ಅಚ್ಚೇದಿನ್ ಹೆಸರಲ್ಲಿ ಬಿಜೆಪಿ ಸರ್ಕಾರದಿಂದ ದೇಶದ ಜನರಿಗೆ ದ್ರೋಹ: ಸಿದ್ದರಾಮಯ್ಯ

Prasthutha|

►ರಾಜ್ಯವನ್ನು ಹಾಳು ಮಾಡಿ ಸಾಧನಾ ಸಮಾವೇಶ ಮಾಡುತ್ತಿದ್ದಾರೆ

- Advertisement -

ಬೆಂಗಳೂರು: ಅಚ್ಚೇದಿನ್ ಹೆಸರಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ದೇಶದ ಜನರಿಗೆ ದ್ರೋಹ ಮಾಡಿದೆ. ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಅಗತ್ಯ ವಸ್ತುಗಳ ಬೆಲೆ ಯದ್ವಾತದ್ವಾ ಏರಿಕೆಯಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರೊಂದಿಗೆ ಇಂದು ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕೆ ಕಳೆದ 8 ವರ್ಷಗಳಲ್ಲಿ ಕರ್ನಾಟಕ ಒಂದರಿಂದಲೇ 19 ಲಕ್ಷ ಕೋಟಿ, ಕಳೆದ ಒಂದೇ ವರ್ಷ 3 ಲಕ್ಷ ಕೋಟಿಗೂ ಹೆಚ್ಚು ತೆರಿಗೆ ಸಂಗ್ರಹವಾಗಿದೆ. ಕರ್ನಾಟಕ ಇಡೀ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. 19 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿ 1 ಲಕ್ಷದ 29 ಸಾವಿರ ಕೋಟಿ ಕೊಟ್ಟಿದ್ದೇವೆ ಎಂದು ದೊಡ್ಡ ಸಾಧನೆಯಂತೆ ಪ್ರಚಾರ ಮಾಡಿದರು. 42% ನಮ್ಮ ತೆರಿಗೆ ಪಾಲಿನ ಪ್ರಕಾರ ನಮಗೆ ಬಂದಿದ್ದರೆ ಕನಿಷ್ಠ 8 ಲಕ್ಷ ಕೋಟಿ ಬರಬೇಕಿತ್ತು.. ಉದಾಹರಣೆಗೆ ಮನಮೋಹನ್ ಸಿಂಗ್ ಅವರು ಪ್ರಧಾನಿ ಸ್ಥಾನದಿಂದ ಇಳಿಯುವಾಗ ಡೀಸೆಲ್ ಬೆಲೆ 46 ರೂ. ಇತ್ತು, ಇಂದು ಅದು 95 ರೂ. ಆಗಿದೆ.  ಅಂದರೆ ಎರಡು ಪಟ್ಟಾಗಿದೆ. ಪೆಟ್ರೋಲ್ 72 ರೂ. ಇತ್ತು, ಈಗ 102 ರೂ. ಆಗಿದೆ. ಗ್ಯಾಸ್ 414 ರೂ. ಇತ್ತು, ಈಗದು 1,050 ರೂ. ಆಗಿದೆ. ಗೊಬ್ಬರದ ಬೆಲೆ, ಕಬ್ಬಿಣ, ಸಿಮೆಂಟ್ ಬೆಲೆ ಎರಡು ಪಟ್ಟಾಗಿದೆ. ಅಚ್ಚೇದಿನ್ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದವರು ಹೇಗೆ ಜನರ ರಕ್ತವನ್ನು ತೆರಿಗೆ ರೂಪದಲ್ಲಿ ಕುಡಿದಿದ್ದಾರೆ ಎಂದು ಹೇಳಲು ಇದಕ್ಕಿಂತ ಬೇರೆ ಸಾಕ್ಷಿ ಬೇಕಾ ಎಂದು ಪ್ರಶ್ನಿಸಿದರು.

