ಶೈಕ್ಷಣಿಕ ಸಮಸ್ಯೆ ಶೀಘ್ರ ಬಗೆಹರಿಸುವಂತೆ ಕ್ಯಾಂಪಸ್ ಫ್ರಂಟ್ ಒತ್ತಾಯ

Prasthutha|

ರಾಜ್ಯದಲ್ಲಿ ಶೈಕ್ಷಣಿಕ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಲಾಕ್ಡೌನ್ ಸಂದರ್ಭದಲ್ಲೂ ವಿದ್ಯಾರ್ಥಿಗಳು, ಶಿಕ್ಷಕರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಕ್ಯಾಂಪಸ್ ಫ್ರಂಟ್  ಒತ್ತಾಯಿಸಿದೆ.

- Advertisement -

ಮಂಗಳೂರಿನಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ  ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲ್ಕಟ್ಟೆ ಮಾತನಾಡಿ, ಲಾಕ್ಡೌನ್ನಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಹಲವು ಖಾಸಗಿ ಶಾಲಾ – ಕಾಲೇಜುಗಳು ಶುಲ್ಕ ಪಾವತಿಸಲು ಹೇಳಿ ಪೋಷಕರಿಗೆ ಮಾನಸಿಕ ಕಿರುಕುಳ ನೀಡುತ್ತಿವೆ. ಆರ್ಥಿಕ ಸಂಕಷ್ಟದ ಕಾರಣ ವಿದ್ಯಾರ್ಥಿಗಳು ಶುಲ್ಕ ಪಾವತಿಸದಿರುವುದರಿಂದ ಆನ್ಲೈನ್ ತರಗತಿಗಳಿಗೆ ಅನುಮತಿ ನಿರಾಕರಿಸುತ್ತಿದ್ದಾರೆ. ಶುಲ್ಕ ಪಾವತಿಸಲು ಹೆಚ್ಚಿನ ಸಮಯಾವಕಾಶವನ್ನು ನೀಡಬೇಕು ಹಾಗೂ ಆನ್ಲೈನ್ ತರಗತಿಗಳಿಗೆ ಅನುಮತಿ ನಿರಾಕರಿಸಿ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಚೆಲ್ಲಾಟವಾಡಬಾರದು. ಇಂತಹ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ನೋಟೀಸು ಜಾರಿಗೊಳಿಸಿ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದರು.

ಅರಿವು ಸಾಲ ಯೋಜನೆ ಹಾಗೂ ವಿದ್ಯಾರ್ಥಿ ವೇತನ ಮಂಜೂರಾಗದ ಹಿನ್ನೆಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಸಲು ಸಾಧ್ಯವಾಗಿಲ್ಲ. ವಿದ್ಯಾರ್ಥಿ ವೇತನವನ್ನೇ ನಂಬಿದ್ದ ವಿದ್ಯಾರ್ಥಿಗಳು ಆತಂಕಕ್ಕೆ ಸಿಲುಕಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದರೂ ಕಳೆದ ಸಲದ ವಿದ್ಯಾರ್ಥಿ ವೇತನ ಇನ್ನೂ ಹಲವು ವಿದ್ಯಾರ್ಥಿಗಳಿಗೆ ಮಂಜೂರಾಗಿಲ್ಲ. ಅದೇ ರೀತಿ ಅರಿವು ಸಾಲ ಯೋಜನೆಯ ಬಗ್ಗೆ ಇಲಾಖೆಯೇ ಮೌನ ವಹಿಸಿದಂತೆ ಕಂಡುಬರುತ್ತಿದೆ. ಸರ್ಕಾರವು ಆದಷ್ಟು ಶೀಘ್ರ ಈ ಸಮಸ್ಯೆಯನ್ನು ಬಗೆಹರಿಸಿ ಶೀಘ್ರ ಅರಿವು ಸಾಲ ಯೋಜನೆ ಹಾಗೂ ವಿದ್ಯಾರ್ಥಿ ವೇತನ ಮಂಜೂರು ಮಾಡಬೇಕು ಎಂದು ಅವರು ಆಗ್ರಹಿಸಿದರು.

