ಬಿಜೆಪಿ ಶಾಸಕ ಸುರೇಶ್ ಕುಮಾರ್ ಪ್ರಚಾರಕ್ಕಾಗಿ ವಾಚ್ ಮೆನ್ ಕೆಲಸಕ್ಕೆ ಮುಂದಾಗಿದ್ದಾರೆ: ರಮೇಶ್ ಬಾಬು ಟೀಕೆ

Prasthutha|

ಬೆಂಗಳೂರು: ಯಾವುದೇ ಸಂದರ್ಭದಲ್ಲಿ ಒಂದು ಆಡಳಿತ ಪಕ್ಷದ ಶಾಸಕರು ತಮ್ಮದೇ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರೆ ಅದು ಆ ಸರ್ಕಾರದ ವೈಫಲ್ಯವನ್ನು ಸಾರುತ್ತದೆ ಅಥವಾ ಶಾಸಕರ ಸ್ವಹಿತಾಸಕ್ತಿಯ ಅನುಮಾನ ಹುಟ್ಟಿಸುತ್ತದೆ. ಕೆಲವು ಸಂದರ್ಭದಲ್ಲಿ ಜನರ ಕಿವಿಗೆ ಹೂವು ಮುಡಿಸುವ ಕಾರಣಕ್ಕೆ ಸೋಗಲಾಡಿ ಶಾಸಕರು ಇಂತಹ ಪ್ರತಿಭಟನೆಗಳಿಗೆ ಮುಂದಾಗುತ್ತಾರೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಅವರು ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಗೆ ಟಾಂಗ್ ನೀಡಿದ್ದಾರೆ.
ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಅವರು ಕರ್ನಾಟಕ ಲೋಕಸೇವಾ ಆಯೋಗದ ಗೇಟನ್ನು ಕಾಯುವ ಪ್ರತಿಭಟನೆಗೆ ಮುಂದಾಗಿದ್ದಾರೆ. ಅತಿವೃಷ್ಟಿ ಸಂದರ್ಭದಲ್ಲಿ ಪ್ರಚಾರಕ್ಕಾಗಿ ಮೊಳಕಾಲುದ್ದ ನೀರಿನಲ್ಲಿ ದೋಣಿ ಹಾಯಿಸಿ ನಗೆಪಾಟಲಿಗೆ ಈಡಾದ ಬಿಜೆಪಿ ಶಾಸಕ ರೇಣುಕಾಚಾರ್ಯರವರ ಪ್ರತಿಭಟನೆಗೂ ಮತ್ತು ಎಸ್.ಸುರೇಶ್ ಕುಮಾರ್ ರ ಪ್ರತಿಭಟನೆಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಅವರು ಕುಟುಕಿದ್ದಾರೆ.
2016-17 ರಿಂದ ಇಲ್ಲಿಯವರೆಗೆ ಕರ್ನಾಟಕ ಲೋಕಸೇವಾ ಆಯೋಗ ವಿವಿಧ ಇಲಾಖೆಯ ಒಟ್ಟು 5,545 ಹುದ್ದೆಯ ನೇಮಕಾತಿಗೆ (ಹೈದರಾಬಾದ್ ಕರ್ನಾಟಕ ಸಹಿತವಾಗಿ) ಅಧಿಸೂಚನೆ ಮೂಲಕ ಪ್ರಕ್ತಿಯೆಗಳನ್ನು ನಡೆಸಿದ್ದು, ಅಂತಿಮ ನೇಮಕಾತಿ ಬಾಕಿದೆ. ಇವುಗಳಲ್ಲಿ ಪ್ರಮುಖವಾಗಿ 2017-18ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆಗಳೂ ಸೇರಿರುತ್ತವೆ. ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 106 ಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆಗಳ ನೇಮಕಾತಿಗೆ ಕೆಪಿಎಸ್‍ ಸಿ ಮೂಲಕ ಕ್ರಮ ಕೈಗೊಳ್ಳಲಾಗಿತ್ತು. ಪ್ರತಿ ವರ್ಷ ಗೆಜೆಟೆಡ್ ಹುದ್ದೆಗಳ ನೇಮಕಾತಿ ಮಾಡಲು ಸರ್ಕಾರದ ಅಧಿಸೂಚನೆ ಇದ್ದರೂ, ಇಲ್ಲಿಯವರೆಗೆ ಬಿಜೆಪಿಯ ಸರ್ಕಾರ ಖಾಲಿಯಿರುವ ಯಾವುದೇ ಹುದ್ದೆಗಳನ್ನು ತುಂಬಲು ಪ್ರಯತ್ನಿಸಿರುವುದಿಲ್ಲ. ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗಳ ನೇಮಕಾತಿಯನ್ನು ಹೊರತುಪಡಿಸಿದರೆ, ರಾಜ್ಯ ಬಿಜೆಪಿ ಸರ್ಕಾರ ಕರ್ನಾಟಕ ಲೋಕಸೇವಾ ಆಯೋಗದ ಮುಖಾಂತರ ಯಾವುದೇ ಖಾಲಿ ಹುದ್ದೆಗಳನ್ನು ತುಂಬಲು ಇಲ್ಲಿಯವರೆಗೆ ಮುಂದಾಗಿರುವುದಿಲ್ಲ. ಇದರ ಸತ್ಯ ತಿಳಿದಿದ್ದರೂ ಅಧಿವೇಶನದಲ್ಲಾಗಲಿ ಅಥವಾ ಸಾರ್ವಜನಿಕವಾಗಲಿ ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡದ ಸುರೇಶ್ ಕುಮಾರ್ ಪ್ರಚಾರಕ್ಕಾಗಿ ವಾಚ್ ಮೆನ್ ಕೆಲಸಕ್ಕೆ ಮುಂದಾಗಿದ್ದಾರೆ. ಇದೇ ಶಾಸಕರು ಪ್ರಚಾರಕ್ಕಾಗಿ ತಮ್ಮ ಮನೆಯ ಮುಂದೆ ಕೇವಲ ಒಂದು ದಿನ ಕಸ ಗುಡಿಸಿ ಪೋಸು ಕೊಟ್ಟಿದ್ದನ್ನು ಜನರು ಮರೆತಿಲ್ಲ! ಎಂದು ಅವರು ಟೀಕಿಸಿದ್ದಾರೆ.
