ಈದ್ ಆಚರಣೆಯ ವೇಳೆ ಸಮಾಜ ವಿರೋಧಿ ಶಕ್ತಿಗಳ ಬಗ್ಗೆ ಎಚ್ಚರ ವಹಿಸಿ: ಮುಸ್ಲಿಮ್ ಸಂಘಟನೆಗಳ ಮನವಿ

Prasthutha|

ನವದೆಹಲಿ: ಈದುಲ್ ಫಿತ್ರ್ ಹಬ್ಬದ ಸಂದರ್ಭದಲ್ಲಿ ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಎಚ್ಚರಿಕೆ ವಹಿಸುವಂತೆ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಸೇರಿದಂತೆ ಹಲವು ಮುಸ್ಲಿಮ್ ಸಂಘಟನೆಗಳು ಮುಸ್ಲಿಮ್ ಸಮುದಾಯಕ್ಕೆ ಕರೆ ನೀಡಿವೆ.

- Advertisement -

ಇಂತಹ ಶಕ್ತಿಗಳ ವಿರುದ್ಧ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮುಸ್ಲಿಮ್ ಮುಖಂಡರು ಮನವಿ ಮಾಡಿದ್ದಾರೆ.

ಮುಸ್ಲಿಮರು ಈದುಲ್ ಫಿತ್ರ್ ಹಬ್ಬವನ್ನು ತಮ್ಮವರೊಂದಿಗೆ ಸಂಭ್ರಮದಿಂದ ಆಚರಿಸುವಂತಾಗಬೇಕು. ಪ್ರತಿಯೊಬ್ಬರೊಂದಿಗೆ ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯವನ್ನು ಬೆಸೆಯುವ ಕಾರ್ಯಕ್ಕೆ ಮುಂದಾಗಬೇಕು. ಯಾವುದೇ ಸಮಾಜ ವಿರೋಧಿ ಮತ್ತು ದುಷ್ಟಶಕ್ತಿಗಳಿಗೆ ಕಿಡಿಗೇಡಿತನ ಹರಡಲು ಅವಕಾಶ ನೀಡಬಾರದು ಎಂದು ಹಲವು ಸಂಘಟನೆಗಳು ಮನವಿ ಮಾಡಿವೆ.

- Advertisement -

ಈ ಮನವಿಗೆ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಜಮಿಯತ್ ಉಲೇಮಾ-ಇ-ಹಿಂದ್, ಜಮಾಅತೆ ಇಸ್ಲಾಮಿ ಹಿಂದ್, ಶರಿಯಾ ಕೌನ್ಸಿಲ್, ಮರ್ಕಝ್ ಜಮೀಯತ್ ಅಹ್ಲೆ ಹದೀಸ್ ಹಿಂದ್, ಅಖಿಲ ಭಾರತ ಮುಸ್ಲಿಂ ಮಜ್ಲಿಸ್-ಇ ಮುಶಾವರ, ದಾರುಲ್ ಉಲೂಮ್, ದಿಯೋಬಂದ್ (ವಕ್ಫ್), ಶಿಯಾ ಜಾಮಿಯಾ ಮಸೀದಿಯ ಇಮಾಮ್ ಕಾಶ್ಮೀರಿ ಗೇಟ್, ಆಲ್ ಇಂಡಿಯಾ ಶಿಯಾ ಕೌನ್ಸಿಲ್ ಮತ್ತು ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಅನುಮೋದನೆ ನೀಡಿದೆ.

“ಯಾರಾದರೂ ಕಿಡಿಗೇಡಿ ಕೃತ್ಯ ಮಾಡಲು ಪ್ರಯತ್ನಿಸಿದರೆ ಅಂತಹವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ. ಯಾವುದೇ ರೀತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಸ್ಥಳೀಯ ಆಡಳಿತದೊಂದಿಗೆ ಸಭೆಗಳನ್ನು ನಡೆಸಬೇಕು ಎಂದು ಮನವಿಯಲ್ಲಿ ಅಗ್ರಹಿಸಿದೆ.

ರಾಜ್ಯ, ಜಿಲ್ಲೆ ಮತ್ತು ಸ್ಥಳೀಯ ಮಟ್ಟದಲ್ಲಿ ಇತರ ಧಾರ್ಮಿಕ ಮುಖಂಡ ಸಭೆಗಳನ್ನು ನಡೆಸುವಂತೆ ಮನವಿಯಲ್ಲಿ ಕರೆ ನೀಡಲಾಗಿದ್ದು,
ಅಗತ್ಯವಿರುವ ಕಡೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಮುಸ್ಲಿಮ್ ಸಂಘಟನೆಗಳು ಶಿಫಾರಸು ಮಾಡಿದೆ.

Join Whatsapp