ಆಂಧ್ರದಿಂದ ಬೆಂಗಳೂರಿಗೆ ಗಾಂಜಾ ಪೂರೈಕೆ: ಇಬ್ಬರ ಬಂಧನ

Prasthutha|

ಬೆಂಗಳೂರು: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಿಂದ ನಗರಕ್ಕೆ ಗಾಂಜಾ ಸರಬರಾಜು ಮಾಡುತ್ತಿದ್ದ ಕಿಂಗ್ ಪಿನ್ ಸೇರಿ ಇಬ್ಬರು ಆರೋಪಿಗಳನ್ನು ನೆಲಮಂಗಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗಾಂಜಾ ಕಿಂಗ್ ಪಿನ್ ಆಂಧ್ರದ ರಾಮ್ ಪ್ರಸಾದ್ ಹಾಗೂ ನೆಲಮಂಗಲದ ಉಮೇಶ್ ಬಂಧಿತ ಆರೋಪಿಯಾಗಿದ್ದಾನೆ. ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಸೈಯದ್ ಪರಾರಿಯಾಗಿದ್ದು ಆತನ ಪತ್ತೆಗೆ ತೀವ್ರ ಶೋಧ ನಡೆಸಲಾಗಿದೆ.
ಬಂಧಿತರಿಂದ 53 ಕೆ.ಜಿ ಗಾಂಜಾ, 2 ಮೊಬೈಲ್, ಮಾರುತಿ ಕಾರು ಜಪ್ತಿ ಮಾಡಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಗ್ರಾಮಾಂತರ ಎಸ್ ಪಿ ವಂಶಿಕೃಷ್ಣ ತಿಳಿಸಿದ್ದಾರೆ.
ಗಾಂಜಾ ಪೆಡ್ಲರ್ಗಳು ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ಎಕರೆಗಟ್ಟಲೇ ಗಾಂಜಾ ಬೆಳೆದಿದ್ದರು.
ಗಾಂಜಾ ಸರಬರಾಜು ಮಾಡುತ್ತಿದ್ದ ಆರೋಪಿಗಳ ಬೆನ್ನತ್ತಿದ ಸರ್ಕಲ್ ಇನ್ಸ್ಪೆಕ್ಟರ್ ರಾಜೀವ್ ನೇತೃತ್ವದ ತ್ಯಾಮಗೊಂಡ್ಲು ಪೊಲೀಸರ ತಂಡ ಗಾಂಜಾ ಘಮಲು ಹಿಡಿದು ಪಶ್ಚಿಮ ಗೋದಾವರಿಗೆ ಹೋಗಿದ್ದ ವೇಳೆ ಗುಡ್ಡಗಾಡು ಪ್ರದೇಶದಲ್ಲಿ ಎಕರೆಗಟ್ಟಲೇ ಗಾಂಜಾ ಗದ್ದೆ ನೋಡಿ ಶಾಕ್ ಆಗಿದ್ದಾರೆ.
ಗೋದಾವರಿ ಜಿಲ್ಲೆಯಿಂದ ಗಾಂಜಾ ತರುತ್ತಿದ್ದ ಆರೋಪಿಗಳು, ಬೆಂಗಳೂರು ಗ್ರಾಮಾಂತರ, ನೆಲಮಂಗಲ , ಲಾರಿ ಸ್ಟಾಂಡ್ ಹಾಗೂ ಚಿಕ್ಕಬಳ್ಳಾಪುರ ಸೇರಿದಂತೆ ಹಲವೆಡೆ ಮಾರಾಟ ಮಾಡುತ್ತಿದ್ದರು. ಕಿಂಗ್ ಪಿನ್ ರಾಮ್ ಪ್ರಸಾದ್ ಮೂಲಕ ಉಮೇಶ್ ಹಾಗೂ ಸೈಯದ್ ಎಂಬುವವರು ಮಾರಾಟ ಮಾಡುತ್ತಿದ್ದು ತನಿಖೆಯನ್ನು ತೀವ್ರಗೊಳಿಸಲಾಗಿದೆ ಎಂದರು.

Join Whatsapp