- Advertisement -

ಸರ್ಕಾರ ಇತ್ತೀಚೆಗೆ ಘೋಷಿಸಿದ ಆರ್ಥಿಕ ಪ್ಯಾಕೇಜ್ನಲ್ಲಿ ಶಿಕ್ಷಕರು ಮತ್ತು ಶೈಕ್ಷಣಿಕ ವಲಯದಲ್ಲಿ ದುಡಿಯುತ್ತಿರುವವರಿಗೆ ಯಾವುದೇ ಅನುದಾನ ಮೀಸಲಿಟ್ಟಿಲ್ಲ. ಪ್ಯಾಕೇಜ್ ನಲ್ಲಿ ಶೈಕ್ಷಣಿಕ ವಲಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟಕ್ಕೀಡಾದವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಾಗ ಶಿಕ್ಷಕರನ್ನೂ ಪರಿಗಣಿಸಬೇಕಾಗಿತ್ತು, ದೇಶವನ್ನು ಅಜ್ಞಾನದ ಕತ್ತಲೆಯಿಂದ ಸುಜ್ಞಾನದ ಬೆಳಕಿನೆಡೆಗೆ ಕೊಂಡೊಯ್ಯುವ ಮಹತ್ತರವಾದ ಜವಾಬ್ದಾರಿ ನಿರ್ವಹಿಸುತ್ತಿರುವ ಬಹುತೇಕ ಶಿಕ್ಷಕರ ಬದುಕು ಇಂದು ಕತ್ತಲೆಯಲ್ಲಿದೆ. ಗುತ್ತಿಗೆ, ಅರೆಕಾಲಿಕ ನೇಮಕಾತಿಯ ಮೂಲಕ ಶಿಕ್ಷಕ ವೃತ್ತಿಗೆ ಆಯ್ಕೆಯಾದ ಶಿಕ್ಷಕರು ಸಿಗುತ್ತಿದ್ದ ಅಲ್ಪಸ್ವಲ್ಪ ವೇತನದಿಂದ ಸ್ವಾಭಿಮಾನದ ಜೀವನ ನಡೆಸುತ್ತಿದ್ದರು. ಆದರೆ ಲಾಕ್ಡೌನ್ ಸಂದರ್ಭದಲ್ಲಿ ಯಾವುದೇ ವೇತನವಿಲ್ಲದೆ ತಮ್ಮ ಅಳಲನ್ನು ಯಾರ ಬಳಿಯೂ ಹೇಳಲಾರದ ಸ್ಥಿತಿಯಲ್ಲಿದ್ದಾರೆ. ಸಮಾಜದ ವಿವಿಧ ಸ್ತರದ ಜನರಿಗೆ ಪ್ಯಾಕೇಜ್ಗಳನ್ನು ಘೋಷಿಸುವಾಗ ಕಷ್ಟದ ಜೀವನ ನಡೆಸುವ ಶಿಕ್ಷಕರನ್ನೂ ಪರಿಗಣಿಸುವ ಮೂಲಕ ಜ್ಞಾನದ ಬೆಳಕನ್ನು ಇನ್ನಷ್ಟು ಪ್ರಜ್ವಲಿಸುವಂತೆ ಮಾಡಬೇಕಾಗಿದೆ. ಶೀಘ್ರವಾಗಿ ರಾಜ್ಯ ಸರ್ಕಾರವು ಶಿಕ್ಷಕರಿಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕಾಗಿದೆ ಎಂದು ಅಥಾವುಲ್ಲಾ ಆಗ್ರಹಿಸಿದರು.

