ಚಿಕ್ಕಮಗಳೂರು: ಸೂಕ್ಷ್ಮ ಗಡಿ ಪ್ರದೇಶ ಕೊಟ್ಟಿಗೆಹಾರಕ್ಕೆ ಯೂನಿವರ್ಸಲ್ ಚೆಕ್ ಪೋಸ್ಟ್ ಗೆ ಚಿಂತನೆ

Prasthutha|

ಕೊಟ್ಟಿಗೆಹಾರ: ಕೊಟ್ಟಿಗೆಹಾರದಲ್ಲಿ ಯುನಿವರ್ಸಲ್ ಚೆಕ್ ಪೋಸ್ಟ್ ನಿರ್ಮಾಣಕ್ಕೆ ಚಿಂತನೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹೇಳಿದರು.

- Advertisement -

ಕೊಟ್ಟಿಗೆಹಾರದ ಚೆಕ್ ಪೋಸ್ಟ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು ಅರಣ್ಯ ಇಲಾಖೆ,  ಪೊಲೀಸ್ ಇಲಾಖೆ,  ಕೃಷಿ ಉತ್ಪನ್ನಗಳ ತನಿಖಾ ಠಾಣೆ ಎಲ್ಲವೂ  ಒಂದೇ ಕಡೆ ಕಾರ್ಯನಿರ್ವಹಿಸುವಂತೆ ಯೂನಿವರ್ಸಲ್  ಚೆಕ್ ಪೋಸ್ಟ್  ನಿರ್ಮಿಸಲು ಚಿಂತನೆ ನಡೆಸಲಾಗುವುದು. ಕೊಟ್ಟಿಗೆಹಾರದಲ್ಲಿ ಪೊಲೀಸ್ ಇಲಾಖೆ ಜಿಲ್ಲಾಡಳಿತ ಹಾಗೂ ಸ್ಥಳೀಯ ವರ್ತಕರ ಸಹಕಾರದಿಂದ ಸಿಸಿ ಕ್ಯಾಮೆರಾ ಅಳವಡಿಸಲು  ಉದ್ದೇಶಿಸಲಾಗಿದೆ. ಸ್ಥಳೀಯ ವರ್ತಕರ  ಪಾಲುದಾರಿಕೆ ಇದ್ದರೆ ಸಿ ಸಿ ಕ್ಯಾಮರಾದ ಬಗ್ಗೆ ಮುತುವರ್ಜಿ ವಹಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಚಾರ್ಮಾಡಿ ಘಾಟ್ ನಲ್ಲಿ  ಈಗಾಗಲೇ ಪೊಲೀಸ್ ಗಸ್ತು ವಾಹನ ಸಂಚರಿಸುತ್ತಿದ್ದು , ಇದನ್ನು ಮತ್ತಷ್ಟು ಹೆಚ್ಚಿಸುವಂತೆ ವೃತ್ತನಿರೀಕ್ಷಕ ಸೋಮಶೇಖರ್ ಅವರಿಗೆ ಸೂಚಿಸಿದರು. ಕಳೆದ ಕೆಲ ದಿನಗಳ ಹಿಂದೆ ಚಾರ್ಮಾಡಿ ಘಾಟ್ ನಲ್ಲಿ ದರೋಡೆ  ನಡೆದ ಕೇವಲ 10 ಗಂಟೆಗೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

- Advertisement -

ಈ ಸಂದರ್ಭದಲ್ಲಿ ಮಾತನಾಡಿದ  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು, ಚಾರ್ಮಾಡಿ ಘಾಟ್ ನ ರಸ್ತೆ ಬದಿ ಕೆಲವು ಶೆಡ್ ಗಳು ಹಾಕಿ ಅಂಗಡಿ, ಕ್ಯಾಂಟೀನ್ ನಡೆಸುತ್ತಿರುವುದು ಗಮನಕ್ಕೆ ಬಂದಿದ್ದು, ಶೀಘ್ರದಲ್ಲೇ  ರಾಷ್ಟ್ರೀಯ ಹೆದ್ದಾರಿ  ಅಧಿಕಾರಿಗಳ  ಜೊತೆ ಮಾತನಾಡಿ ಅವುಗಳನ್ನು ತೆರವುಗೊಳಿಸಲಾಗುವುದು ಎಂದು ಹೇಳಿದರು.

ತಾಲೂಕು ಪಂಚಾಯಿತಿ  ಕಾರ್ಯನಿರ್ವಹಣಾಧಿಕಾರಿ ಹರ್ಷಕುಮಾರ್ ಕೆ, ತಾಲೂಕು ಪಂಚಾಯಿತಿ ಸಹಾಯ ನಿರ್ದೇಶಕರಾದ ಪ್ರಕಾಶ್, ನೌಕರರ ಸಂಘದ ಪ್ರತಿನಿಧಿ ಪದ್ಮರಾಜ್, ಮೂಡಿಗೆರೆ ವೃತ್ತನಿರೀಕ್ಷಕ ಸೋಮಶೇಖರ್, ಬಣಕಲ್ ಠಾಣೆಯ ಪಿಎಸ್ಐ ಸತೀಶ್,  ಅರಣ್ಯ ರಕ್ಷಕ ವಿಜಯಕುಮಾರ್, ಪರಿಸರವಾದಿ ಸಂಜಯ್ ಗೌಡ ಕೊಟ್ಟಿಗೆಹಾರ, ಮುಂತಾದವರು ಪಾಲ್ಗೊಂಡಿದ್ದರು.

Join Whatsapp