ಕರ್ನಾಟಕ ಲೋಕಸಭಾ ಆಯೋಗವು ವಿವಿಧ ನೇಮಕಾತಿಗಳಿಗೆ ಸಂಬಂಧಪಟ್ಟಂತೆ ಸಾರಿಗೆ ಇಲಾಖೆಯ 150 ಮೋಟಾರು ವಾಹನ ನಿರೀಕ್ಷಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ 460 ಚಿತ್ರಕಲಾ ಶಿಕ್ಷಕರು, ಉದ್ಯೋಗ ಮತ್ತು ತರಭೇತಿ ಇಲಾಖೆಯಲ್ಲಿ 636 ಹುದ್ದೆಗಳು, 100 ಗೆಜೆಟೆಡ್ ಹುದ್ದೆಗಳು, ವಿವಿಧ ಇಲಾಖೆಗಳ 1136 ಪ್ರಥಮದರ್ಜೆ ಸಹಾಯಕರು, 1323 ಕಿರಿಯ ಸಹಾಯಕರು, ಆಯುಷ್ ಇಲಾಖೆಯ 142 ಬ್ಯಾಕ್ ಲಾಗ್/ಹೈಕ ಹುದ್ದೆಗಳು, ಲೋಕೋಪಯೋಗಿ ಇಲಾಖೆಯ 660 ಸಹಾಯಕ ಇಂಜಿನಿಯರ್, 330 ಕಿರಿಯ ಇಂಜಿನಿಯರ್, ಇತರೆ ಇಲಾಖೆಗಳ 523 ಹುದ್ದೆಗಳು, ಒಟ್ಟಾರೆ 5545 ಹುದ್ದೆಗಳನ್ನು ತುಂಬುವ ಪ್ರಕ್ರಿಯೆ ಚಾಲನೆಯಲ್ಲಿರುತ್ತದೆ. ಇವುಗಳಲ್ಲಿ ಕೆಲವು ಹುದ್ದೆಗಳ ಪರೀಕ್ಷಾ ಫಲಿತಾಂಶವನ್ನು 31-05-2022ಕ್ಕೆ ಲೋಕಸೇವಾ ಆಯೋಗ ನಿಗಧಿತ ಸಮಯದಂತೆ ಪ್ರಕಟಿಸಬೇಕಾಗಿರುತ್ತದೆ. ಅಲ್ಲದೇ ಜೂನ್ ಅಂತ್ಯದ ಒಳಗೆ ಕೆಲವು ಫಲಿತಾಂಶಗಳನ್ನು ಮತ್ತು ಆಯ್ಕೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗಿರುತ್ತದೆ. ರಾಜ್ಯ ಸರ್ಕಾರದ ಅಸಮರ್ಥ ಅಧ್ಯಕ್ಷರ ನೇಮಕ, ಕಾರ್ಯದರ್ಶಿಯ ಬದಲಾವಣೆ ಮತ್ತು ನಿಭಂದಕರ ವರ್ಗಾವಣೆ ನೀತಿಗಳಿಂದ ನಿಧಾನಗತಿಯ ಜೊತೆಗೆ ಉದ್ಯೋಗ ಬಯಸುತ್ತಿರುವ ಆಕಾಂಕ್ಷಿಗಳಿಗೆ ತೊಂದರೆಯಾಗುತ್ತಿದೆ. ಇವೆಲ್ಲಾ ಸತ್ಯಗಳನ್ನು ಮುಚ್ಚಿಟ್ಟು ಜನರ ಕಿವಿಗೆ ಹೂವು ತೊಡಿಸಲು ಮುಂದಾಗಿರುವ ಬಿಜೆಪಿ ಶಾಸಕ ಸುರೇಶ್ ಕುಮಾರ್ ರ ನಾಟಕ ರಂಜನೀಯವಾಗಿದೆ. ಆಡಳಿತ ಪಕ್ಷದ ಶಾಸಕರು ಈ ನಾಟಕವನ್ನು ಬಿಟ್ಟು, ರಾಜ್ಯ ಸರ್ಕಾರದಲ್ಲಿ ಖಾಲಿಯಿರುವ ಸುಮಾರು ಎರಡೂವರೆ ಲಕ್ಷ ಉದ್ಯೋಗಗಳನ್ನು ತುಂಬಲು ತಮ್ಮದೇ ಸರ್ಕಾರದ ಮೇಲೆ ಮತ್ತು ಪಕ್ಷದ ಮೇಲೆ ಒತ್ತಡ ಹಾಕಲಿ. ಪ್ರಚಾರದ/ನಾಟಕದ ಪ್ರತಿಭಟನೆಯನ್ನು ನಿಲ್ಲಿಸಲಿ ಎಂದು ರಮೇಶ್ ಬಾಬು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Join Whatsapp