ಮಂಜೇಶ್ವರ : ನಾಮ ಪತ್ರ ಹಿಂಪಡೆಯಲು 15 ಲಕ್ಷ ಆಮಿಷ ಒಡ್ಡಿದ ಬಿಜೆಪಿ – ಸ್ಪೋಟಕ ಮಾಹಿತಿ ಬಹಿರಂಗ

Prasthutha|

ಮಂಜೇಶ್ವರ : ಇತ್ತಿಚ್ಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಕೇರಳದ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿ ಎಸ್ಪಿ ಪಕ್ಷದ ಅಭ್ಯರ್ಥಿಗೆ ಚುನಾವಣಾ ಕಣದಿಂದ ಹಿಂದೆ ಸರಿಯಲು ಬಿಜೆಪಿ ಪಕ್ಷ ಎರಡೂವರೆ ಲಕ್ಷ ರೂ ನೀಡಿದ್ದಾಗಿ ಬಿಎಸ್ಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಸ್ಪರ್ಧಾ ಕಣದಿಂದ ಹಿಂದೆ ಸರಿದ ಕೆ. ಸುಂದರ ಸ್ಪೋಟಕ ಮಾಹಿತಿ ಬಹಿರಂಗಪಡಿಸಿದ್ದು ಈ ಆರೋಪ ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

- Advertisement -


2016 ರಲ್ಲಿ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ತ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ . ಸುಂದರ 464 ಮತಗಳನ್ನು ಪಡೆದಿದ್ದರು . ಈ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಕೆ . ಸುರೇಂದ್ರನ್ ಕೇವಲ 89 ಮತಗಳ ಅಂತರದಿಂದ ಸೋಲು ಕಂಡಿದ್ದರು. ಕೆ . ಸುಂದರ ಪಡೆದ ಮತಗಳಿಂದ ಸೋಲುವಂತಾಯಿತು ಎಂಬ ಭಾವನೆ ಬಿಜೆಪಿಯಲ್ಲಿ ಕೇಳಿಬಂದಿತ್ತು.
ಈ ಬಾರಿಯೂ ಕೆ. ಸುಂದರ ಬಿ ಎಸ್ಪಿ ಅಭ್ಯರ್ಥಿಯಾಗಿ ಮಂಜೇಶ್ವರದಿಂದ ಮತ್ತೆ ನಾಮಪತ್ರ ಸಲ್ಲಿಸಿದ್ದರು. ಆದರೆ ಆ ಬಳಿಕ ನಡೆದ ಬೆಳವಣಿಗೆಯಲ್ಲಿ ಕೆ. ಸುಂದರ ಅವರು ಕೊನೆ ಕ್ಷಣದಲ್ಲಿ ನಾಮಪತ್ರ ಹಿಂತೆಗೆದುಕೊಂಡು ಕೆ . ಸುರೇಂದ್ರನ್ ರಿಗೆ ಬೆಂಬಲ ಸೂಚಿಸಿದ್ದರು. ನಾಮಪತ್ರ ಹಿಂತೆಗೆದುಕೊಳ್ಳುವ ಎರಡು ದಿನಗಳ ಹಿಂದೆ ಸುಂದರ ದಿಡೀರ್ ಆಗಿ ನಾಪತ್ತೆಯಾಗಿದ್ದರು . ಈ ಬಗ್ಗೆ ಬಿಎಸ್ಪಿ ಜಿಲ್ಲಾ ಮುಖಂಡರು ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು . ನಾಮಪತ್ರ ಹಿಂತೆಗೆದುಕೊಳ್ಳುವ ದಿನ ಕಳೆದ ಮರುದಿನವೇ ಬಿಜೆಪಿಯ ಮಂಜೇಶ್ವರ ಕ್ಷೇತ್ರ ಚುನಾವಣಾ ಕಚೇರಿಗೆ ತಲುಪಿ ತಾನು ಕಣದಿಂದ ಹಿಂದೆ ಸರಿದಿರುವುದಾಗಿ ಹೇಳಿಕೆ ನೀಡಿದ್ದರು. ಕೆ . ಸುರೇಂದ್ರನ್ ಹಾಗೂ ಬಿಜೆಪಿಯ ಮುಖಂಡರ ಮನವಿ ಮೇರೆಗೆ ನಾಮಪತ್ರ ಹಿಂದಕ್ಕೆ ಪಡೆದುಕೊಂಡಿರುವುದಾಗಿ ಸುಂದರ ಹೇಳಿಕೆ ನೀಡಿದ್ದರು .

