ಶಿವಸೇನೆ-ಬಿಜೆಪಿ ಮರು ಮೈತ್ರಿಗೆ ‘ಸಿಎಂ ಸೂತ್ರ’ ಸೂಚಿಸಿದ ಕೇಂದ್ರ ಸಚಿವ ರಾಮದಾಸ್ ಅಠಾವಳೆ

Prasthutha|

ಮುಂಬೈ:  ಮಹಾರಾಷ್ಟ್ರದಲ್ಲಿ ಶಿವಸೇನೆ-ಬಿಜೆಪಿ ಸರಕಾರ ರಚನೆಯಾಗಲು ಕೇಂದ್ರ ಸಚಿವ ರಾಮದಾಸ್ ಅಠಾವಳೆ ‘ಸಿಎಂ ಸೂತ್ರ’ವನ್ನು ಮುಂದಿಟ್ಟಿದ್ದಾರೆ. ಮುಂದಿನ ಚುನಾವಣೆಯ ಬಳಿಕ ಮುಖ್ಯಮಂತ್ರಿ ಪಟ್ಟವನ್ನು ಪೂರ್ಣಾವಧಿಗೆ ಶಿವಸೇನೆಯ ಉದ್ಧವ್ ಠಾಕ್ರೆಯವರಿಗೆ ಬಿಟ್ಟುಕೊಟ್ಟರೆ ಮಹಾರಾಷ್ಟ್ರದಲ್ಲಿ ಸುಲಭದಲ್ಲಿ ಶಿವಸೇನೆ-ಬಿಜೆಪಿ ಸರಕಾರ ರಚನೆಯಾಗಲಿದೆ. ಮಾಜಿ ದೋಸ್ತಿಗಳು ಮತ್ತೆ ಸರಕಾರ ರಚಿಸುವುದು ‘ದೊಡ್ಡ ವಿಷಯವೇ ಅಲ್ಲ’ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

- Advertisement -

ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ಮುಖಂಡರೂ ಆಗಿರುವ ರಾಮದಾಸ್ ಅಠಾವಳೆ, ಮುಖ್ಯಮಂತ್ರಿ ಪಟ್ಟವನ್ನು ಪೂರ್ಣಾವಧಿಗೆ ಶಿವಸೇನೆಯ ಉದ್ಧವ್ ಠಾಕ್ರೆಯವರಿಗೆ ಬಿಟ್ಟುಕೊಡುವ ವಿಚಾರವನ್ನು ನಾನು ಸದ್ಯದಲ್ಲೇ ಬಿಜೆಪಿ ನಾಯಕರ ಜೊತೆ ಚರ್ಚಿಸುವುದಾಗಿ ತಿಳಿಸಿದ್ದಾರೆ. ಕಳೆದ ಶಿವಸೇನೆ-ಬಿಜೆಪಿ ಸರಕಾರದಲ್ಲಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷವು ಮೈತ್ರಿಕೂಟದ ಭಾಗವಾಗಿತ್ತು.

‘ಗೋ ಮಹಾ ವಿಕಾಸ್‌ ಅಘಾಡಿ ಗೋ’

- Advertisement -

ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಅಠಾವಳೆ, “ಈ ಮೂರು ಚಕ್ರಗಳ ಸರ್ಕಾರದಲ್ಲಿ ಮೂರು ಪಕ್ಷಗಳು ಪರಸ್ಪರ ಕಿತ್ತಾಡಿಕೊಳ್ಳುತ್ತಿದೆ. ಈ ಸರ್ಕಾರದಿಂದಾಗಿ ರೈತರಿಗೆ, ದಲಿತರಿಗೆ ಯಾವುದೇ ಸಹಾಯವೂ ದೊರೆಯುತ್ತಿಲ್ಲ. ಬಜೆಟ್‌ನಲ್ಲಿ ದಲಿತರಿಗೆ ಯಾವುದೇ ಘೋಷಣೆಯನ್ನು ಮಾಡಿಲ್ಲ,” ಎಂದು ಆರೋಪ ಮಾಡಿದ್ದಾರೆ. ಈ ಹಿಂದೆ ‘ಗೋ ಕೊರೊನಾ ಕೊರೊನಾ ಗೋ’ ಹಾಗೂ ‘ನೋ ಕೊರೊನಾ ಕೊರೊನಾ ನೋ’ ಎಂಬ ಘೋಷಣೆಗಳ ಮೂಲಕ ‘ಸುದ್ದಿ’ಯಾಗಿದ್ದ ಕೇಂದ್ರ ಸಚಿವ ರಾಮದಾಸ್ ಅಠಾವಳೆ, ಈಗ ‘ಗೋ ಮಹಾ ವಿಕಾಸ್‌ ಅಘಾಡಿ ಗೋ’ ಎಂಬ ಹೊಸ ಘೋಷಣೆಯನ್ನು ಕೂಗಿದ್ದಾರೆ.

Join Whatsapp