- Advertisement -

ಈಗ ಜಿಎಸ್ಟಿ ಹೆಚ್ಚು ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಈ ಜಿಎಸ್ ಟಿ ಕೌನ್ಸಿಲ್ ನ ಒಬ್ಬ ಸದಸ್ಯರು. ಮೊಸರು, ಮಜ್ಜಿಗೆ, ಪನ್ನೀರ್, ಲಸ್ಸಿ ಮೇಲೆ ಜಿಎಸ್ಟಿ ತೆರಿಗೆ 0% ಇತ್ತು, ಅದನ್ನು 5% ಗೆ ಹೆಚ್ಚಿಸಿದ್ದಾರೆ. ಅಕ್ಕಿ, ಗೋದಿ, ಬಾರ್ಲಿ, ಓಟ್ಸ್ ಗೆ 0% ತೆರಿಗೆ ಇತ್ತು, ಅದೀಗ 5% ಗೆ ಹೆಚ್ಚಾಗಿದೆ. ಆಸ್ಪತ್ರೆ ಕೊಠಡಿಗಳ 5,000 ರೂ. ವರೆಗೆ 5% ಜಿಎಸ್ ಟಿ ಹಾಕಿದ್ದಾರೆ, 1,000 ರೂಪಾಯಿಯ ಹೋಟೆಲ್ ಕೊಠಡಿಗಳಿಗೆ 12% ಜಿಎಸ್ಟಿ ಹಾಕಿದ್ದಾರೆ, ಸೋಲಾರ್ ವಾಟರ್ ಹೀಟರ್ ಗಳ ಮೇಲೆ 5% ಇದ್ದದ್ದನ್ನು 12% ಮಾಡಿದ್ದಾರೆ. ಎಲ್.ಇ.ಡಿ ಬಲ್ಬ್ ಗಳಿಗೆ 12% ಇಂದ 18%, ಬ್ಯಾಂಕ್ ಚೆಕ್ ಪುಸ್ತಕಗಳಿಗೆ 0% ಇಂದ 18% ಗೆ ತೆರಿಗೆ ಏರಿಕೆ ಮಾಡಿದ್ದಾರೆ. ರೈತರ ಹಣ್ಣು, ತರಕಾರಿಗಳನ್ನು ಬೇರ್ಪಡಿಸುವ ಉಪಕರಣಗಳ ಮೇಲೆ ತೆರಿಗೆ 5% ಇಂದ 18% ಮಾಡಿದ್ದಾರೆ. ಬಾವಿಗಳಿಂದ ನೀರೆತ್ತಲು ಬಳಸುವ ಸಬ್ ಮೆರಿನ್ ಪಂಪ್ ಹಾಗೂ ಮೋಟಾರ್ ಗಳಿಗೆ 12% ಇಂದ 18% ಗೆ ತೆರಿಗೆ ಏರಿಕೆ ಮಾಡಿದ್ದಾರೆ. ಬರೆಯುವ ಹಾಗೂ ಮುದ್ರಿಸುವ ಇಂಕ್ ಗಳ ಮೇಲೆ 12% ಇಂದ 18% ತೆರಿಗೆ ಹೆಚ್ಚಳ ಮಾಡಿದ್ದಾರೆ. ಇಟ್ಟಿಗೆ ತಯಾರಿಸುವ ಜಾಗ್ ವರ್ಕ್ ಗಳ ಮೇಲಿನ ಜಿಎಸ್ ಟಿ ಯನ್ನು 5% ಇಂದ 12% ಗೆ ಹೆಚ್ಚಿಸಿದ್ದಾರೆ. ಶೈಕ್ಷಣಿಕ ಬಳಕೆಯ ಭೂಪಟ, ಗ್ಲೋಬ್ ಗಳ ಮೇಲೆ 0% ಇಂದ 12% ಗೆ ತೆರಿಗೆ ಹಾಕಿದ್ದಾರೆ. ಇದು ಇಂದಿನಿಂದ ಜಾರಿಯಾಗುತ್ತಿದೆ. ನರೇಂದ್ರ ಮೋದಿ ಅವರ ಅಚ್ಚೇದಿನ್ ಭಾಗವೇ ಇದು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಈ ಮೇಲಿನ ಎಲ್ಲಾ ಪದಾರ್ಥಗಳು ಬಡ ಮತ್ತು ಮಧ್ಯಮ ವರ್ಗದ ಜನರು ಬಳಸುವ ವಸ್ತುಗಳಾಗಿವೆ. ಮೊದಲೇ ಬೆಲೆಯೇರಿಕೆ ಇದೆ, ಇಂಥಾ ಸಂದರ್ಭದಲ್ಲಿ ಜಿಎಸ್ ಟಿ ಹೆಚ್ಚಳ ಮಾಡಿದರೆ ಜನರು ಪಾರಾಗೋದು ಹೇಗೆ? ಕಾರ್ಪೋರೇಟ್ ತೆರಿಗೆಯನ್ನು 30% ಇಂದ 22% ಗೆ ಇಳಿಕೆ ಮಾಡಿದ್ದಾರೆ. ಬಡವರ ಮೇಲೆ ತೆರಿಗೆ ಹೆಚ್ಚು ಮಾಡಿದ್ದಾರೆ. ನಿರುದ್ಯೋಗಿಗಳಿಗೆ, ರೈತರಿಗೆ, ಕೂಲಿಕಾರರಿಗೆ, ಬೀದಿ ವ್ಯಾಪಾರಿಗಳಿಗೆ ಇಂದರಿಂದ ತೊಂದರೆಯಾಗುತ್ತದೆ. ಬಡವರ ರಕ್ತ ಹೀರುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿದೆ, ಇದಕ್ಕೆ ಎಲ್ಲಾ ರಾಜ್ಯ ಸರ್ಕಾರಗಳು ಸಾಥ್ ಕೊಡುತ್ತಿವೆ ಎಂದು ಅವರು ದೂರಿದರು.