ರಾಜ್ಯದ ಅರೆವೈದ್ಯಕೀಯ ವಿಭಾಗಕ್ಕೆ ಸರ್ಕಾರದ ಅಧೀನದಲ್ಲಿ ಮಂಡಳಿ ಸ್ಥಾಪಿಸಿ; ರಾಜ್ಯದ ಅರೆವೈದ್ಯಕೀಯ ವಿಭಾಗಕ್ಕೆ ಸರ್ಕಾರದ ಅಧೀನದಲ್ಲಿ ಮಂಡಳಿ ಸ್ಥಾಪಿಸಬೇಕೆಂದು ಅರೆವೈದ್ಯಕೀಯ ವಿದ್ಯಾರ್ಥಿಗಳು ಹೋರಾಟ  ಪ್ರಾರಂಭಿಸಿದ್ದಾರೆ , ವೈದ್ಯಕೀಯ ಶಿಕ್ಷಣದ ಅವಿಭಾಜ್ಯ ಅಂಗವಾಗಿರುವ ಅರೆವೈದ್ಯಕೀಯ ಕೋರ್ಸ್ ಗೆ ಪ್ರತ್ಯೇಕವಾಗಿ ಸರಕಾರದ ಮಂಡಳಿ ಇಲ್ಲದ ಕಾರಣ ಅರೆವೈದ್ಯಕೀಯ ಪದವೀಧರರು ಮತ್ತು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಗಿದ ನಂತರ ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ. ರಾಜ್ಯದಲ್ಲಿ ವಿದ್ಯಾರ್ಥಿಗಳು ವಿವಿಧ ಕಾಲೇಜುಗಳಿಂದ ಪ್ರತಿ ವರ್ಷ ಬಹುದೊಡ್ಡ ಸಂಖ್ಯೆಯಲ್ಲಿ ಅರೆವೈದ್ಯಕೀಯ ಪದವಿಯನ್ನು ಪಡೆದು ತೇರ್ಗಡೆಯಾಗುತ್ತಾರೆ. ಆದರೆ, ಸರಕಾರದಿಂದ ಅಂಗೀಕೃತವಾದ ಅಧಿಕೃತ ಅರೆವೈದ್ಯಕೀಯ ಮಂಡಳಿ ಇಲ್ಲಿಯವರೆಗೂ ಸ್ಥಾಪನೆಯಾಗಿಲ್ಲ. ಹಲವು ಖಾಸಗಿ ನೋಂದಣಿಯಾದ ಸಂಸ್ಥೆಗಳಿದ್ದರೂ ಈಗ ಅದಕ್ಕೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಇಲ್ಲದೆ ಇರುವುದರಿಂದ ಅರೆವೈದ್ಯಕೀಯ ಪದವೀಧರರು ಉದ್ಯೋಗಕ್ಕಾಗಿ ಪರದಾಡುವಂತಾಗಿದೆ. ಅಂತರ್ ರಾಜ್ಯ ಹಾಗೂ ವಿದೇಶಗಳಲ್ಲಿ ಉದ್ಯೋಗ ಮಾಡುವ ಅವಕಾಶವು ಈಡೇರುತ್ತಿಲ್ಲ. ತಕ್ಷಣ ರಾಜ್ಯ ಸರಕಾರವು ವಿದ್ಯಾರ್ಥಿಗಳಿಗೆ, ಪದವೀಧರರಿಗೆ ಆಗುತ್ತಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಸರಕಾರದ ಅಧೀನದಲ್ಲಿ ಅರೆವೈದ್ಯಕೀಯ ಮಂಡಳಿ ಸ್ಥಾಪಿಸಬೇಕು ಎಂದು ಅವರು ಆಗ್ರಹಿಸಿದರು.

