ಹಗರಣ ಮಾಡಿದವರಿಗೆ ಮಂತ್ರಿಗಿರಿ: ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಆಕ್ರೋಶ

Prasthutha|

ಚಿತ್ರದುರ್ಗ, ಆ.4: ಸಚಿವ ಸಂಪುಟದಲ್ಲಿ ಸ್ಥಾನ ನೀಡದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -

ಸಚಿವ ಸ್ಥಾನ ಸಿಗದಿರುವುದಕ್ಕೆ ಪೂರ್ಣಿಮಾ ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದ್ದು, ನಿರಂತರವಾಗಿ ಪಕ್ಷಕ್ಕೆ ನಾನು ಮತ್ತು ನನ್ನ ಕುಟುಂಬ ಶ್ರಮಿಸಿದೆ. ಚುನಾವಣೆಯ ಸಂದರ್ಭದಲ್ಲಿ ಪಕ್ಷಕ್ಕಾಗಿ ದುಡಿದಿದ್ದೇವೆ. ಆದರೂ, ಜಾಣ ಕುರುಡರಂತೆ ವರ್ತಿಸುತ್ತಿರುವುದು ನೋವು ತಂದಿದೆ ಎಂದು ಹೇಳಿದ್ದಾರೆ.

ಪಕ್ಷ ಜಾಣ ಕುರುಡರ ರೀತಿ ವರ್ತಿಸುತ್ತಿದೆ. ಗೊಲ್ಲ ಸಮುದಾಯಕ್ಕೆ ಒಂದೂ ಸ್ಥಾನ ನೀಡದಿರುವುದು ತುಂಬಾ ನೋವನ್ನುಂಟು ಮಾಡಿದೆ ಎಂದು ಹೇಳಿದ್ದು, ಬಿಜೆಪಿಯಲ್ಲಿ ಗೊಲ್ಲ ಸಮುದಾಯದ ಏಕೈಕ ಶಾಸಕಿಯಾಗಿದ್ದೇನೆ. ನಾನು ಯಾವುದೇ ರೀತಿಯ ಪಕ್ಷವಿರೋಧಿ ಚಟುವಟಿಕೆ ಮಾಡಿಲ್ಲ. ಯಾವುದೇ ಹಗರಣ ನನ್ನನ್ನು ಸುತ್ತಿಕೊಂಡಿಲ್ಲ. ಪಕ್ಷ ತೆಗೆದುಕೊಂಡ ನಿರ್ಧಾರ ನನಗೆ ಘಾಸಿ ಉಂಟುಮಾಡಿದೆ. ಹಗರಣದಲ್ಲಿ ಸಿಲುಕಿದವರಿಗೆ ಮತ್ತೆ ಮಂತ್ರಿಗಿರಿ ಸಿಕ್ಕಿದೆ. ಒಂದೇ ಮನೆಯಲ್ಲಿ 2 -3 ಅಧಿಕಾರ ನೀಡಲಾಗಿದೆ. ಹಗರಣ ಇಲ್ಲದ ಮಹಿಳೆಗೆ ಅವಕಾಶ ನೀಡಿದರೆ ಸಂತೋಷವಾಗುತ್ತಿತ್ತು. ಇದು ಇನ್ನೊಬ್ಬ ಶಾಸಕರಿಗೂ ಅವಮಾನ ಮಾಡಿದಂತಾಗಿದೆ. ಜಿಲ್ಲೆಯ ಇತರೆ ಶಾಸಕರಿಗೂ ಮಂತ್ರಿಗಿರಿ ನೀಡದೆ ಅವಮಾನ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Join Whatsapp