ಮೋದಿ ಅವರು 8 ವರ್ಷಗಳ ಹಾಗೂ ಬಸವರಾಜ ಬೊಮ್ಮಾಯಿ ಅವರು ತಮ್ಮ ಒಂದು ವರ್ಷದ ಸರ್ಕಾರದ ಸಾಧನೆಯನ್ನು ಆಚರಿಸುತ್ತಿದ್ದಾರೆ. ಆದರೆ ಜನರಿಗೆ ಬೆಲೆಯೇರಿಕೆ, ನಿರುದ್ಯೋಗ, ರೈತರಿಗೆ ಗೊಬ್ಬರ ಕೊರತೆ ಆಗಿರುವ ಬಗ್ಗೆ ಇವರು ಮಾತನಾಡುವುದಿಲ್ಲ. ನಾನು ಹೋದ ಕಡೆಯೆಲ್ಲಾ ರೈತರು ಬಂದು ಗೊಬ್ಬರಕ್ಕಾಗಿ ದೂರು ಕೊಡುತ್ತಿದ್ದಾರೆ. ಇವರ ಯೋಗ್ಯತೆಗೆ ರೈತರಿಗೆ ಗೊಬ್ಬರ ಕೊಡೋಕೆ ಆಗುತ್ತಿಲ್ಲ.  ಜಿಎಸ್ ಟಿ ಹೆಚ್ಚಳದಿಂದ ಸಣ್ಣ ಮತ್ತು ಗುಡಿ ಕೈಗಾರಿಕೆಗಳು ಉಳಿಯುತ್ತವಾ? ಇದರಿಂದ ಪಾರಾಗಲು ಅವು ಬೆಲೆ ಹೆಚ್ಚಳ ಮಾಡುತ್ತವೆ. ಇದರಿಂದ ಬಳಕೆದಾರರ ಮೇಲೆ ಹೆಚ್ಚು ಭಾರ ಬೀಳುತ್ತದೆ. ಬೆಲೆ ಹೆಚ್ಚಿದ ಕಾರಣಕ್ಕೆ ಖರೀದಿ ಕಡಿಮೆಯಾದರೆ ಈ ಸಣ್ಣ ಮತ್ತು ಗುಡಿ ಕೈಗಾರಿಕೆಗಳು ಮುಚ್ಚಿಹೋಗುತ್ತವೆ. ಜಿಎಸ್ ಟಿ ಜಾರಿಯಾದ ಮೇಲೆ 60% ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು ಬಂದ್ ಆಗಿವೆ. ನೋಟು ರದ್ದತಿ, ಜಿಎಸ್ ಟಿ ಜಾರಿಗೆ ಮೊದಲು ಈ ಕೈಗಾರಿಕೆಗಳಲ್ಲಿ ಸುಮಾರು 10 ಕೋಟಿ ಉದ್ಯೋಗ ಇದ್ದವು, ಈಗದು ಕೇವಲ ಎರಡೂವರೆ ಕೋಟಿಗೆ ಇಳಿದಿದೆ. ದೇಶದ ನಿರುದ್ಯೋಗ ಬೆಳವಣಿಗೆ ದರ 8% ಇದೆ. 2019 ರಲ್ಲಿ ರೈಲ್ವೇ ಇಲಾಖೆಯ ಸಿ ಮತ್ತು ಡಿ ದರ್ಜೆಯ 35,000 ಹುದ್ದೆಗಳಿಗೆ ಅರ್ಜಿ ಕರೆದಿದ್ದರು, ಇದಕ್ಕೆ ಎಸ್ ಎಸ್ಎಲ್ ಸಿ, ಪಿಯುಸಿ, ಡಿಗ್ರಿ, ಮಾಸ್ಟರ್ ಡಿಗ್ರಿ, ಪಿಹೆಚ್ ಡಿ ಪದವೀಧರರು ಸೇರಿದಂತೆ ಒಟ್ಟು 1 ಕೋಟಿ 26 ಲಕ್ಷ ಜನ ಅರ್ಜಿ ಸಲ್ಲಿಸಿದ್ದರು. 1 ಹುದ್ದೆಗೆ ಸುಮಾರು 130 ಜನರಂತೆ ಅರ್ಜಿ ಹಾಕಿದ್ದರು. ಇದು ಇಂದಿನ ನಿರುದ್ಯೋಗ ಸಮಸ್ಯೆಯ ನೈಜ ಮುಖವನ್ನು ಅನಾವರಣಗೊಳಿಸಿದೆ ಎಂದು ಅವರು ಕುಟುಕಿದರು.

