ಧಾರ್ಮಿಕ ಟ್ಯಾಟೂ ಹಾಕಿದ್ದಕ್ಕೆ  ಸಶಸ್ತ್ರ ಪಡೆಯಲ್ಲಿ ಅವಕಾಶ ನಿರಾಕರಣೆ : ಹೈಕೋರ್ಟ್ ಮೊರೆ ಹೋದ ಅಭ್ಯರ್ಥಿ

Prasthutha|

ನವದೆಹಲಿ: ಬಲಗೈಯಲ್ಲಿ ಧಾರ್ಮಿಕ ಚಿಹ್ನೆಯ ಹಚ್ಚೆ ಹಾಕಿಸಿಕೊಂಡಿದ್ದ ಕಾರಣ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಮತ್ತು ಇತರ ರಕ್ಷಣಾ ಪಡೆಗಳ ನೇಮಕಾತಿಯಲ್ಲಿ ಅವಕಾಶ ಸಿಗದಿರುವುದನ್ನು ಪ್ರಶ್ನಿಸಿ ಅಭ್ಯರ್ಥಿಯೊಬ್ಬರು ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

- Advertisement -

ಈ ಕುರಿತ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೇತ್ ಮತ್ತು ಸೌರಭ್ ಬ್ಯಾನರ್ಜಿ ಅವರಿದ್ದ ಪೀಠವು, ಸಣ್ಣ ಲೇಸರ್ ಚಿಕಿತ್ಸೆಯ ಮೂಲಕ ಹಚ್ಚೆ ತೆಗೆಸಲು ಅರ್ಜಿದಾರರಿಗೆ ಸೂಚಿಸಿದೆ. ಅದಕ್ಕೆ ಅರ್ಜಿದಾರ ಒಪ್ಪಿಕೊಂಡಿರುವುದಾಗಿಯೂ, ಆತ ಸಮಗ್ರ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದು, ಆತನಲ್ಲಿ ಯಾವುದೇ ವೈದ್ಯಕೀಯ ದೋಷಗಳು ಕಂಡುಬಂದಿಲ್ಲವೆಂದು ಪರೀಕ್ಷಾ ವರದಿ ದೃಢಪಡಿಸಿದೆ ಎಂದು  ತಿಳಿಸಿದೆ.

ಬಲಗೈ ಸೆಲ್ಯೂಟ್ (ಗೌರವ ಸಲ್ಲಿಸಲು) ಮಾಡುವ ಕೈ ಆಗಿರುವುದರಿಂದ , ಗೃಹ ವ್ಯವಹಾರಗಳ ಸಚಿವಾಲಯದ ಮಾರ್ಗಸೂಚಿಗಳಡಿ ಬಲಗೈಗೆ ಹಚ್ಚೆ ಹಾಕಿಸಿಕೊಳ್ಳಲು ಅನುಮತಿ ಇಲ್ಲ ಎಂದು ಸಂಬಂಧಿಸಿದ ಇಲಾಖೆಗಳ ಪರ ವಕೀಲರು ವಾದಿಸಿದ್ದರು.

- Advertisement -

ಹಚ್ಚೆ ತೆಗೆಸಿಕೊಂಡ ನಂತರ ಸಂಬಂಧಿಸಿದ ಇಲಾಖೆಗಳು ರಚಿಸಿದ ಹೊಸ ವೈದ್ಯಕೀಯ ಮಂಡಳಿಯ ಎದುರು ಪರೀಕ್ಷೆಗೆ ಹಾಜರಾಗಲು ಅರ್ಜಿದಾರನಿಗೆ ಅವಕಾಶ ನೀಡಿ ನ್ಯಾಯಾಲಯ , ಅರ್ಜಿ ವಿಲೇವಾರಿ ಮಾಡಿದೆ.

ಎನ್ ಐಎ, ಎಸ್ಎಸ್ಎಫ್ ಮತ್ತು ಅಸ್ಸಾಂ ರೈಫಲ್ಸ್ ಪಡೆಯ ಜಿಡಿ ರೈಫಲ್ ಮನ್ ಪರೀಕ್ಷೆ ಮತ್ತು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ ಕಾನ್ ಸ್ಟೇಬಲ್ ಹುದ್ದೆಗಳಿಗೆ ಆಯ್ಕೆಯಾಗಿದ್ದ ಅಭ್ಯರ್ಥಿಯನ್ನು ಬಲಗೈ ಮೇಲೆ ಧಾರ್ಮಿಕ ಚಿಹ್ನೆಯ ಹಚ್ಚೆ ಇರುವ ಕಾರಣಕ್ಕೆ ವೈದ್ಯಕೀಯ ಪರೀಕ್ಷೆಯಲ್ಲಿ ಅನರ್ಹಗೊಳಿಸಲಾಗಿತ್ತು. ಅನರ್ಹಗೊಂಡಿದ್ದ ವೈದ್ಯಕೀಯ ವಿದ್ಯಾರ್ಥಿ ಎರಡು ವೈದ್ಯಕೀಯ ಪರೀಕ್ಷೆಗಳ ಫಲಿತಾಂಶಗಳನ್ನು ರದ್ದುಪಡಿಸಿ, ಹುದ್ದೆಗಳಿಗೆ ನೇಮಕ ಮಾಡುವಂತೆ  ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

Join Whatsapp