9 ವರ್ಷ ಪೂರೈಸಿದ ಮೋದಿ ಸರ್ಕಾರಕ್ಕೆ 9 ಪ್ರಶ್ನೆಗಳನ್ನು ಕೇಳಿದ ಕಾಂಗ್ರೆಸ್

Prasthutha|

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಒಂಬತ್ತು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಶುಕ್ರವಾರ 9 ಪ್ರಶ್ನೆಗಳನ್ನು ಕೇಳಿದೆ.

- Advertisement -

ದೇಶದಲ್ಲಿನ ಬೆಲೆ ಏರಿಕೆ, ನಿರುದ್ಯೋಗ ಮತ್ತು ರೈತರ ಆದಾಯದಂತಹ ವಿಷಯಗಳ ಕುರಿತು ಒಂಬತ್ತು ಪ್ರಶ್ನೆಗಳನ್ನು ಕೇಳಿರುವ ಕಾಂಗ್ರೆಸ್, ಮೋದಿ ತಮ್ಮ ಅಧಿಕಾರಾವಧಿಯಲ್ಲಿ ಮಾಡಿದ ದ್ರೋಹಕ್ಕೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದೆ. ಸರ್ಕಾರವು ಈ ದಿನವನ್ನು ‘ಮಾಫಿ ದಿವಸ್’ ಎಂದು ಗುರುತಿಸಬೇಕು ಎಂದು ವಿಪಕ್ಷ ಹೇಳಿದೆ.

ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ದೇಶದಲ್ಲಿನ ಸಮಸ್ಯೆಗಳನ್ನು ಎತ್ತಿದ್ದರು. ಒಂಬತ್ತು ಪ್ರಶ್ನೆಗಳು ಇದನ್ನು ಆಧರಿಸಿವೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಸಂವಹನದ ಉಸ್ತುವಾರಿ ಜೈರಾಮ್ ರಮೇಶ್ ಹೇಳಿದ್ದಾರೆ. ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

- Advertisement -

ಪಕ್ಷದ ನಾಯಕರಾದ ಪವನ್ ಖೇರಾ ಮತ್ತು ಸುಪ್ರಿಯಾ ಶ್ರೀನಾತೆ ಈ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 ‘ನೌ ಸಾಲ್, ನೌ ಸಾವಾಲ್’ (9 ವರ್ಷ, ಒಂಬತ್ತು ಪ್ರಶ್ನೆ) ಎಂಬ ಕಿರುಪುಸ್ತಕವನ್ನು ಬಿಡುಗಡೆ ಮಾಡಿದ ಜೈರಾಮ್ ರಮೇಶ್, ಒಂಬತ್ತು ವರ್ಷಗಳ ಹಿಂದೆ ಇದೇ ದಿನ ಪ್ರಧಾನಿ ಮೋದಿ ಅವರು ಪ್ರಧಾನಿಯಾಗಿದ್ದರು. ಆದ್ದರಿಂದ ಪಕ್ಷವು ಒಂಬತ್ತು ಪ್ರಶ್ನೆಗಳನ್ನು ಕೇಳಲು ಬಯಸುತ್ತದೆ ಎಂದು ಹೇಳಿದರು.

ಈ ಒಂಬತ್ತು ಪ್ರಶ್ನೆಗಳ ಬಗ್ಗೆ ಪ್ರಧಾನಿ ಮೌನ ಮುರಿಯಬೇಕೆಂದು ನಾವು ಬಯಸುತ್ತೇವೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಪ್ರಧಾನಿಗೆ ಪ್ರಶ್ನೆಗಳನ್ನು ಮುಂದಿಟ್ಟ ಅವರು, ಭಾರತದಲ್ಲಿ ಹಣದುಬ್ಬರ ಮತ್ತು ನಿರುದ್ಯೋಗ ಏಕೆ ಗಗನಕ್ಕೇರುತ್ತಿದೆ? ಶ್ರೀಮಂತರು ಏಕೆ ಶ್ರೀಮಂತರು ಮತ್ತು ಬಡವರು ಬಡವರಾಗಿಯೇ ಇದ್ದಾರೆ? ಆರ್ಥಿಕ ಅಸಮಾನತೆಗಳು ಹೆಚ್ಚುತ್ತಿದ್ದರೂ ಸಾರ್ವಜನಿಕ ಆಸ್ತಿಯನ್ನು ಪ್ರಧಾನಿ ಮೋದಿಯವರ ಸ್ನೇಹಿತರಿಗೆ ಮಾರಾಟ ಮಾಡುತ್ತಿರುವುದೇಕೆ? ಮೂರು ಕಪ್ಪು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಾಗ ರೈತರೊಂದಿಗೆ ಮಾಡಿಕೊಂಡ ಒಪ್ಪಂದಗಳನ್ನು ಏಕೆ ಗೌರವಿಸಲಾಗಿಲ್ಲ? ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧವಾಗಿ ಏಕೆ ಖಾತರಿಪಡಿಸಲಾಗಿಲ್ಲ? ಕಳೆದ ಒಂಬತ್ತು ವರ್ಷಗಳಿಂದ ರೈತರ ಆದಾಯ ಏಕೆ ದ್ವಿಗುಣಗೊಂಡಿಲ್ಲ ?ಎಂದು ಕೇಳಿದ್ದಾರೆ.

