‘ಚಹರೆಗಳೆಂದರೆ ಗಾಯಗಳೂ ಹೌದು’ ಪುಸ್ತಕ ಬಿಡುಗಡೆ

Prasthutha|

ಬೆಂಗಳೂರು: ಸಮುದಾಯಗಳ ಅಧ್ಯಯನವನ್ನು ಯಾವ ಕ್ರಮದಲ್ಲಿ ನೋಡಬೇಕು, ಅದರ ಹಿನ್ನೆಲೆಯೇನು, ಚರಿತ್ರೆಯೇನು, ಸಾಂಸ್ಕೃತಿಕ ಮಹತ್ವವೇನು, ಅದರ ಅನನ್ಯತೆಯೇನು, ಅದನ್ನು ಉಳಿಸಬೇಕಿರುವ ಬಗೆಯೇನು ಎಂಬುದನ್ನು ಸಾಧ್ಯಂತವಾಗಿ ವಿವರಿಸುವ ಕುರಿತು ಮಹತ್ವ ಪುಸ್ತಕವೊಂದು ಕನ್ನಡ ಲೋಕಕ್ಕೆ ಲಭಿಸಿದೆ ಎಂದು ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಹಿ ಚಿ ಬೋರಲಿಂಗಯ್ಯ ಅಭಿಪ್ರಾಯಪಟ್ಟಿದ್ದಾರೆ.

- Advertisement -


ಗೌರಿ ಮೀಡಿಯಾ ಟ್ರಸ್ಟ್ ಪ್ರಕಟಿಸಿರುವ, ಹಂಪಿ ವಿಶ್ವವಿದ್ಯಾಲಯದ ಪ್ರೊ. ಎ.ಎಸ್ ಪ್ರಭಾಕರ ಅವರ “ಚಹರೆಗಳೆಂದರೆ ಗಾಯಗಳೂ ಹೌದು”ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬುಡಕಟ್ಟುಗಳ ಕುರಿತು ಸಮಗ್ರ ವಿಚಾರಗಳು ಮತ್ತು ಪರಿಪೂರ್ಣ ದೃಷ್ಟಿಕೋನಕ್ಕಾಗಿ ಈ ಪುಸ್ತಕ ಓದಬೇಕು. ಇದರಿಂದ ಸಾಮಾಜಿಕ ಅಧ್ಯಯನಕ್ಕೆ ಹೊಸ ದಾರಿ ಸಿಗುತ್ತದೆ ಎಂದರು.
ನಮ್ಮ ಗ್ರಾಮೀಣ ಜನಪದ ಸಂಸ್ಕೃತಿ ಮತ್ತು ಅರಣ್ಯ ಬುಡಕಟ್ಟು ಸಂಸ್ಕೃತಿಗಿಂತ ಅಲೆಮಾರಿ ಸಂಸ್ಕೃತಿ ಭಿನ್ನವಾದ ಸಂಸ್ಕ್ರತಿಯಾಗಿದೆ.ಅದು ನಿರಂತರ ಪಯಣದ ಜೊತೆ ಅಪಾರವಾದ ಜ್ಞಾನಭಂಡಾರ ತುಂಬಿಕೊಂಡ ಸಮುದಾಯ. ಭಾಷೆ ಮತ್ತು ಸಂಸ್ಕತಿಯ ನಡುವಿನ ಕೊಂಡಿಯಾಗಿ ಅದು ಕೆಲಸ ಮಾಡುತ್ತಿದೆ. ನಮ್ಮ ದೇಸಿಯ ಚಿಂತನೆ ಪಟ್ಟಭದ್ರ ಚಿಂತನೆಗೆ ಅಂಟಿಕೊಳ್ಳುವ ಕಾಲದಲ್ಲಿ ಸಂಸ್ಕೃತಿ ಅಂದರೆ ಹೀಗಿದೆ ಎಂಬುದನ್ನು ಅದೇ ಸಮುದಾಯದ ಒಳಗಿನಿಂದ ಬಂದ ಪ್ರಭಾಕರ್ ರವರು ಹೃದಯದಿಂದ ಉಕ್ಕುವ ಸಾಹಿತ್ಯದ ರೀತಿ ಬರೆದಿದ್ದಾರೆ. ವೈಚಾರಿಕತೆ ಮತ್ತು ಪ್ರತಿಭೆಯನ್ನು ಬಸಿದು ಕಥನ ಕಟ್ಟಿದ್ದು, ಇಂದಿನ ವಿಷಮ ರಾಜಕೀಯ ಪರಿಸ್ಥಿತಿಯಲ್ಲಿ ಈ ಬರಹಗಳು ಅಗತ್ಯ ಎಂದರು.