ಬೆಲೆಯೇರಿಕೆ ಮಾಡಿ ತಿಗಣೆ ರಕ್ತ ಹೀರಿದಂತೆ ಜನರ ರಕ್ತ ಕುಡಿಯುತ್ತಿದ್ದಾರೆ. ಇದರ ಜೊತೆಗೆ ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿದ್ದಾರೆ. ಗೋವಾದಲ್ಲಿ ಕಾಂಗ್ರೆಸ್ ನ 11 ಜನ ಗೆದ್ದು ಬಂದಿದ್ದರು. ಬಿಜೆಪಿಯವರು ಹೇಗಾದರೂ ಮಾಡಿ 2/3 ಬಹುಮತ ಪಡೆಯಬೇಕು ಎಂದು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ರಾಷ್ಟ್ರಪತಿ ಚುನಾವಣೆಗೆ ಮತದಾನ ಮಾಡಲು ಅವರನ್ನು ಹೋಟೆಲ್ ನಿಂದ ಕರೆದುಕೊಂಡು ಬಂದು ಮತದಾನ ಮಾಡಿಸಿದ್ದಾರೆ. ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಯಬೇಕು ಎಂದು ಒಂದು ಕಡೆ ಹೇಳುತ್ತಾ, ಪ್ರಜಾಪ್ರಭುತ್ವ, ಸಂವಿಧಾನವನ್ನು ಗಾಳಿಗೆ ತೂರಿ ದೇಶವನ್ನು ಹಾಳು ಮಾಡುತ್ತಿದ್ದಾರೆ. ಜನ ತಲೆಯೆತ್ತಲು ಸಾಧ್ಯವಾಗದ ಸ್ಥಿತಿ ಇದೆ ಎಂದು ಹೇಳಿದರು.

