ಬೃಹತ್ ಭಾರತೀಯ ಕಲ್ಯಾಣ ಪಕ್ಷದ ಮಡಿಕೆ ಚಿಹ್ನೆ ಬಿಡುಗಡೆ

Prasthutha|

- Advertisement -

ಬೆಂಗಳೂರು ಕರ್ನಾಟಕದಲ್ಲಿ ಜನಪರವಾಗಿ ಎಲೆಮರೆ ಕಾಯಿಯಂತೆ ಕೆಲಸ ಮಾಡುತ್ತಿದ್ದ ತಂಡವೊಂದು ಸದ್ದಿಲ್ಲದೆ ಹೊಸ ಪಕ್ಷ ಸೃಷ್ಟಿ ಮಾಡಿ ಚುನಾವಣೆಗೆ ಸಜ್ಜಾಗಿದೆ. ಆ ಪಕ್ಷದ ಹೆಸರೇ ಬೃಹತ್ ಭಾರತೀಯ ಕಲ್ಯಾಣ ಪಕ್ಷ. ಇಂದು ಬಿಬಿಕೆಪಿ ಪಕ್ಷದ ಲೋಗೋ ಮಡಕೆ ಲೋಕಾರ್ಪಣೆಯಾಯಿತು.

ಹೊಸ ಬಗೆಯ ರಾಜಕಾರಣಕ್ಕಾಗಿ ಈಗ ಹೊಸ ಪಕ್ಷ ಉದಯವಾಗಿದ್ದು, ಈ ಪಕ್ಷದ ಸಂಸ್ಥಾಪಕರಾದ ಶಿವಾನಂದ ಎಸ್. ಹಾಸು ಈ ಲೋಗೋ ಉದ್ಘಾಟನೆ ಮಾಡಿದರು.

- Advertisement -

ನಗರದ ಖಾಸಗಿ ಹೋಟೆಲ್ ನಲ್ಲಿ ಲೋಗೋ ಲೊಕಾರ್ಪಣೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಿವಾನಂದ ಅವರು, ರಾಜ್ಯದಲ್ಲಿ ಈಗಿರುವ ರಾಜಕೀಯ ಪಕ್ಷಗಳಿಂದ ಅಭಿವೃದ್ಧಿ ರಾಜಕಾರಣಕ್ಕಿಂತ ಅಭಿವೃದ್ಧಿ ಶೂನ್ಯ ರಾಜಕಾರಣವೇ ಹೆಚ್ಚಾಗಿದೆ. ಹೀಗಾಗಿ ಅಭಿವೃದ್ಧಿಪರವಾದ ರಾಜಕಾರಣಕ್ಕೆ ನಾಂದಿ ಹಾಡಬೇಕು ಎಂಬ ಉತ್ಸುಕತೆಯಿಂದ ಈ ಹೊಸ ಪಕ್ಷವನ್ನು ಕಟ್ಟಿದ್ದೇವೆ. ಬೃಹತ್ ಭಾರತೀಯ ಕಲ್ಯಾಣ ಪಕ್ಷ ( BBKP) ನಮ್ಮ ಪಕ್ಷದ ಹೆಸರು. ನಮ್ಮದು ಕೇವಲ ಬೇರೆ ರಾಜಕೀಯ ಪಕ್ಷಗಳ ರೀತಿ ಜನರಿಗೆ ಭ್ರಮೆ ಹುಟ್ಟಿಸುವ ಪಕ್ಷವಲ್ಲ. ಪಕ್ಕಾ ಅಭಿವೃದ್ಧಿ ಕಲ್ಪನೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಕಟ್ಟಿದ್ದೇವೆ. ನಮ್ಮ ಕಾರ್ಯಕರ್ತರು, ಮುಖಂಡರು ಈಗಾಗಲೇ ಚುನಾವಣೆ ಅಖಾಡದಲ್ಲಿ ಸದ್ದಿಲ್ಲದೆ ಜನರ ಮದ್ಯೆ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಜನಸಾಮಾನ್ಯರ ಪರವಾಗಿ ಕೆಲಸ ಮಾಡುತ್ತ ಜನರಲ್ಲಿ ಒಂದಾಗಿ ನಿಜವಾದ ಜನನಾಯಕರಾಗಿರುವವರಿಗೆ ನಾವು ಟಿಕೆಟ್ ನೀಡುತ್ತಿದ್ದೇವೆ. ಶೀಘ್ರದಲ್ಲೇ ನಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿ ಹಾಗೂ ಜನಪರವಾದ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತೇವೆ. ಇಂದು ನಾವು ನಮ್ಮ ಪಕ್ಷದ ಲಾಂಛನ ಮಡಕೆಯವನ್ನು ಬಿಡುಗಡೆ ಮಾಡಿದ್ದೇವೆ ಎಂದು ಶಿವಾನಂದ ಹೇಳಿದರು.