ಕುವೆಂಪು ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಪ್ರಶಾಂತ್ ನಾಯಕ್ ಪುಸ್ತಕದ ಬಗ್ಗೆ ಮಾತನಾಡಿ “ಈ ಪುಸ್ತಕವು ಕಥನದ ದಾಟಿಯಲ್ಲಿದೆ. ಆದರೆ ವರ್ಣನೆ ಅಲ್ಲ. ವ್ಯಾಖ್ಯಾನವೂ ಅಲ್ಲ. ಇದು ಕೇವಲ ವಿಮರ್ಶೆ ಅಲ್ಲ ಆದರೆ ಎಚ್ಚರ, ಪ್ರಜ್ಞೆಯನ್ನು ಒಳಗೊಂಡಿದೆ. ಕಾವ್ಯ ಅಲ್ಲ, ಕಥನ ಅಲ್ಲ, ಎಲ್ಲವೂ ಹೌದು, ಎಲ್ಲಾ ಲಕ್ಷಣಗಳನ್ನು ಒಳಗೊಂಡಿರುವ ವಿಶಿಷ್ಟ ಕೃತಿ” ಎಂದರು.
ಪುಸ್ತಕದ ಶೀರ್ಷಿಕೆ ಬಹಳ ಅರ್ಥಗರ್ಭಿತವಾಗಿದೆ. ಚಹರೆ ಎಂದರೆ ಗುರುತಿಸುವಿಕೆ, ಅಸ್ತಿತ್ವ, ರೂಪುರೇಷೆ, ಸ್ವರೂಪ ಇತ್ಯಾದಿ ಅರ್ಥಗಳು ಬರುತ್ತವೆ. ಆದರೆ ಪ್ರಭಾಕರ್ರವರು ಅದಕ್ಕೆ ಗಾಯಗಳೂ ಹೌದು ಎಂಬ ಹೊಸ ಅರ್ಥವನ್ನು ನೀಡಿದ್ದಾರೆ. ಅಂತರಂಗದ ದನಿ ಇದು. ಅಂದರೆ ಜನಸಮುದಾಯಗಳ ಸಹಜವಾದ ಬದುಕು ಹತ್ತಿಕ್ಕಲ್ಪಟ್ಟಿದೆ. ಹಾಗಾದರೆ ಈ ಗಾಯ ಮಾಡಿದವರು ಯಾರು? ನಾವು, ಅಂದರೆ ‘ನಾಗರಿಕ, ಆಧುನಿಕ ಎಂದು ಕರೆಸಿಕೊಳ್ಳುವವರ ಅದಕ್ಕೆ ಕಾರಣ ಎನ್ನುವ ಎಚ್ಚರದಿಂದ, ಆತ್ಮಾವಲೋಕನ ಈ ಕೃತಿಯಲ್ಲಿದೆ. ಇಲ್ಲಿ ಅವರ ನೆಲಮೂಲದ ಪ್ರಜ್ಞೆ ಇದೆ. ನಿಜದ ಮಣ್ಣಿನ ಮಕ್ಕಳು ಅವರು ಎಂಬ ದೃಡೀಕರಣವಿದೆ. ಇದು ಗಾಯಗಳು ಹೌದು ಎನ್ನುತ್ತಿರುವಾಗ ಅವರು ಅನುಸಂಧಾನ ಮಾಡುತ್ತಿದ್ದಾರೆ ಎಂದರು.
