ಉದ್ಯಮಿ ಪ್ರದೀಪ್ ಆತ್ಮಹತ್ಯೆ: ಮೂರು ಡೆತ್ ನೋಟ್ ಪತ್ತೆ, ಬಿಜೆಪಿ ಶಾಸಕ ಲಿಂಬಾವಳಿಗೆ ನೋಟೀಸ್

Prasthutha|

ಬೆಂಗಳೂರು: ಕಗ್ಗಲಿಪುರದಲ್ಲಿ ಉದ್ಯಮಿ ಪ್ರದೀಪ್ ಅವರು ಕಾರಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ತನಿಖೆಯನ್ನು ಕೈಗೊಂಡಿರುವ ರಾಮನಗರ ಪೊಲೀಸರಿಗೆ ಆತ್ಮಹತ್ಯೆಗೂ ಮುನ್ನ ಪ್ರದೀಪ್ ಬರೆದಿಟ್ಟಿದ್ದ ಮೂರು ಡೆತ್ ನೋಟ್’ಗಳು ಲಭಿಸಿವೆ.

- Advertisement -


ಇದೀಗ ಡೆತ್’ನೋಟ್’ನಲ್ಲಿ ಪ್ರದೀಪ್ ಉಲ್ಲೇಖಿಸಿದ್ದ ಶಾಸಕ ಅರವಿಂದ ಲಿಂಬಾವಳಿ ಸೇರಿದಂತೆ ಐವರು ಆರೋಪಿಗಳಿಗೆ ವಿಚಾರಣೆಗೆ ಹಾಜರಾಗಲು ಕಗ್ಗಲೀಪುರ ಪೊಲೀಸರು ನೊಟೀಸ್ ನೀಡಿದ್ದಾರೆ. ಪ್ರದೀಪ್ ಪತ್ನಿಯ ಮೇಲೂ ಕೆಲವು ಅನುಮಾನಗಳು ಇರುವುದರಿಂದ ನಮಿತಾಳ ಫೋನ್’ನ ಸಿಡಿಆರ್ ಅನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.


ಮೂರು ಡೆತ್ ನೋಟ್ :
ಪ್ರದೀಪ್ ತನ್ನ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಕಗ್ಗಲೀಪರ ಸಮೀಪದ ರೆಸಾರ್ಟ್’ಗೆ ಹೋಗಿದ್ದು, ರಾತ್ರಿ ಪಾರ್ಟಿ ಮುಗಿಸಿದ ಬಳಿಕ ಮಂಕಾಗಿದ್ದ ಪ್ರದೀಪ್, ಬೆಳಗ್ಗೆ ಯಾರಿಗೂ ಹೇಳದೆ ಬೆಳ್ಳಂದೂರಿನ ಮನೆಗೆ ಬಂದಿದ್ದರು.

- Advertisement -


ಮನೆಗೆ ಬಂದವರೇ ಆತ್ಮಹತ್ಯೆಗೆ ನಿರ್ಧಾರ ಮಾಡಿ, ಮನೆಯಲ್ಲಿದ್ದ ಲೈಸೆನ್ಸ್ ಪಿಸ್ತೂಲ್ ತೆಗೆದುಕೊಂಡು ಬರೆದಿದ್ದ ಮೂರು ಡೆತ್’ನೋಟ್’ಗಳಲ್ಲಿ ಒಂದನ್ನು ಪತ್ನಿ ನಮಿತಾ ವಾರ್ಡ್ ರೋಬ್’ನಲ್ಲಿಟ್ಟಿದ್ದರು.
ಮತ್ತೆ ರೆಸಾರ್ಟ್’ಗೆ ತೆರಳಿ ಸಂಬಂಧಿಕರ ಕಾರಿನ ವೈಪರ್ ಬಳಿ ಇನ್ನೊಂದನ್ನು ಇಟ್ಟು, ಮತ್ತೊಂದನ್ನು ಬ್ಯಾಂಕ್ ದಾಖಲೆಗಳ ಜೊತೆ ಸೇರಿಸಿ ಕಾರಿನಲ್ಲಿಟ್ಟಿದ್ದರು. ಅದನ್ನು ಗಮನಿಸದ ಸಂಬಂಧಿಕರು ರೆಸಾರ್ಟ್ ನಿಂದ ಹೊರಟಿದ್ದರು.


ಗನ್ ತೋರಿಸಿ ಬೆದರಿಕೆ:


ಪ್ರದೀಪ್ ಸಂಬಂಧಿಕರು ಹೋಗುತ್ತಿದ್ದ ಕಾರನ್ನು ಓವರ್ ಟೇಕ್ ಮಾಡಿ, ಒಂದು ಕಿ.ಮೀ ದೂರದಲ್ಲಿ ನಿಟ್ಟಿಗೆರೆ ಎಂಬಲ್ಲಿ ಪಿಸ್ತೂಲ್’ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರದೀಪ್ ಅವರ ಕಾರಿನ ಬಳಿ ಹತ್ತಿರ ಬಂದು ಸಂಬಂಧಿಕರು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ತಾನು ಆತ್ಮಹತ್ಯೆ ಮಾಡಿಕೊಂಡರೆ ಅನಾಥ ಶವವಾಗಬಾರದು ಎನ್ನುವ ಕಾರಣಕ್ಕೆ ಇಷ್ಟೆಲ್ಲಾ ಸರ್ಕಸ್ ಮಾಡಿದ್ದರು ಎಂಬುದು ಪೊಲೀಸರ ಶಂಕೆ.