ಮಡಿಕೆ ನಮ್ಮ ಪಕ್ಷದ ಗುರುತು. ಮನುಷ್ಯನ ನಾಗರಿಕತೆ ಶುರುವಾದಾಗ ಉದಯವಾದ ಮೊದಲ ಉಪಯುಕ್ತ ವಸ್ತು ಈ ಮಡಕೆ. ಹೀಗಾಗಿ ಮಡಿಕೆಯನ್ನು ನಮ್ಮ ಪಕ್ಷದ ಗುರುತಾಗಿ ನಾವು ಆಯ್ಕೆ ಮಾಡಿದ್ದೇವೆ. ಚುನಾವಣೆ ಆಯೋಗದಿಂದಲೂ ಅಧಿಕೃತವಾಗಿ ಈ ನಮ್ಮ ಮಡಕೆ ಗುರುತಿಗೆ ಸಮ್ಮತಿ ದೊರೆತಿದೆ. ಹೀಗಾಗಿ ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ಈ ಬಾರಿ ನಮ ಬೃಹತ್ ಭಾರತೀಯ ಕಲ್ಯಾಣ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದೇವೆ ಎಂದು ಹೇಳಿದರು.

25 ಸ್ಥಾನಗಳನ್ನು ಗೆದ್ದೇ ಗೆಲ್ತೇವೆ

ಈ ಬಾರಿ ನಮ್ಮ ಬಿಬಿಕೆಪಿ ಪಕ್ಷದಿಂದ ಸುಮಾರು 35 ಕಡೆಗಳಲ್ಲಿ ಜನಪರವಾಗಿ ಕೆಲಸ ಮಾಡಬಲ್ಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದೇವೆ. ಇದರಲ್ಲಿ ನಿಶ್ಚಿತವಾಗಿ ಸುಮಾರು 25 ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ನಮ್ಮ ಪ್ರಾದೇಶಿಕ ಪಕ್ಷ ನಿರ್ಣಾಯಕ ಪಾತ್ರವಹಿಸಲಿದೆ ಎಂದು ಶಿವಾನಂದ್ ಎಸ್. ಹಾಸು ಹೇಳಿದರು.

ಪಕ್ಷದ ಮುಖಂಡರಾದ ರಮೇಶ್ ಹಿರೇಜಂಬೂರು ಇದೇ ವೇಳೆ ಮಾತನಾಡಿ, ಕರ್ನಾಕದಲ್ಲಿ ಒಂದು ಹೊಸ ಬಗೆಯ ಮನ್ವಂತರಕ್ಕೆ ನಾಂದಿ ಹಾಡಲಿದೆ. ಕರ್ನಾಟಕದಲ್ಲಿ ಇತ್ತೀಚೆಗೆ ಕೇವಲ ಸ್ವಾರ್ಥ ರಾಜಕಾರಣವೇ ಹೆಚ್ಚಾಗಿ ಸದ್ದು ಮಾಡಿತ್ತಿದೆ. ಅದಕ್ಕೆ ಇತಿಶ್ರೀ ಹಾಡುವ ಸದುದ್ದೇಶದಿಂದ ಜನಪರವಾಗಿ ಚಿಂತಿಸುವ ಸಮಾನ ಮನಸ್ಕರೆಲ್ಲ ಸೇರಿ ಈ ಬಿಬಿಕೆಪಿ ಆರಂಭಿಸಿದ್ದೇವೆ. ಮನುಷ್ಯನ ಬದುಕು ಶುರುವಾಗಿದ್ದು ಮಣ್ಣಿನಿಂದಲೇ ಹೀಗಾಗಿ ಮಣ್ಣಿನಿಂದ ಮಾಡಿದ ಮಡಕೆಯನ್ನೇ ನಮ್ಮ ಪಕ್ಷದ ಗುರುತಾಗಿಸಿಕೊಂಡಿದ್ದೇವೆ. ಚುನಾವಣೆ ಆಯೋಗ ಕೂಡ ಈ ಮಡಕೆ ಗುರುತಿಗೆ ಈಗಾಗಲೇ ಮನ್ನಡೆ ನೀಡಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಲಕ್ಷ್ಮಣ ಇಳಿಗೇರ, ದೆಹಲಿಯ ಸಮೀರ್, ಕಾಶಿನಾಥ್ ಹೂಗಾರ, ಜಯಸ್ವಾಮಿ, ಜಗನ್ನಾಥ ಮತ್ತಿತರರು ಪಾಲ್ಗೊಂಡಿದ್ದರು.

Join Whatsapp