ಇದೇ ಶೈಕ್ಷಣಿಕ ವರ್ಷದಿಂದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಕುರಿತು ಉನ್ನತ ಶಿಕ್ಷಣ ಸಚಿವರು ನೀಡಿರುವ ಹೇಳಿಕೆಯು ಹಾಸ್ಯಾಸ್ಪದವಲ್ಲದೇ ಶಿಕ್ಷಣವನ್ನು ಕೇಸರಿಕರಣಗೊಳಿಸುವ ಹುನ್ನಾರವು ಆಗಿದೆ, ಹೊಸ ಶಿಕ್ಷಣ ನೀತಿಯಲ್ಲಿ ಕಿವಿಗೆ ತಂಪು ನೀಡುವಂತಿರುವ ಆಕರ್ಷಕವಿರುವ ಪೊಳ್ಳು ಮಾತುಗಳು ಕೇವಲ ಘೋಷಣೆಗಳಿಗೆ ಮಾತ್ರ ಸೀಮಿತವಾಗಿವೆ, ಅದನ್ನು ಕಾರ್ಯರೂಪಕ್ಕೆ ತರಬೇಕಾದರೆ ಅದಕ್ಕೆ ಸರಿಯಾದ ಪ್ರಾಯೋಗಿಕವಾಗಿ ವಾಸ್ತವಕ್ಕೆ ಪೂರಕವಾದ ಯೋಜನೆ ಇಲ್ಲ. ವಿಪರ್ಯಾಸವೆಂದರೆ ಉನ್ನತ ಶಿಕ್ಷಣ ಸಚಿವರು ಹೇಳಿರುವ ಹೇಳಿಕೆಯ ಪ್ರಕಾರ ಹೊಸ ಶಿಕ್ಷಣ ನೀತಿ ಜಾರಿಗೊಳಿಸಲಿಕ್ಕೆ ಬೇಕಾಗುವ ಹಣದ ವೆಚ್ಚಕ್ಕೆ ಮತ್ತೆ ಬಜೆಟ್ ನಲ್ಲಿ ರಾಜ್ಯ ಸರಕಾರ ಶಿಕ್ಷಣ ಇಲಾಖೆಗೆ ಮೀಸಲಿಟ್ಟ ಹಣದ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಇದೆಲ್ಲವೂ ಮೀರಿ ಹೊಸ ಶಿಕ್ಷಣ ನೀತಿಯು ಜಾತ್ಯತೀತ ತತ್ವಗಳನ್ನು ನಾಶಪಡಿಸಲಿಕ್ಕೆ ಬೇಕಾಗಿ ಮಾಡಿರುವ ಸಂಘಪರಿವಾರದ ಶಾಖೆಯಲ್ಲಿ ವಿನ್ಯಾಸಗೊಳಿಸಿದ ಕರಡು ಪ್ರತಿಯಾಗಿದೆ. ಶಿಕ್ಷಣವನ್ನು ಕೇಸರಿಕರಣಗೊಳಿಸುವ ದೃಷ್ಟಿಕೋನವನ್ನಿಟ್ಟುಕೊಂಡು ದೇಶಕ್ಕೆ ಮಾರಕವಾಗಿರುವ ಹಿಂದುತ್ವ ಸಿದ್ಧಾಂತವನ್ನು ಶಾಲಾ ಕಾಲೇಜುಗಳಲ್ಲಿ ಕಾರ್ಯಗತಗೊಳಿಸಲು ರಾಜ್ಯ ಬಿಜೆಪಿ ಸರಕಾರ ಈ ಹೀನ ಕೃತ್ತ್ಯಕ್ಕೆ ಕೈ ಹಾಕುತ್ತಿದೆ, ಇದನ್ನು ಕ್ಯಾಂಪಸ್ ಫ್ರಂಟ್ ಯಾವ ಕಾರಣಕ್ಕೂ ಸಹಿಸುವುದಿಲ್ಲ. ರಾಜ್ಯದ ಶಿಕ್ಷಣ ವ್ಯವಸ್ಥೆಯು ಸಂವಿಧಾನದ ಆಶಯಗಳ ತಳಹದಿಯ ಮೇಲೆ ನಡೆಯುತ್ತದೆಯೇ ಹೊರತು ಹಿಂದುತ್ವದಿಂದ ಅಡಿಯಲ್ಲಿ ಅಲ್ಲ ಎಂಬುದನ್ನು ಬಿಜೆಪಿ ಸರಕಾರಕ್ಕೆ ಗೊತ್ತಿರಲಿ. ಈ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ಮುಂದಾದರೆ ಎಲ್ಲಾ ಬಗೆಯ ಹೋರಾಟದ ಮೂಲಕ ಇದನ್ನು ಪ್ರತಿರೋಧಿಸಲು ಕ್ಯಾಂಪಸ್ ಸನ್ನದ್ದವಾಗಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯರಾದ ಸಾಧಿಕ್ ಜಾರತ್ತಾರು, ಜಿಲ್ಲಾ ಮುಖಂಡರಾದ ಸಿರಾಜ್ ಮಂಗಳೂರು, ಇಮ್ರಾನ್ ಪಾಂಡವರಕಲ್ಲು ಮತ್ತು ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಸರಫುದ್ದೀನ್ ಉಪಸ್ಥಿತರಿದ್ದರು.

Join Whatsapp