದೆ. ಮತಾಂತರ ನಿಷೇದ ಕಾಯ್ದೆಗೆ ಕ್ರಮವಹಿಸಲಾಗಿದೆ. ರಾಜ್ಯದ ರೈತಾಪಿ ಜನತೆ ಹಾಗೂ ಎಲ್ಲಾ ಬಾಧಿತರು ಪ್ರಗತಿಪರ ಶಕ್ತಿಗಳು ಇವುಗಳವಿರುದ್ದ ಹೋರಾಟದಲ್ಲಿ ತೊಡಗಿದ್ದಾರೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಇಂತಹ ಸಂವಿದಾನ ವಿರೋಧಿ ಮತ್ತು ಕೋಮು ಹಾಗೂ ಜಾತಿ ದ್ವೇಷದ ಪರವಾದ ಹೇಳಿಕೆಯಿಂದ ಉತ್ತೇಜಿತರಾದ ಹಿಂದೂ ಮತಾಂಧರು ಯುವಜನರಿಗೆ ಸ್ವರಕ್ಷಣೆಯ ಹೆಸರಿನಲ್ಲಿ ತಲವಾರುಗಳನ್ನು ಹಂಚಲು ಮುಂದಾದ ದುಷ್ಕೃತ್ಯವು ನಡೆದಿದೆ.

- Advertisement -

ವಿಜಯದಶಮಿ ದಿನದಂದು ಕಾನೂನು  ಹಾಗು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಪೊಲೀಸ್ ಠಾಣೆಗಳು, ಪೊಲೀಸರು ಕೇಸರಿ ಶಾಲುಗಳನ್ನು ಸಾಮೂಹಿಕವಾಗಿ ಹೊದ್ದು ಜಿಲ್ಲೆಯ ಉನ್ನತ ಪೋಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಫೋಟೋ ತೆಗೆಸಿಕೊಂಡು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಹಿಂದೂ ಮತಾಂಧತೆ ಪೋಲೀಸ್ ಇಲಾಖೆಯಲ್ಲಿ ನುಸುಳಿರುವುದನ್ನು ತೋರಿಸುತ್ತದೆ ಆ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಇಲಾಖೆ ಅದರ ವಿರುದ್ದ ಮುಖ ಮಾಡಿರುವುದನ್ನು ತೋರುತ್ತಿದೆ. ಇದೊಂದು ಗಂಭೀರ ಅಪಾಯಕಾರಿ ಬೆಳವಣಿಗೆಯಾಗಿದೆ. ಇಂತಹ ವಿಚಾರದಲ್ಲಿ ಗೃಹ ಇಲಾಖೆಯ ಉನ್ನತ ಅಧಿಕಾರಿಗಳು ಮೌನವಾಗಿರುವುದು ತೀವ್ರ ಖಂಡನೀಯವಾಗಿದೆ. ಇದನ್ನು ಯಾರು? ಹೇಗೆ ಬೇಕಾದರೂ ಸಮರ್ಥಿಸಿಕೊಳ್ಳಬಹುದು ಆದರೇ ವಾಸ್ತವ ಮಾತ್ರ ಅದುವೇ ಆಗಿದೆ. ಈ ಎಲ್ಲ ಪ್ರಕರಣಗಳನ್ನು ಉಚ್ಚ ನ್ಯಾಯಾಲಯದ ಸುಪರ್ಧಿಯಲ್ಲಿ ನ್ಯಾಯಾಂಗ ತನಿಖೆಗೊಳಪಡಿಸಿ ಸಂವಿಧಾನ ರಕ್ಷಣೆಗೆ ಮತ್ತು ಕಾನೂನು ಸುವ್ಯವಸ್ಥೆಯ ಸಂರಕ್ಷಣೆಗೆ ಅಗತ್ಯ ಕ್ರಮವಹಿಸಬೇಕೆಂದು ಸಿಪಿಐ(ಎಂ) ಒತ್ತಾಯಿಸುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp