ಬಿಜೆಪಿ ನಾಯಕರ ವಾಹನ ಬರುವಾಗ ಜಾಗೃತವಾಗಿರಿ ಎಂದ ಡಿ.ಕೆ ಶಿವಕುಮಾರ್ !

Prasthutha|

► ಬಿಜೆಪಿಯವರು ಯಾವಾಗ, ಯಾರ ಮೇಲೆ ಕಾರು ಹತ್ತಿಸಿ ಕೊಲ್ಲುತ್ತಾರೆ ತಿಳಿಯುವುದಿಲ್ಲ

- Advertisement -

ಬೆಂಗಳೂರು: ಬಿಜೆಪಿ ನಾಯಕರು ಸಾಮಾನ್ಯ ಜನರ ಮೇಲೆ ವಾಹನ ಚಲಾಯಿಸಿದ ದಾಖಲೆ ಹೊಂದಿದ್ದಾರೆ, ಕೇಸರಿ ಪಕ್ಷದ ಕುರಿತು ಜನರು ಜಾಗೃತರಾಗಿರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಿಜೆಪಿಗೆ ಟಾಂಗ್ ನೀಡಿದರು.


“ಸಾರ್ವಜನಿಕರಲ್ಲಿ ಮನವಿ: ಬಿಜೆಪಿ ನಾಯಕರ ಕಾರು ನಿಮ್ಮ ಪಕ್ಕದಲ್ಲಿ ಹೋಗುವಾಗ ನಿಮ್ಮ ಫೋನ್ ಕ್ಯಾಮರಾದಿಂದ ರೆಕಾರ್ಡ್ ಮಾಡಿಕೊಳ್ಳಿ. ಯಾವಾಗ, ಯಾರ ಮೇಲೆ ಕಾರು ಹತ್ತಿಸಿ ಕೊಲ್ಲುತ್ತಾರೆ ತಿಳಿಯುವುದಿಲ್ಲ. ಹೀಗಿದ್ದಾಗ, ನಿಮ್ಮ ವೀಡಿಯೊ ಮುಂದೆ ಮಹತ್ವದ ಸಾಕ್ಷ್ಯವಾಗಿರಲಿದೆ. ಇದು ದೇಶಕ್ಕೆ ನೀವು ನೀಡುವ ಉತ್ತಮ ಕೊಡುಗೆಯಾಗಿರಲಿದೆ. ” ಎಂದು ಶಿವಕುಮಾರ್ ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ.

- Advertisement -


ರೈತವಿರೋಧಿ ಕಾಯ್ದೆಯ ವಿರುದ್ಧ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಬಿಜೆಪಿ ನಾಯಕ ಜೀಪು ಚಲಾಯಿಸಿದ ವೀಡಿಯೊ ಶೇರ್ ಮಾಡಲಾಗಿದ್ದು, ಇಂಟರ್‌ ನೆಟ್‌ ನಲ್ಲಿ ವೈರಲ್ ಆಗಿದೆ. ಈ ವೀಡಿಯೊಕ್ಕೆ ಹೊಂದಿಕೊಂಡಂತೆ ಡಿ.ಕೆ ಶಿವಕುಮಾರ್ ಮೇಲಿನ ಟ್ವೀಟ್ ಮಾಡಿದ್ದಾರೆ.


ಇದೇ ವೇಳೆ, ಅಂಬಾಲಾ ಬಳಿಯ ನರೈನ್‌ ಘರ್‌ ನಲ್ಲಿ ಕೇಂದ್ರದ ರೈತ ಕಾಯ್ದೆಯ ವಿರುದ್ಧ ಪ್ರತಿಭಟಿಸುತ್ತಿದ್ದ ಜನರಗುಂಪಿಗೆ ಬಿಜೆಪಿ ಸಂಸದ ನಯಾಬ್ ಸೈನಿ ಕಾರು ಡಿಕ್ಕಿ ಹೊಡೆದಿದ್ದಾರೆ ಎಂದು ಗುರುವಾರ ಹರ್ಯಾಣದಲ್ಲಿ ರೈತರು ಆರೋಪಿಸಿದ್ದಾರೆ. “ಯಾವುದೇ ಬಿಜೆಪಿ ನಾಯಕರು ನಿಮ್ಮ ಪಕ್ಕದಲ್ಲಿ ಹಾದುಹೋಗುವಾಗ ಎಚ್ಚರದಿಂದಿರಿ. ಇತ್ತೀಚೆಗೆ ಬಿಜೆಪಿ ನಾಯಕರು ಜನರ ಮೇಲೆ ವಾಹನ ಚಲಾಯಿಸಿ ಸಾಯಿಸುತ್ತಿದ್ದಾರೆ. ಇಂತಹ ಘಟನೆ ನಡೆದರೆ ರೆಕಾರ್ಡ್ ಮಾಡಿ ಮತ್ತು ಜಾಗೃತರಾಗಿರಿ ಎಂದು ಪ್ರತಿಯೊಬ್ಬರಲ್ಲೂ ನಾನು ವಿನಂತಿಸಿಕೊಳ್ಳುತ್ತೇನೆ.” ಎಂದು ಡಿ.ಕೆ ಶಿವಕುಮಾರ್ ಹೇಳಿದರು.


ಬಿಜೆಪಿ ಸರ್ಕಾರದ ಅತಿರೇಕದ ವಿರುದ್ಧ ಸೋಮವಾರದಂದು ಕರ್ನಾಟಕ ಕಾಂಗ್ರೆಸ್, ಕೆಪಿಸಿಸಿ ಕಚೇರಿಯಿಂದ ರಾಜಭವನದವರೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಮತ್ತೊಂದೆಡೆ, ಬಿಜೆಪಿ ನಾಯಕರ ದರ್ಪವನ್ನು ಖಂಡಿಸಲು ಮತ್ತು ದುರ್ಘಟನೆಗೆ ಸಂಬಂಧಿಸಿದ ಪ್ರಮುಖ ಆರೋಪಿಗಳನ್ನು ಬಂಧಿಸದ ಪೊಲೀಸರ ಕಾರ್ಯವೈಖರಿಯ ವಿರುದ್ಧ ಕಾಂಗ್ರೆಸ್ ನಾಯಕರು ಉತ್ತರ ಪ್ರದೇಶದಲ್ಲಿ ಪ್ರತಿಭಟಿಸಿದರು.


ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ರೈತವಿರೋಧಿ ಕಾಯ್ದೆಯ ವಿರುದ್ಧ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಜೀಪು ಚಲಾಯಿಸುವಂತೆ ಚಾಲಕನಿಗೆ ಪ್ರೇರೇಪಿಸಿದ್ದಾನೆ. ಮೃತ ರೈತರ ಕುಟುಂಬಗಳನ್ನು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತು ಪ್ರಮುಖ ಕಾಂಗ್ರೆಸ್ ಮುಖಂಡರು ಭೇಟಿ ಮಾಡಿ ಸಾಂತ್ವನ ಕೋರಿದ್ದಾರೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಾದ ಪಂಜಾಬ್ ಮತ್ತು ಚತ್ತೀಸ್‌ ಗಢ್ ಸರ್ಕಾರಗಳು ತಲಾ 50 ಲಕ್ಷ ರೂ.ಗಳ ಪರಿಹಾರ ನೀಡುತ್ತಿದ್ದು, ಪ್ರತಿ ಕುಟುಂಬಕ್ಕೆ ಒಟ್ಟೂ 1 ಕೋಟಿ ರೂ.ಪರಿಹಾರ ದೊರೆಯಲಿದೆ.

Join Whatsapp