ಜನರ ಜೇಬಿನಲ್ಲಿ ದುಡ್ಡಿದ್ದರೆ ಮಾತ್ರ ಜಿಡಿಪಿ ಬೆಳೆಯುತ್ತದೆ. ಇಂದು 5 ಟ್ರಿಲಿಯನ್ ಡಾಲರ್ ಎಕಾನಮಿ ಮಾಡುತ್ತೇವೆ ಎಂದಿದ್ದರು. ಆಯ್ತಾ ಈಗ? ಜನಗಳಿಗೆ ಮೋಸ ಮಾಡುತ್ತಿದ್ದಾರೆ. ನಾ ಖಾವೂಂಗ, ನಾ ಖಾನೆದೂಂಗ ಎಂದು ಹೇಳುತ್ತಿದ್ದರು. ರಾಜ್ಯದಲ್ಲಿ 40% ಕಮಿಷನ್ ಸರ್ಕಾರ ಇದೆ ಎಂದು ಜಗಜಾಹೀರಾತಾಗಿದೆ. ಗುತ್ತಿಗೆದಾರರ ಸಂಘದವರು ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಆದರೆ ಈ ವರೆಗೆ ಯಾವ ಕ್ರಮ ಕೈಗೊಂಡಿಲ್ಲ. ಈಗ ನಮ್ಮತ್ರ ದಾಖಲೆ ಕೇಳುತ್ತಾರೆ. ಪತ್ರ ಬರೆದಿದ್ದರು ಗುತ್ತಿಗೆದಾರರ ಸಂಘದ ಅಧ್ಯಕ್ಷರು, ನಾನು ಬರೆದಿದ್ದಲ್ಲ. ಪತ್ರದ ಜೊತೆಗೆ ಮಾಧ್ಯಮಗಳಿಗೂ ಹೇಳಿಕೆ ಕೊಟ್ಟಿದ್ದಾರೆ. ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರ ಬಿಲ್ ಹಣ ಸಿಗದೆ ಆತ್ಮಹತ್ಯೆ ಮಾಡಿಕೊಂಡ, ಇದರಿಂದ ಈಶ್ವರಪ್ಪ ರಾಜೀನಾಮೆ ನೀಡಿದ್ರು. ಈ ರೀತಿ ಯಾವಾಗಲಾದರೂ ನಡೆದಿತ್ತಾ? ಇದನ್ನು ನಾವು ಹೇಳಿದ್ರೆ ಹಿಂದಿನ ಸರ್ಕಾರದ ಕಾಲದಲ್ಲೂ ನಡೆದಿತ್ತು ಎನ್ನುತ್ತಾರೆ, ಸರಿ ನಮ್ಮ ಕಾಲದಲ್ಲೂ ಇವೆಲ್ಲಾ ನಡೆದಿದ್ದರೆ ಆಗ ನೀವೇನು ಮಾಡುತ್ತಿದ್ರಿ? ಆಗ ಮಾತಾಡಿದ್ರಾ? ಈಗ ತನಿಖೆ ಮಾಡ್ತೀವಿ ಎನ್ನುತ್ತಾರೆ. ಸರಿ ನಮ್ಮ ಕಾಲದ್ದೂ ಮತ್ತು ಈಗಿನ ಸರ್ಕಾರದ್ದೂ ಎರಡನ್ನೂ ನ್ಯಾಯಾಂಗ ತನಿಖೆಗೆ ಕೊಡಿ.