ಇದೀಗ ವಿಧಾನಸಭೆ ಚುನಾವಣೆ ಕಳೆದು ಎರಡು ತಿಂಗಳು ಕಳೆಯುತ್ತಿದ್ದಂತೆ ಸ್ಪೋಟಕ ಮಾಹಿತಿಯನ್ನು ಕೆ. ಸುಂದರ ಹೊರಗೆಡವಿದ್ದಾರೆ. ” ನಾಮಪತ್ರ ಹಿಂದಕ್ಕೆ ಪಡೆಯಲು ಕೆ . ಸುರೇಂದ್ರನ್ ಹಾಗೂ ಬಿಜೆಪಿ ಮುಖಂಡರು ಒತ್ತಡ ಹೇರಿದ್ದು , ಹಣ ನೀಡುವ ಭರವಸೆ ನೀಡಿದ್ದರು . ಆರಂಭದಲ್ಲಿ 15 ಲಕ್ಷ ರೂ . ನೀಡುವ ಭರವಸೆ ನೀಡಲಾಗಿತ್ತು ಆದರೆ ಎರಡೂ ವರೆ ಲಕ್ಷ ರೂ . ನೀಡಿದ್ದಾರೆ . ಎರಡು ಲಕ್ಷ ರೂ ತಾಯಿ ಕೈಯಲ್ಲಿ ಹಾಗೂ 50 ಸಾವಿರ ರೂ . ನನಗೆ ನೀಡಿದ್ದಾರೆ . ಇದಲ್ಲದೆ ಒಂದು ಸ್ಮಾರ್ಟ್ ಮೊಬೈಲ್ ಫೋನ್ ನ್ನು ಬಿಜೆಪಿಯ ಮುಖಂಡರು ನೀಡಿರುವುದಾಗಿ ಬಹಿರಂಗಪಡಿಸಿದ್ದು , ಇದಲ್ಲದೆ ಚುನಾವಣೆಯಲ್ಲಿ ಸುರೇಂದ್ರನ್ ಗೆದ್ದಲ್ಲಿ ಮಂಗಳೂರಿನಲ್ಲಿ ವೈನ್ ಶಾಪ್ ಗೆ ಪರವಾನಿಗೆ ಹಾಗೂ ಹೊಸ ಮನೆಯನ್ನು ನಿರ್ಮಿಸಿ ನೀಡುವ ಆಮಿಷ ಒಡ್ಡಿದ್ದರು ” ಎಂದು ಸುಂದರ ಬಹಿರಂಗಪಡಿಸಿದ್ದಾರೆ.

- Advertisement -

ಕೆ . ಸುಂದರವರ ಈ ಹೇಳಿಕೆ ಇದೀಗ ಬಿಜೆಪಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಚುನಾವಣಾ ಸಂದರ್ಭದಲ್ಲಿ ತ್ರಿಶೂರ್ ನಲ್ಲಿ ಹಣ ಸಾಗಾಟ ಮಾಡುತ್ತಿದ್ದ ಕಾರನ್ನು ಅಪಹರಿಸಿದ್ದ ಘಟನೆ ನಡೆದಿತ್ತು. ಕಾರಿನಲ್ಲಿದ್ದ 25 ಲಕ್ಷ ರೂ . ವನ್ನು ದರೋಡೆ ಮಾಡಲಾಗಿತ್ತು . ಈ ಅಪಹರಣ ಮತ್ತು ದರೋಡೆಯಲ್ಲಿ ಬಿಜೆಪಿಯವರೇ ಶಾಮೀಲಾಗಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು . ಇದ್ದಲ್ಲದೆ ಎನ್ ಡಿ ಎ ಘಟಕ ಪಕ್ಷವಾಗಿ ಸೇರ್ಪಡೆಗೊಳ್ಳಲು ಸಿ . ಕೆ ಜಾನು ನೇತೃತ್ವದ ಜನಾಧಿಪತ್ಯ ರಾಷ್ಟೀಯ ಪಕ್ಷ ಕ್ಕೆ ಹತ್ತು ಲಕ್ಷ ರೂ . ನೀಡಿದ್ದು , ಇದನ್ನು ಸಿ .ಕೆ ಜಾನು ಪಡೆದಿರುವುದಾಗಿ ಪಕ್ಷದ ಕೋಶಾಧಿಕಾರಿ ಪ್ರಸಿದಾ ಆರೋಪಿಸಿದ್ದು , ಚುನಾವಣೆಗೆ ಬಿಜೆಪಿ ಕೋಟ್ಯಾಂತರ ರೂ . ಗಳನ್ನು ವೆಚ್ಚ ಮಾಡಿದೆ ಎಂಬ ಮಾಹಿತಿಗಳು ಒಂದೊಂದಾಗಿ ಹೊರ ಬರತೊಡಗಿದೆ

Join Whatsapp