ಸರ್ಕಾರವು ಭ್ರಷ್ಟಾಚಾರ ಮತ್ತು ಕ್ರೋನಿಸಂನಲ್ಲಿ ತೊಡಗಿದೆ ಎಂದು ಆರೋಪಿಸಿದ ರಮೇಶ್, ಪ್ರಧಾನಿ ಮೋದಿ “ಸ್ನೇಹಿತ” ಅದಾನಿ ಲಾಭಕ್ಕಾಗಿ ಎಲ್ಐಸಿ ಮತ್ತು ಎಸ್ಬಿಐನಲ್ಲಿ ಜನರು ಕಷ್ಟಪಟ್ಟು ಸಂಪಾದಿಸಿದ ಉಳಿತಾಯವನ್ನು ಯಾಕೆ ಅಪಾಯಕ್ಕೆ ತಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದರು. ಕಳ್ಳರನ್ನು ತಪ್ಪಿಸಿಕೊಳ್ಳಲು ಏಕೆ ಬಿಡುತ್ತಿದ್ದೀರಿ? ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ವ್ಯಾಪಕವಾದ ಭ್ರಷ್ಟಾಚಾರದ ಬಗ್ಗೆ ನೀವು ಏಕೆ ಮೌನವಾಗಿದ್ದೀರಿ ಮತ್ತು ಭಾರತೀಯರನ್ನು ಏಕೆ ಕಷ್ಟಪಡಲು ಬಿಡುತ್ತಿದ್ದೀರಿ” ಎಂದು ಅವರು ಪ್ರಶ್ನಿಸಿದರು.

ರಾಷ್ಟ್ರೀಯ ಭದ್ರತೆಯ ವಿಷಯದ ಕುರಿತು ಮಾತನಾಡಿದ ಜೈರಾಮ್ ರಮೇಶ್ ಅವರು, 2020 ರಲ್ಲಿ ಚೀನಾಕ್ಕೆ ಕ್ಲೀನ್ ಚಿಟ್ ನೀಡಿದ ನಂತರವೂ ಅವರು ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಳ್ಳುವುದನ್ನು ಏಕೆ ಮುಂದುವರಿಸಿದ್ದಾರೆ ಎಂಬ ಪ್ರಶ್ನಿಸಿದ್ದಾರೆ. ಚುನಾವಣಾ ಲಾಭಕ್ಕಾಗಿ ಉದ್ದೇಶಪೂರ್ವಕ “ದ್ವೇಷದ ರಾಜಕೀಯ” ವನ್ನು ಏಕೆ ಬಳಸಲಾಗುತ್ತಿದೆ ಎಂದು ಕೇಳಿದ ಅವರು ಸಮಾಜದಲ್ಲಿ ಭಯದ ವಾತಾವರಣವನ್ನು ಹೆಚ್ಚಿಸಲಾಗುತ್ತಿದೆ ಎಂದು ಆರೋಪಿಸಿದರು.

ಮಹಿಳೆಯರು, ದಲಿತರು, ಎಸ್ಸಿ, ಎಸ್ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳ ಬಗ್ಗೆ ನೀವು ಏಕೆ ಮೌನವಾಗಿದ್ದೀರಿ? ಜಾತಿ ಗಣತಿಯ ಬೇಡಿಕೆಯನ್ನು ನೀವು ಏಕೆ ನಿರ್ಲಕ್ಷಿಸುತ್ತಿದ್ದೀರಿ ಎಂದು ಕೇಳಿದ್ದಾರೆ. ಅದೇ ವೇಳೆ ಪ್ರಜಾಪ್ರಭುತ್ವ ಮತ್ತು ಒಕ್ಕೂಟದ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿದ ಅವರು, ಕಳೆದ ಒಂಬತ್ತು ವರ್ಷಗಳಲ್ಲಿ ನಮ್ಮ ಸಾಂವಿಧಾನಿಕ ಮೌಲ್ಯಗಳು ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ದುರ್ಬಲಗೊಳಿಸಿದೆ ಎಂದು ಆರೋಪಿಸಿದರು.

