ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ್ದರಿಂದ ಈಗ ತಾವು ರಾಷ್ಟ್ರಭಕ್ತರು ಎಂದು ತೋರಿಸಲು ಬಿಜೆಪಿಯಿಂದ ಪ್ರಯತ್ನ: ಡಿ.ಕೆ.ಶಿವಕುಮಾರ್

Prasthutha|

ಬೆಂಗಳೂರು: ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ಯಾರೂ ಹೋರಾಟ ಮಾಡಿ ಕೊಡುಗೆ ನೀಡಿಲ್ಲ. ಹೀಗಾಗಿ ಅವರು ದೇಶದ ಜನರಲ್ಲಿ ತಾವು ರಾಷ್ಟ್ರ ಭಕ್ತರು ಎಂದು ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಅಮೃತ ಮಹೋತ್ಸವ ಎಂದರೆ ಅದು ದೇಶದ ಐತಿಹಾಸಿಕ ಘಟ್ಟ. ಇದು ದೇಶದ ಹಬ್ಬ. ಇದನ್ನು ನಾವೆಲ್ಲರೂ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ನಾವೆಲ್ಲರೂ ದೇಶಕ್ಕೆ ಯಾವ ರೀತಿ ಗೌರವ ಸಲ್ಲಿಸಬೇಕೋ ಆ ರೀತಿ ಸಲ್ಲಿಸುತ್ತಿದ್ದೇವೆ. ಬೇರೆ ಪಕ್ಷದ ನಾಯಕರು ಏನಾದರೂ ಮಾತನಾಡಲಿ, ಎಷ್ಟಾದರೂ ಟೀಕೆ ಮಾಡಲಿ. ನಾವದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ಇತಿಹಾಸವನ್ನು ತಿರುಚಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶಿವಕುಮಾರ್ ಹೇಳಿದರು.

ಉದಯಪುರ ಚಿಂತನಾ ಶಿಬಿರದಲ್ಲಿ ಪಕ್ಷದ ನಾಯಕರೆಲ್ಲರೂ ಸೇರಿ ಈ ಅಮೃತ ಮಹೋತ್ಸವ ಆಚರಣೆ ಕುರಿತು ತೀರ್ಮಾನ ತೆಗೆದುಕೊಂಡೆವು. ಸಂಗೊಳ್ಳಿ ರಾಯಣ್ಣ ವೃತ್ತದಿಂದ 1 ಲಕ್ಷಕ್ಕೂ ಹೆಚ್ಚು ಜನ ಸೇರಲು ಕರೆ ನೀಡಿದ್ದು, ಈವರೆಗೆ 40 ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿ ಮಾಡಿಕೊಂಡಿರುವವರಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು, ರೈತರು, ಯುವಕರು ಸೇರಿದಂತೆ ಎಲ್ಲ ವರ್ಗದ ಜನರು ಇದ್ದಾರೆ. ಇವರ ಜತೆಗೆ ಕಾಂಗ್ರೆಸ್ ಕಾರ್ಯಕರ್ತರೂ ಸೇರಲಿದ್ದಾರೆ. ಎಲ್ಲರೂ ತಮ್ಮ ಕುಟುಂಬ ಹಾಗೂ ಸ್ನೇಹಿತರ ಸಮೇತರಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಕೇಳಿಕೊಂಡಿದ್ದೇನೆ. ಈ ಕಾರ್ಯಕ್ರಮದಲ್ಲಿ ವರ್ತಕರು, ಕಾರ್ಮಿಕ ಸಂಘಟಣೆಗಳು, ವಿದ್ಯಾರ್ಥಿಗಳು, ರೈತ ಸಂಘ ಸೇರಿದಂತೆ ಎಲ್ಲ ವರ್ಗದ ಜನ ಇದರಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