ನಮ್ಮ ಸರ್ಕಾರದ ಆಡಳಿತ ಗಬ್ಬೆದ್ದುಹೋಗಿತ್ತು ಎನ್ನುತ್ತಾರೆ, ನಾವು ಜನರಿಗೆ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು. ಈಗ 2018ರಲ್ಲಿ ಬಿಜೆಪಿಯವರು ಜನರಿಗೆ ನೀಡಿದ್ದ ಭರವಸೆಗಳಲ್ಲಿ 20% ಕೂಡ ಈಡೇರಿಸಿಲ್ಲ. ನಾವು 158 ಭರವಸೆಗಳ ಜೊತೆಗೆ 30 ಹೊಸ ಯೋಜನೆಗಳನ್ನು ಜಾರಿ ಮಾಡಿದ್ದೆವು. ಇಂದಿರಾ ಕ್ಯಾಂಟೀನ್, ಎಸ್.ಸಿ ಹಾಗೂ ಎಸ್.ಟಿ ಗಳಿಗೆ ಸರ್ಕಾರಿ ಕಾಂಟ್ರಾಕ್ಟ್ ಗಳಲ್ಲಿ ಮೀಸಲಾತಿ ನೀಡುತ್ತೇವೆಂದು ನಾವು ಭರವಸೆ ಕೊಟ್ಟಿರಲಿಲ್ಲ, ಶೂ ಭಾಗ್ಯ, ಪಶು ಭಾಗ್ಯ ಮಾಡುತ್ತೇವೆಂದು ಭರವಸೆ ನೀಡದ ಹೊರತಾಗಿಯೂ ಇವೆಲ್ಲವನ್ನೂ ಜಾರಿ ಮಾಡಿದ್ದೇವೆ. ಈ ಬಿಜೆಪಿಯವರು ತಮ್ಮ ಪ್ರಣಾಳಿಕೆಯನ್ನು ಒಮ್ಮೆ ತೆಗೆದು ನೋಡಲಿ. ಅವರಿಗೆ ಮಾನ ಮರ್ಯಾದಿ ಇದ್ದರೆ ಮಾತನಾಡಲೇ ಬಾರದು. ಬಿಜೆಪಿಯ 80% ಭರವಸೆಗಳು ಪೂರ್ಣವಾಗದೆ ಹಾಗೆ ಬಿದ್ದಿದೆ.

ಪಿಎಸ್ ಐ ನೇಮಕಾತಿಯಲ್ಲಿ 545 ಅಭ್ಯರ್ಥಿಗಳ ಪೈಕಿ 300 ಜನರಿಂದ ಹಣ ಪಡೆದು ಉತ್ತರ ಪತ್ರಿಕೆಗಳನ್ನು ತಿದ್ದಿದ್ದಾರೆ. ಅಮ್ರಿತ್ ಪೌಲ್, ಶಾಂತಕುಮಾರ್ ಸೇರಿ ಸುಮಾರು 50 ಜನರ ಬಂಧನವಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಈ ಪಿಎಸ್ಐ ನೇಮಕಾತಿಯಲ್ಲಿ ಹಗರಣ, ಅಕ್ರಮ ನಡೆದಿಲ್ಲ ಎಂದು ಸದನದಲ್ಲಿ ಉತ್ತರ ನೀಡಿದ್ದಾರೆ. ಇದು ದಾಖಲೆಗಳಲ್ಲಿ ಇದೆ. ಇಷ್ಟು ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ಯಾವತ್ತೂ ನಡೆದಿಲ್ಲ. ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಚುನಾವಣೆ ಭಾಷಣ ಮಾಡುವಾಗ ನಮ್ಮದು 10% ಸರ್ಕಾರ ಎಂದು ಆಧಾರ ರಹಿತ ಆರೋಪ ಮಾಡಿದ್ದರು, ಇಂದು 40% ಕಮಿಷನ್ ಸರ್ಕಾರ ಇದೆ. ಈಗ ಆರೋಪಗಳಿಗೆ ದಾಖಲಾತಿ ಕೇಳುತ್ತಿದ್ದಾರೆ.

ವಿರೋಧ ಪಕ್ಷವಾಗಿ ನಾವು ಯಾವಾಗೆಲ್ಲ ಸರ್ಕಾರದ ವಿರುದ್ಧ ಆರೋಪಗಳು ಬರುತ್ತದೆ, ಜನ ವಿರೋಧಿ ಕಾನೂನುಗಳು ಜಾರಿಯಾಗುತ್ತದೆ ಆಗ ಹೋರಾಟ ಮಾಡಿದ್ದೇವೆ. ಈಶ್ವರಪ್ಪ ಅವರು ಸುಮ್ಮನೆ ರಾಜೀನಾಮೆ ನೀಡಿದ್ರಾ? ನಮ್ಮ ಹೋರಾಟದ ಫಲದಿಂದ ಅವರು ರಾಜೀನಾಮೆ ನೀಡಿದ್ದು. ನಮ್ಮ ಕೆಲಸವನ್ನು ನಾವು ಮಾಡುತ್ತಲೇ ಇದ್ದೇವೆ.

ಈಗ ಜಿಎಸ್ ಟಿ ಹಾಕಿರೋದನ್ನು ಹೇಗೆ ಮತ್ತೆ ಕ್ಲೈಮ್ ಮಾಡೋಕೆ ಬರುತ್ತೆ? ಕ್ಲೈಮ್ ಮಾಡೋಕೆ ಬರೋದಾದ್ರೆ ಜಿಎಸ್ ಟಿ ಯಾಕೆ ಹಾಕಿದ್ದು? ಜಿಎಸ್ ಟಿ ಕೌನ್ಸಿಲ್ ನಲ್ಲಿ ಬಿಜೆಪಿಯವರ ಮಾತುಗಳೇ ನಡೆಯುವುದು. ಬಿಜೆಪಿಯೇತರ ರಾಜ್ಯಗಳು ಜಿಎಸ್ಟಿ ಪರಿಹಾರವನ್ನು ಮುಂದುವರೆಸಬೇಕು ಎಂದು ಜೂನ್ 29 ರಂದು ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಒತ್ತಾಯ ಮಾಡಿದ್ದವು, ಅದನ್ನು ಮಾಡಿದ್ರಾ? ಅವರ ಮಾತಿಗೆ ಬೆಲೆ ಕೊಟ್ಟಿದ್ದಾರ? ಜಿಎಸ್ಟಿ ಜಾರಿ ಮೊದಲು ರಾಜ್ಯದ ತೆರಿಗೆ ಬೆಳವಣಿಗೆ ದರ 14% ಇತ್ತು, ಈಗ 6% ಗೆ ಇಳಿದಿದೆ. 8% ನಷ್ಟವಾಗುತ್ತಿದೆ, ಇದನ್ನು ಯಾರು ಕೊಡೋರು? ಸೆಸ್ ಹಾಕಿದ್ರು, ಇದರಲ್ಲಿ ನಮಗೆ ಪಾಲಿಲ್ಲ.

ನಮ್ಮ ರಾಜ್ಯಕ್ಕೆ 5,495 ಕೋಟಿ ವಿಶೇಷ ಅನುದಾನ ಕೊಡಬೇಕು ಎಂದು ಹಣಕಾಸು ಆಯೋಗದವರು ಶಿಫಾರಸು ಮಾಡಿದ್ದರು. 14 ಹಾಗೂ 15ನೇ ಹಣಕಾಸು ಆಯೋಗದ ನಡುವೆ ನಮ್ಮ ಪಾಲು 1.07% ಕಡಿಮೆಯಾಗಿದ್ದರಿಂದ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ 5,495 ಕೋಟಿ ಶಿಫಾರಸು ಮಾಡಿತ್ತು. ನಿರ್ಮಲಾ ಸೀತಾರಾಮನ್ ಅವರು ನಮ್ಮ ರಾಜ್ಯದಿಂದ ಆಯ್ಕೆಯಾಗಿ ರಾಜ್ಯಸಭಾ ಸದಸ್ಯರಾಗಿದ್ದಾರೆ. ಅವರೇ ಕೊಡೋದು ಬೇಡ ಎಂದಿದ್ದು. ಮತ್ತೆ ನಿರ್ಮಲಾ ಸೀತಾರಾಮನ್ ಅವರನ್ನೇ ಎರಡನೇ ಬಾರಿಗೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆ ಮಾಡಿದ್ದಾರೆ.  ರಾಜ್ಯವನ್ನು ಹಾಳು ಮಾಡಿ ಸಾಧನಾ ಸಮಾವೇಶ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

