ಬೆಂಗಳೂರನ್ನು ಹೈದರಾಬಾದ್’ಗೆ ಹೋಲಿಸುವುದೇ ಹಾಸ್ಯಾಸ್ಪದ: ತೆಲಂಗಾಣ ಸಚಿವನ ಆಫರ್’ಗೆ ಬೊಮ್ಮಾಯಿ ತಿರುಗೇಟು

Prasthutha|

ಬೆಂಗಳೂರು: ಕೆಲ ದಿನದ ಹಿಂದೆ ಬೆಂಗಳೂರಿನ ಕಳಪೆ ರಸ್ತೆಯ ಬಗ್ಗೆ ಟ್ವೀಟ್ ಮಾಡಿದ್ದ ಖಾತಾಬುಕ್ ಸಿಇಒ ರವೀಶ್ ನರೇಶ್ ಗೆ ಹೈದರಬಾದ್ ಆಫರ್ ನೀಡಿದ್ದ ತೆಲಂಗಾಣ ಸಚಿವ ಕೆ.ಟಿ.ರಾಮಾರಾವ್ ಗೆ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
‘ಬೆಂಗಳೂರನ್ನು ಹೈದರಾಬಾದ್ಗೆ ಹೋಲಿಸುವುದೇ ಹಾಸ್ಯಾಸ್ಪದ ಸಂಗತಿ ಎಂದು ಬೊಮ್ಮಾಯಿ ಹೇಳಿದ್ದಾರೆ.

- Advertisement -

ಈ ಕುರಿತು ಪ್ರತಿಕ್ರಿಯಿಸಿರುವ ಬೊಮ್ಮಾಯಿ, ಬೆಂಗಳೂರಿಗೆ ಇಡೀ‌ ಜಗತ್ತಿನ ಜನ‌ರು ಉದ್ಯಮಕ್ಕಾಗಿ ಬರುತ್ತಿದ್ದಾರೆ. ಬೆಂಗಳೂರಿನಲ್ಲಿಯೇ ಅತಿಹೆಚ್ಚು ಸ್ಟಾರ್ಟಪ್‌‌ ಗಳಿವೆ. ಕರ್ನಾಟಕದ ಆರ್ಥಿಕತೆಯು ಕಳೆದ ಮೂರು ತ್ರೈಮಾಸಿಕತೆಯಲ್ಲಿ ಉನ್ನತ ಸ್ತರದಲ್ಲಿದೆ. ಬೆಂಗಳೂರಿಗೆ ಭಾರತದ ಉದ್ಯಮಿಗಳು ಮಾತ್ರವಲ್ಲ, ವಿಶ್ವದೆಲ್ಲೆಡೆಯಿಂದ ಜನರು ಬರುತ್ತಿದ್ದಾರೆ. ಬೆಂಗಳೂರನ್ನು ಹೈದರಾಬಾದ್ಗೆ, ಕರ್ನಾಟವನ್ನು ತೆಲಂಗಾಣಕ್ಕೆ ಹೋಲಿಸುವುದು ಸರಿಯಲ್ಲ’ ಎಂದು ತಿರುಗೇಟು ನೀಡಿದ್ದಾರೆ.

ಬೆಂಗಳೂರಿನ ಕಳಪೆ ರಸ್ತೆಯ ಬಗ್ಗೆ ಟ್ವೀಟ್ ಮಾಡಿದ್ದ ಖಾತಾಬುಕ್ ಸಿಇಒ ರವೀಶ್ ನರೇಶ್, ಕೋಟ್ಯಂತರ ಡಾಲರ್ ಮೊತ್ತದ ತೆರಿಗೆ ಪಾವತಿಸಿದರೂ ಈ ಪ್ರದೇಶದಲ್ಲಿ ರಸ್ತೆಗಳು ಸರಿಯಿಲ್ಲ. ಪವರ್ ಕಟ್ ಪ್ರತಿದಿನ ಆಗುತ್ತಿದೆ. ನೀರು ಸರಿಯಾಗಿ ಬರುತ್ತಿಲ್ಲ, ಫುಟ್ಪಾತ್ ಇಲ್ಲ. ವಿಮಾನ ನಿಲ್ದಾಣಕ್ಕೆ ಹೋಗಬೇಕೆಂದರೆ ಮೂರು ಗಂಟೆ ಬೇಕಾಗುತ್ತದೆ ಎಂದು ಟ್ವೀಟ್ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ತೆಲಂಗಾಣ ಸಚಿವ ಕೆ.ಟಿ.ರಾಮಾರಾವ್ ಬ್ಯಾಗ್ ಪ್ಯಾಕ್ ಮಾಡಿ ಹೈದರಬಾದಿಗೆ ಬನ್ನಿ ಎಂದಿದ್ದರು.

Join Whatsapp