ಸಾಯೋಕೆ ನನ್ನ 1.5 ಕೋಟಿ ರೂ. ಕಾರೇ ಆಗಬೇಕಿತ್ತಾ: ಸುಟ್ಟು ಹಾಕ್ರೋ ಗಾಡಿನ: ಬೈಕ್ ಸವಾರನಿಗೆ ಭವಾನಿ ರೇವಣ್ಣ ನಿಂದನೆ

Prasthutha|

ಮೈಸೂರು: ಕಾರಿಗೆ ಡಿಕ್ಕಿ ಹೊಡೆದಿದ್ದಕ್ಕೆ ಶಾಸಕ ಎಚ್ ಡಿ ರೇವಣ್ಣರ ಪತ್ನಿ ಭವಾನಿ ರೇವಣ್ಣ ಬೈಕ್ ಸವಾರನಿಗೆ ಅವಾಚ್ಯವಾಗಿ ನಿಂದಿಸಿದ ಘಟನೆ ಬೆಳಕಿಗೆ ಬಂದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಾನವೀಯತೆ ಮರೆತು ವರ್ತಿಸಿದ ಭವಾನಿ ರೇವಣ್ನರ ನಡೆಗೆ ಆಕ್ರೋಶ ವ್ಯಕ್ತಪಡಸಿದ್ದಾರೆ.

- Advertisement -

ಭಾನುವಾರ (ಡಿಸೆಂಬರ್‌3) ಮೈಸೂರು ಜಿಲ್ಲೆ ಸಾಲಿಗ್ರಾಮ ಸಮೀಪ ಭವಾನಿ ರೇವಣ್ಣ ಅವರು ಸಂಚರಿಸುತ್ತಿದ್ದ ಕಾರಿಗೆ ವಿರುದ್ಧ ದಿಕ್ಕಿನಿಂದ ಬಂದ ಬೈಕ್ ಸವಾರ, ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಕಾರಿನ ಮುಂಭಾಗಕ್ಕೆ ತುಸು ಹಾನಿಯಾಗಿದೆ.

ಈ ವೇಳೆ ಕೆಂಡಾಮಂಡಲಗೊಂಡ ಭವಾನಿ ರೇವಣ್ಣ ಅವರು ಕಾರಿನಿಂದ ಇಳಿದು, ಬೈಕ್‌ ಸವಾರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಿಡಿಯೋದಲ್ಲಿ ಭವಾನಿ ರೇವಣ್ಣ ಅವರು ಕಾರಿನಿಂದ ಇಳಿದು ಬಂದು ಬೈಕ್ ಸವಾರನ ಆರೋಗ್ಯ ವಿಚಾರಿಸಿಲ್ಲ. ಬದಲಿಗೆ ಹಿಗ್ಗಾಮುಗ್ಗಾ ಬೇದಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

- Advertisement -

ಸಾಯೋಕೆ 1.5 ಕೋಟಿ ಕಾರೇ ಆಗಬೇಕಿತ್ತಾ, ಸುಟ್ಟು ಹಾಕ್ರೋ ಈ ಗಾಡಿನ ಎಂದು ಹೇಳಿರುವುದು ಕಂಡು ಬಂದಿದೆ. ಸಾಯೋ ಆಗಿದ್ರೆ ಬಸ್ಸಿನ ಚಕ್ರಕ್ಕೆ ಸಿಕ್ಕಾಕೊಂಡು ಸಾಯಬೇಕಿತ್ತು, ಒಂದೂವರೆ ಕೋಟಿ ಬೆಲೆಬಾಳುವ ನನ್ನ ಕಾರೇ ಆಗಬೇಕಿತ್ತಾ ಎಂದು ಅಹಂಕಾರಕ ಮಾತುಗಳಿಂದ ನಿಂದಿಸಿದ್ದಾರೆ. ಅಷ್ಟು ಸಾಲದೆಂಬಂತೆ ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸುಟ್ಟುಹಾಕುವಂತೆ ಹೇಳಿದ್ದಾರೆ. ಈ ವೇಳೆ ಸ್ಥಳೀಯರು ಮಧ್ಯೆ ಪ್ರವೇಶಿಸಿದ್ದಾರೆ. ಏನೋ ತಪ್ಪಾಗಿದೆ ಬಿಟ್ಟುಬಿಡಿ ಎಂದಿ ಸ್ಥಳೀಯರ ಮೇಲೂ ಭವಾನಿ ರೇವಣ್ಣ ಕೂಗಾಡಿದ್ದಾರೆ. ಏನು ಬಿಟ್ಟುಬಿಡೋದು ಈಗ ಕಾರು ರಿಪೇರಿ ಮಾಡಿಸೋಕೆ ಐವತ್ತು ಲಕ್ಷ ಖರ್ಚು ಬರುತ್ತೆ ನೀವು ಕೊಡ್ತೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಘಟನೆ ಬಳಿಕ ಸಾಲಿಗ್ರಾಮ ಪೊಲೀಸ್ ಠಾಣೆಯ ಸಿಪಿಐ ಜಿ.ಕೃಷ್ಣರಾಜು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಸಂಬಂಧ ಬೈಕ್‌ ಸವಾರ ಶಿವಣ್ಣ ಅವರ ವಿರುದ್ಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.

Join Whatsapp