  ಮಾರ್ಗರೇಟ್ ಆಳ್ವ ಅವರು ಒಬ್ಬ ಅನುಭವಿ ರಾಜಕಾರಣಿ. ರಾಜ್ಯಸಭೆ, ಲೋಕಸಭೆ ಸದಸ್ಯರಾಗಿದ್ದರು, ಕೇಂದ್ರದ ಮಂತ್ರಿ ಹಾಗೂ ಮೂರು- ನಾಲ್ಕು ರಾಜ್ಯಗಳಿಗೆ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಇವರನ್ನು ಶರದ್ ಪವಾರ್ ಅವರು ವಿರೋಧ ಪಕ್ಷಗಳ ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ. ಇದನ್ನು ನಾನು ಸ್ವಾಗತಿಸುತ್ತೇನೆ. ಒಬ್ಬ ಮಹಿಳೆ, ಮುತ್ಸದ್ದಿ ರಾಜಕಾರಣಿ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕರ್ನಾಟಕದಲ್ಲಿ ಓದಿ ಲಾಯರ್ ಆಗಿ, ನಂತರ ಉನ್ನತ ಹುದ್ದೆಗೆ ಏರಿದವರನ್ನು ಅಭ್ಯರ್ಥಿ ಮಾಡಿದ್ದಾರೆ. ಇದನ್ನು ನಾವು ಸ್ವಾಗತಿಸುತ್ತೇವೆ ಮತ್ತು ಅವರನ್ನು ಗೆಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಬಹಳ ವರ್ಷ ಬಿಜೆಪಿ ಅಭ್ಯರ್ಥಿಗಳು ಗೆದ್ದಿರಲಿಲ್ಲ, ಆಗ ಅವರನ್ನು ಹರಕೆ ಕುರಿ ಮಾಡಿದ್ದ? ವಿರೋಧ ಪಕ್ಷಗಳೆಲ್ಲ ಒಗ್ಗಟ್ಟಾಗಿ ಮತ ಹಾಕಿದರೆ 30% ಇರುವ ಬಿಜೆಪಿ ಶಾಸಕರಿಂದ ಗೆಲ್ಲೋಕೆ ಆಗುತ್ತಿತ್ತಾ? ಜಿಡಿಎಸ್, ನವೀನ್ ಪಟ್ನಾಯಕ್, ಎಐಡಿಎಂಕೆ, ಉದ್ಧವ್ ಠಾಕ್ರೆ ಎಲ್ಲಾ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುತ್ತಿದ್ದಾರೆ. ಜೆಡಿಎಸ್ ಅನ್ನು ಜಾತ್ಯತೀತ ಪಕ್ಷ ಎನ್ನುತ್ತಾರೆ, ಆದ್ದರಿಂದ ನೀವು ದೇವೇಗೌಡರನ್ನೇ ಈ ಬಗ್ಗೆ ಕೇಳಬೇಕು. ದೇವೇಗೌಡರು ಮಮತಾ ಬ್ಯಾನರ್ಜಿ ಅವರು ಕರೆದಿದ್ದ ಸಭೆಗೂ ಹೋಗಿದ್ದರು, ಅಲ್ಲಿಂದ ಬಂದಮೇಲೆ ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಮತ್ತೆ ಸ್ಪರ್ಧೆ ಮಾಡಲ್ಲ, ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಜನ ನನ್ನನ್ನು ಸೋಲಿಸಿದ್ದಾರೆ. ಹಾಗಾಗಿ ಮತ್ತೆ ಅಲ್ಲಿಂದ ಸ್ಪರ್ಧೆ ಮಾಡಲ್ಲ ಎಂದು ಪ್ರಶ್ನೆಯೊಂದಕ್ಕೆ ಸಿದ್ದರಾಮಯ್ಯ ತಿಳಿಸಿದರು.

Join Whatsapp