ಕಳೆದ ವರ್ಷ ಮೇ ತಿಂಗಳಲ್ಲಿ ಬೆಳ್ಳಂದೂರು ಠಾಣೆಯಲ್ಲಿ ಪತಿ ವಿರುದ್ಧ ನಮಿತಾ ದೂರು ನೀಡಿದ್ದರು. ಪ್ರದೀಪ್ ಗನ್ ತೋರಿಸಿ ಸಾಯಿಸುವುದಾಗಿ ಬೆದರಿಸುತ್ತಾನೆಂದು ನಮಿತಾ ದೂರು ನೀಡಿದ್ದು, ಅಸಲಿಗೆ ಪ್ರದೀಪ್ ಈ ರೀತಿಯ ವರ್ತನೆಗೆ ಸಾಲಗಾರರ ಕಾಟ ಕಾರಣವಾಗಿತ್ತು ಎನ್ನಲಾಗಿದೆ.


ಪಬ್ ಗೆ ಹೂಡಿಕೆ:
ಮನೆ ಸೈಟ್ ಜಮೀನು ಮಾರಾಟ ಮಾಡಿ ಓಪೊಸ್ ಪಬ್’ಗೆ ಹೊಡಿಕೆ ಮಾಡಿದ್ದ ಪ್ರದೀಪ್’ಗೆ ಆತನ ಪತ್ನಿ ಸಹಾಯ ಮಾಡಿದ್ದು, ಸಾಲ ಹೆಚ್ಚಾದಾಗ ಮನೆಯಲ್ಲಿ ಪತ್ನಿಯ ಜೊತೆ ಪ್ರದೀಪ್ ಜಗಳವಾಡುತ್ತಿದ್ದರು. ಈ ಬಗ್ಗೆ ಪತ್ನಿ ಬೆಳ್ಳಂದೂರು ಠಾಣೆಗೆ ದೂರು ನೀಡಿದಾಗ ಶಾಸಕ ಅರವಿಂದ ಲಿಂಬಾವಳಿಯ ಸಹಾಯವನ್ನು ಪ್ರದೀಪ್ ಕೋರಿದ್ದ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.


ಇನ್ನು ಅರವಿಂದ್ ಲಿಂಬಾವಳಿ ಶಾಸಕರು ಎನ್ನುವುದನ್ನು ಬಿಟ್ಟಿರುವ ಪೊಲೀಸರು ಎಫ್’ಐಆರ್’ನಲ್ಲಿ ಅರವಿಂದ್ ಲಿಂಬಾವಳಿ ಮೂರನೇ ಆರೋಪಿ ಎಂದು ಉಲ್ಲೇಖಿಸಿದ್ದಾರೆ.


ರಾಜಕಾರಣಿಗಳ ಮೇಲೆ ಎಫ್’ಐಆರ್ ಆದರೆ ರಾಜಕಾರಣಿ ಅಂತ ಉಲ್ಲೇಖಿಸಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಅರವಿಂದ ಲಿಂಬಾವಳಿ ಶಾಸಕ ಎನ್ನುವ ಬದಲು ಸಾಮಾನ್ಯ ವ್ಯಕ್ತಿಯೆಂದು ಉಲ್ಲೇಖ ಮಾಡಲಾಗಿದೆ.


ಸತ್ಯಾಸತ್ಯತೆ ಪತ್ತೆ:


ಪ್ರಕರಣದಲ್ಲಿ ಡೆತ್ ನೋಟ್ ಸತ್ಯಾಸತ್ಯತೆಯ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದು, ಡೆತ್ ನೋಟ್ ನಲ್ಲಿರುವ ಕೈ ಬರಹ ಪ್ರದೀಪ್ ಅವರದ್ದೇ ಅಲ್ಲವೇ ಎನ್ನುವ ತನಿಖೆಯನ್ನು ನಡೆಸಲಾಗುತ್ತಿದೆ. ಪ್ರದೀಪ್ ಬ್ಯಾಂಕ್ ಅಕೌಂಟ್ ಹೊಂದಿದ್ದ ಬ್ಯಾಂಕ್ ಮ್ಯಾನೇಜರನ್ನು ಸಂಪರ್ಕಿಸಿರುವ ಪೊಲೀಸರು, ಬ್ಯಾಂಕ್ ಚೆಕ್ ಚಲನ್’ನಲ್ಲಿನ ಕೈ ಬರಹ ಹಾಗೂ ಡೆತ್ ನೋಟ್’ನಲ್ಲಿನ ಬರಹ ಎರಡನ್ನೂ ಪರೀಕ್ಷಿಸಿ ಎಫ್.ಎಸ್.ಎಲ್ ಅಧಿಕಾರಿಗಳು ವರದಿ ನೀಡಲಿದ್ದಾರೆ.


ಎಚ್’ಎಸ್’ಆರ್ ಲೇಔಟ್ ಬಳಿಯ ಅಮಲೀಪುರದ ಪ್ರದೀಪ್ (47) ಆತ್ಮಹತ್ಯೆಗೂ ಮುನ್ನ ಮಾಜಿ ಸಚಿವ ಅರವಿಂದ ಲಿಂಬಾವಳಿ, ಉದ್ಯಮಿಗಳಾದ ಗೋಪಿ, ಸೋಮಯ್ಯ, ರಮೇಶ್ ರೆಡ್ಡಿ, ಡಾ ಜಯರಾಮರೆಡ್ಡಿ, ರಾಘವ ಭಟ್ ಅವರ ಹೆಸರನ್ನು ಡೆತ್ ನೋಟ್ ನಲ್ಲಿ ಬರೆದಿದ್ದಾರೆ.

Join Whatsapp