ಕಳೆದ ಒಂಬತ್ತು ವರ್ಷಗಳಲ್ಲಿ ಸರ್ಕಾರ ನೀಡಿದ ಭರವಸೆಗಳು ವಾಸ್ತವದಿಂದ ದೂರವಾಗಿವೆ ಎಂದು ಪವನ್ ಖೇರಾ ಆರೋಪಿಸಿದ್ದಾರೆ.

ನಾವು ಉತ್ತರಗಳನ್ನು ಕೇಳಿದಾಗ, ನಮ್ಮನ್ನು 900 ವರ್ಷಗಳ ಹಿಂದೆ ಕರೆದೊಯ್ಯಬೇಡಿ. ಕಳೆದ ಒಂಬತ್ತು ವರ್ಷಗಳಲ್ಲಿ ನೀವು ಏನು ಮಾಡಿದ್ದೀರಿ ಎಂದು ಎಲ್ಲರೂ ತಿಳಿದುಕೊಳ್ಳಲು ಬಯಸುತ್ತಾರೆ. ಕಳೆದ ಒಂಬತ್ತು ವರ್ಷಗಳಲ್ಲಿ ನೀವು ಮಾಡಿದ ದ್ರೋಹಕ್ಕೆ ಮುಂದಿನ 5ದಿನಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಕ್ಷಮೆಯಾಚಿಸಲು ನಾವು ನಿಮ್ಮನ್ನು (ಪ್ರಧಾನಿ) ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ.

ವಿರೋಧ ಪಕ್ಷಗಳು ಮತ್ತು ನಾಯಕರ ವಿರುದ್ಧ ಸೇಡಿನ ರಾಜಕಾರಣವನ್ನು ಏಕೆ ಮಾಡುತ್ತಿದ್ದೀರಿ? ಜನರಿಂದ ಆಯ್ಕೆಯಾದ ಸರ್ಕಾರಗಳನ್ನು ಅಸ್ಥಿರಗೊಳಿಸಲು ಹಣದ ಬಲವನ್ನು ಏಕೆ ಬಳಸುತ್ತಿದ್ದೀರಿ? ಎಂದು ಕೇಳಿದ ಜೈರಾಮ್ ರಮೇಶ್ ಬಡವರು, ನಿರ್ಗತಿಕರು ಮತ್ತು ಬುಡಕಟ್ಟು ಜನಾಂಗದವರ ಕಲ್ಯಾಣಕ್ಕಾಗಿ ಸರ್ಕಾರವು ಅವರ ಬಜೆಟ್ನಲ್ಲಿ ಕಡಿತಗೊಳಿಸಿ ನಿರ್ಬಂಧಿತ ನಿಯಮಗಳನ್ನು ರೂಪಿಸುವ ಮೂಲಕ ಯೋಜನೆಗಳನ್ನು ದುರ್ಬಲಗೊಳಿಸಿದೆ ಎಂದು ಅವರು ಆರೋಪಿಸಿದರು.

ಕೋವಿಡ್ನಿಂದಾಗಿ 40 ಲಕ್ಷಕ್ಕೂ ಹೆಚ್ಚು ಜನರ ದುರಂತ ಸಾವುಗಳ ಹೊರತಾಗಿಯೂ, ಅವರ ಕುಟುಂಬಗಳಿಗೆ ಪರಿಹಾರ ನೀಡಲು ಮೋದಿ ಸರ್ಕಾರ ನಿರಾಕರಿಸಿದ್ದು ಯಾಕೆ? ನೀವು ದಿಢೀರ್ ಆಗಿ ಲಾಕ್ ಡೌನ್ ಘೋಷಿಸಿ ಲಕ್ಷಗಟ್ಟಲೆ ಕಾರ್ಮಿಕರು ಮನೆಗೆ ಮರಳುವಂತೆ ಮಾಡಿದಿರಿ. ಅವರಿಗೆ ಏನಾದರೂ ಸಹಾಯ ನೀಡಿದ್ದೀರಾ ಎಂದು ರಮೇಶ್ ಪ್ರಶ್ನೆ ಕೇಳಿದ್ದಾರೆ.



Join Whatsapp