ಸಮುದಾಯದ ಈ ಗಾಯಗಳಿಗೆ ಔಷಧೋಪಚಾರ ಮಾಡಲು ಯಾರೂ ಮುಂದಾಗಿಲ್ಲ. ಅದರ ಪ್ರಯತ್ನವೇ ಈ ಅಧ್ಯಯನ ಪುಸ್ತಕವಾಗಿದೆ. ಇದೊಂದು ಕೇವಲ ಪುಸ್ತಕವಲ್ಲ. ಪುಸ್ತಕ ಬೇರೆ, ಕಲಾಕೃತಿ ಬೇರೆ. ಸಂಸ್ಕ್ರತಿ ಕಥನ ಕೃತಿಯೊಂದು ಕಲಾಕೃತಿಯಾಗುವ ಪರಿ ಲೇಖಕನ ಬದ್ಧತೆಯ ಮೇಲೆ ನಿಂತಿರುತ್ತದೆ. ಅದನ್ನು ಎ.ಎಸ್ ಪ್ರಭಾಕರ್ ಇಲ್ಲಿ ನಿರೂಪಿಸಿದ್ದಾರೆ ಎಂದರು.
ಸಬಾಲ್ಟ್ರನ್ ಸ್ಟಡಿ, ಸಂಸ್ಕೃತಿಯ ಅಧ್ಯಯನ ಕೇವಲ ಘೋಷಣೆಗಳಾಗಿರುವ ಸಂದರ್ಭದಲ್ಲಿ ನಮ್ಮ ವಿಶ್ವ ವಿದ್ಯಾಲಯಗಳ ಸಮುದಾಯ ಅಧ್ಯಯನ ವಿಧಾನದಲ್ಲಿಯೇ ಸಮಸ್ಯೆಯಿದೆಯೇ ಎಂಬ ಪ್ರಶ್ನೆ ಎದುರಾಗುತ್ತದೆ. ಆದರೆ ಎ.ಎಸ್ ಪ್ರಭಾಕರ್ರವರ ಶ್ರಮ ಮತ್ತು ಬದ್ಧತೆಯಿಂದ ಈ ಪುಸ್ತಕವು ಸಮುದಾಯ ಕಥನಗಳು ಸಾರ್ಥಕತೆಯಾಗುವುದನ್ನು ನಿರೂಪಿಸಿವೆ. ಇಲ್ಲಿ ಸಮುದಾಯಗಳ ಕುರಿತು ನೆಹರು, ಅಂಬೇಡ್ಕರ್, ಮಹಾಶ್ವೇತಾದೇವಿಯವರ ಚಿಂತನೆಗಳಿವೆ ಎಂದರು.

- Advertisement -

ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಸಚಿವರಾದ (ಮೌಲ್ಯಮಾಪನ) ಪ್ರೊ. ಜಿ. ರಮೇಶ್ ಮತ್ತು ಜೇನುಕುರುಬರ ಸೋಮಣ್ಣ ಮಾತನಾಡಿದರು. ಗೌರಿ ಮೀಡಿಯಾ ಟ್ರಸ್ಟ್ ಅಧ್ಯಕ್ಷರಾದ ಡಿ ಎಂ ನರಸಿಂಹಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಲೇಖಕರಾದ ಡಾ. ಎ ಎಸ್ ಪ್ರಭಾಕರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಜೇನುಕುರುಬರ ಸೋಮಣ್ಣನವರಿಗೆ ಸನ್ಮಾನ ಮಾಡಲಾಯಿತು.

Join Whatsapp