- Advertisement -

ಸ್ವಾತಂತ್ರ್ಯ ನಡಿಗೆ ಪಾದಯಾತ್ರೆ ನಂತರ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹರಿಹರನ್ ಅವರ ತಂಡದಿಂದ ದೇಶಭಕ್ತಿ ಕುರಿತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕಲಾವಿದರು, ಸಾಹಿತಿಗಳು ಸೇರಿದಂತೆ ಎಲ್ಲ ರಂಗದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಗಾಂಧೀಜಿ ಅವರು ಹೇಗೆ ಹೆಜ್ಜೆ ಹಾಕಿದರೋ ಅದೇ ರೀತಿ ನೀವು ಹೆಜ್ಜೆ ಹಾಕಿ ಎಂದು ಮನವಿ ಮಾಡುತ್ತೇನೆ. ಇದು ಪಕ್ಷಾತೀತ ಕಾರ್ಯಕ್ರಮ. ಇಂತಹ ಕಾರ್ಯಕ್ರಮ ದೇಶಕ್ಕೆ ಕೊಡುಗೆಯಾಗಿದೆ. ನಾನಿಂದು ಕಾಲೇಜು ವಿದ್ಯಾರ್ಥಿಗಳ ಜತೆ ಸಂವಾದ ಮಾಡಿ, ನಮ್ಮ ಯುವ ಪೀಳಿಗೆಗೆ ಸ್ವಾತಂತ್ರ್ಯ ಹೋರಾಟದ ವಿಚಾರವಾಗಿ ಅರಿವು ಮೂಡಿಸುವ ಕೆಲಸ ಮಾಡಿದ್ದೇನೆ. ಮಂಡ್ಯಕ್ಕೆ ಭೇಟಿ ನೀಡುತ್ತಿದ್ದೇನೆ ಎಂದು ಹೇಳಿದರು.

ಈ ಕಾರ್ಯಕ್ರಮಕ್ಕೆ ದೆಹಲಿಯಿಂದ ಯಾವ ನಾಯಕರು ಬರುತ್ತಾರೆ ಎಂಬ ಪ್ರಶ್ನೆಗೆ, ‘ನಾವು ರಾಷ್ಟ್ರೀಯ ನಾಯಕರಿಗೆ ಆಹ್ವಾನ ನೀಡಿದ್ದೇವೆ. ರಾಹುಲ್ ಗಾಂಧಿ ಅವರು ಇಂದು ರಾಜಸ್ಥಾನಕ್ಕೆ ಪ್ರಯಾಣ ಬೆಳೆಸಬೇಕಾಗಿತ್ತು. ಆದರೆ ಅನಾರೋಗ್ಯದ ಕಾರಣ ಅದು ಸಾಧ್ಯವಾಗಲಿಲ್ಲ. ನನಗೆ ಬಂದ ಮಾಹಿತಿ ಪ್ರಕಾರ ಪ್ರಿಯಾಂಕಾ ಗಾಂಧಿ ಅವರ ಆರೋಗ್ಯವೂ ಸರಿಯಿಲ್ಲ. ಈ ಕಾರ್ಯಕ್ರಮಕ್ಕೆ ಯಾರು ಬರುತ್ತಾರೆ ಎಂದು ಅವರೇ ತೀರ್ಮಾನಿಸುತ್ತಾರೆ. ಇದು ಎಐಸಿಸಿ ಕೊಟ್ಟಿರುವ ದೇಶದ ಕಾರ್ಯಕ್ರಮ ಎಂದು ಶಿವಕುಮಾರ್ ಹೇಳಿದರು.

ನಿಮ್ಮ ಕಾರ್ಯಕ್ರಮಕ್ಕೆ ಪರ್ಯಾಯವಾಗಿ ಬಿಜೆಪಿ ಕಾರ್ಯಕ್ರಮ ರೂಪಿಸಿದೆಯೇ ಎಂಬ ಪ್ರಶ್ನೆಗೆ, ‘ನಾವು ನಮ್ಮ ಕಾರ್ಯಕ್ರಮ ರೂಪಿಸಿದ ನಂತರ ಬಿಜೆಪಿ ವಿವಿಧ ರೀತಿ ಕಾರ್ಯಕ್ರಮ ಘೋಷಣೆ ಮಾಡಿದೆ. ಅವರು, ದಳದವರು, ಇತರೆ ಪಕ್ಷದವರು ಮಾಡಲಿ. ನಾವು ಅದರ ಬಗ್ಗೆ ಟೀಕೆ ಮಾಡುವುದಿಲ್ಲ. ದೇಶದ ಸ್ವಾತಂತ್ರ್ಯ ನಮ್ಮ ಕೊಡುಗೆ ಎಂದು ಹೇಳಿದ ನಂತರ ಅವರು ಈ ಪ್ರಯತ್ನ ಮಾಡುತ್ತಿದ್ದಾರೆ. ಆರೋಗ್ಯಕರ ಸ್ಪರ್ಧೆ ಇರಲಿ. ದೇಶಕ್ಕೆ ಎಲ್ಲರೂ ಗೌರವ ನೀಡಲಿ. ಸ್ವಾತಂತ್ರ್ಯದ ವಿಚಾರದಲ್ಲಿ ನಮಗಿರುವ ಹಕ್ಕು, ನೈತಿಕತೆ ಅವರಿಗಿಲ್ಲ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಅವರ ನಾಯಕರುಗಳು ಯಾರೂ ಹೋರಾಟ ಮಾಡಿ ಕೊಡುಗೆನೀಡಿಲ್ಲ. ಹೀಗಾಗಿ ಅವರು ದೇಶದ ಜನರಲ್ಲಿ ತಾವು ರಾಷ್ಟ್ರ ಭಕ್ತರು ಎಂದು ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾನು ಅದರ ಬಗ್ಗೆ ಮಾತನಾಡಲು ಹೋಗುವುದಿಲ್ಲ’ ಎಂದರು.

ಬಿಜೆಪಿಯಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಎದ್ದಿರುವ ಚರ್ಚೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಬಿಜೆಪಿಯವರ ಆದ್ಯತೆ ಬೇರೆ. ಅವರು ರಾಜ್ಯದ ಹಿತದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರ ಪಕ್ಷದಲ್ಲಿನ ಗೊಂದಲ, ಯಾರು ಏನು ಮಾತನಾಡುತ್ತಿದ್ದಾರೆ ಎಂದು ಎಲ್ಲರೂ ಗಮನಿಸುತ್ತಿದ್ದಾರೆ. ಬಿಜೆಪಿಗರೇ ಈ ವಿಚಾರವಾಗಿ ಮಾತನಾಡುತ್ತಿದ್ದಾರೆ. ಅವರ ಹೇಳಿಕೆ ಕುರಿತು ನಾವು ಚರ್ಚೆ ಮಾಡಿದ್ದೇವೆ. ಮಾಜಿ ಶಾಸಕರು, ಸಚಿನವರು ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ. ಅವರು ಕೊಟ್ಟ ಮಾಹಿತಿ ಚರ್ಚಿಸಿದ್ದೇವೆ. ನಾವು ಯಾರಿಗೂ ಈ ಬಗ್ಗೆ ಮಾತನಾಡಿ ಎಂದು ಹೇಳಿರಲಿಲ್ಲ. ಅವರು 3 ಮುಖ್ಯಮಂತ್ರಿಯನ್ನಾದರೂ ಮಾಡಲಿ, ನಾಲ್ಕು ಜನರನ್ನಾದರೂ ಮಾಡಲಿ. ಅದು ಅವರಿಗೆ ಬಿಟ್ಟ ವಿಚಾರ. ಈಗ ನಾನು ಈ ವಿಚಾರವಾಗಿ ಮಾತನಾಡುವುದಿಲ್ಲ. 3 ದಿನಗಳು ಕಳೆದ ನಂತರ ಬೇರೆ ವಿಚಾರವಾಗಿ ಮಾತನಾಡೋಣ’ ಎಂದು ತಿಳಿಸಿದರು.

ಸಿಎಂ ಬದಲಾವಣೆ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರವಾಗಿ ಕೇಳಿದಾಗ, ‘ಕೆಲವರಿಗೆ ಕೆಲವು ಮಾಹಿತಿ ಇರುತ್ತದೆ. ಬಿಜೆಪಿ ಮಾಜಿ ಶಾಸಕರೇ ಈ ವಿಚಾರ ಚರ್ಚೆ ಮಾಡಿದ್ದಾರೆ’ ಎಂದು ತಿಳಿಸಿದರು.

ಹರ್ ಘರ್ ತಿರಂಗಾ ಕಾರ್ಯಕ್ರಮದಿಂದ ಯಾರು ದೇಶ ಭಕ್ತರು, ಯಾರು ಅಲ್ಲ ಎಂಬುದು ಗೊತ್ತಾಗಲಿದೆ ಎಂದು ಚಕ್ರವರ್ತಿ ಸೂಲಿಬೆಲೆ ಅವರು ಹೇಳಿರುವ ಬಗ್ಗೆ ಕೇಳಿದಾಗ, ‘ಬಿಜೆಪಿ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳು ಮಾತನಾಡಿದರೆ ನಾನು ಪ್ರತಿಕ್ರಿಯೆ ನೀಡುತ್ತೇನೆ. ಬೇರೆ ಭಾಷಣ ಮಾಡುವವರು, ಟ್ವೀಟ್ ಮಾಡುವವರು ಹೇಳಿದ ಮಾತಿಗೆ ಉತ್ತರ ನೀಡಲು ಸಾಧ್ಯವಿಲ್ಲ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ’ ಎಂದು ಕುಟುಕಿದರು.

Join Whatsapp