ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು ಕ್ಯಾಲೆಂಡರಿನಲ್ಲಿ ಹಿಜಾಬ್ ಗೆ ಅವಕಾಶವಿದೆಯೆಂಬ ಸ್ಪಷ್ಟ ಉಲ್ಲೇಖ !

Prasthutha|

ಹಿಜಾಬ್ ನಿಷೇಧಕ್ಕೆ ಸರಕಾರವೇ ಷಡ್ಯಂತ್ರ ನಡೆಸುತ್ತಿದೆಯೇ?

- Advertisement -

ಉಡುಪಿ: ಇತ್ತೀಚೆಗೆ ಉಡುಪಿ ಮತ್ತು ಕುಂದಾಪುರದಲ್ಲಿ ತಲೆದೋರಿರುವ ಹಿಜಾಬ್, ಕೇಸರಿ ಶಾಲು ಸಂಘರ್ಷ ತಾರತಕ್ಕೇರಿದ್ದು, ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರು ಈ ಹಿಂದಿನಿಂದಲೂ ಹಿಜಾಬ್ ಧರಿಸಿ ತರಗತಿಗೆ ಆಗಮಿಸಿದ ವಿದ್ಯಾರ್ಥಿನಿಯರನ್ನು ಏಕಾಏಕಿ ಗೇಟ್ ನಲ್ಲಿಯೇ ತಡೆದು ನಿಲ್ಲಿಸಿದ್ದರು. ಹಿಜಾಬ್ ವಿಚಾರವನ್ನು ವಿವಾದ ಸೃಷ್ಟಿಸಲೆಂದೇ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡ ಬಂದು ಈ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿದ್ದರು.

ಈ ಮಧ್ಯೆ 2021 – 2022 ಶೈಕ್ಷಣಿಕ ಸಾಲಿನಲ್ಲಿ ಸರ್ಕಾರದಿಂದ ಮುದ್ರಣಗೊಂಡ ಕಾಲೇಜಿನ ಕ್ಯಾಲೆಂಡರ್ ಅಥವಾ ಡೈರಿಯಲ್ಲಿ ಕಾಲೇಜು ಸಮವಸ್ತ್ರಕ್ಕೆ ಹೊಂದಾಣಿಕೆ ಆಗುವ ಬಣ್ಣದ ಹಿಜಾಬ್ ಗೆ ಅನುಮತಿ ನೀಡಲಾಗಿದೆ ಎಂಬ ನಿಯಮವನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಸರ್ಕಾರದ ಅಧೀನದಲ್ಲಿ ಮುದ್ರಣಗೊಂಡ ಡೈರಿಯಲ್ಲಿ ಹಿಜಾಬ್ ಗೆ ಅವಕಾಶ ನೀಡಲಾಗಿದ್ದರೂ ಏಕಾಏಕಿ ಸರ್ಕಾರ ಯಾರದೋ ಒತ್ತಡಕ್ಕೆ ಮಣಿದು ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿ ಹಿಜಾಬ್ ಅವಕಾಶ ನಿರಾಕರಿಸಿರುವುದು ಯಾಕೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿವೆ.

- Advertisement -

ಈ ಕುರಿತು ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸರ್ಕಾರ ಹಿಜಾಬ್ ಗೆ ಅವಕಾಶ ನೀಡಿರುವುದು ಸ್ಪಷ್ಟವಾಗಿ ಗೋಚರಿಸಿದೆ.

ಈ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಹಿಜಾಬ್ ವಿಚಾರವನ್ನು ವಿವಾದ ಮಾಡಲೆಂದೇ ಸರ್ಕಾರವೇ ಷಡ್ಯಂತ್ರ ರೂಪಿಸಿದೆಯೇ ಎಂಬ ಅನುಮಾನವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ. ಫ್ಯಾಶಿಸ್ಟ್ ಅಜೆಂಡಾವನ್ನು ಜಾರಿಗೊಳಿಸುವ ಬಿಜೆಪಿಯ ಯೋಜನೆಯನ್ನು ಸರ್ಕಾರದ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ ಎಂಬ ಆರೋಪವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ. ಈ ಮೂಲಕ ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕನ್ನು ಮೊಟಕುಗೊಳಿಸುವ ಮತ್ತು ಅಲ್ಪಸಂಖ್ಯಾತರನ್ನು ಹೆಣೆಯುವ ಫ್ಯಾಶಿಸ್ಟ್ ಅಜೆಂಡಾವನ್ನು ಒಂದೊಂದಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಲಾಗಿದೆ.

Join Whatsapp