ಮಂಗಳೂರು: ನೀರು ತುಂಬಿದ ಬಕೆಟ್ ಗೆ ಬಿದ್ದು ಮಗು ಮೃತ್ಯು

Prasthutha|

ಮಂಗಳೂರು: ಆಟವಾಡುತ್ತಿದ್ದ ವೇಳೆ ಒಂದೂವರೆ ವರ್ಷದ ಮಗುವೊಂದು ನೀರು ತುಂಬಿದ ಬಕೆಟ್ ಒಳಗಡೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ನಡೆದಿದೆ.

- Advertisement -


ಮೂಲತಃ ತೋಕೂರು ನಿವಾಸಿ ಪ್ರಸ್ತುತ ಕಾಟಿಪಳ್ಳದಲ್ಲಿ ವಾಸವಿರುವ ನಝೀರ್ ಎಂಬವರ ಒಂದೂವರೆ ವರ್ಷ ಪ್ರಾಯದ ಮಗು ಮೃತಪಟ್ಟಿದ್ದು, ತಂದೆ ಮಗುವನ್ನು ಮಲಗಿಸಿ ಹೊರಗೆ ಹೋಗಿದ್ದರು. ತಾಯಿ ಮನೆ ಕೆಲಸದಲ್ಲಿ ನಿರತರಾಗಿದ್ದರು. ಎಚ್ಚರಗೊಂಡ ಮಗು ನೇರವಾಗಿ ಶೌಚಾಲಯಕ್ಕೆ ಹೋಗಿ ಬಕೆಟ್ ಗೆ ತಲೆ ಹಾಕಿದೆ. ಬಕೆಟ್ ನಲ್ಲಿ ಅರ್ಧಕ್ಕಿಂತಲೂ ಹೆಚ್ಚು ನೀರಿತ್ತು ಎನ್ನಲಾಗಿದೆ.
ಸ್ವಲ್ಪ ಹೊತ್ತಿನ ಬಳಿಕ ತಾಯಿ ಕೊಠಡಿಗೆ ಬಂದು ನೋಡಿದಾಗ ಮಗು ಅಲ್ಲಿರಲಿಲ್ಲ. ಎಲ್ಲಾ ಕಡೆ ಹುಡುಕಾಡಿದ ಬಳಿಕ ಶೌಚಾಲಯಕ್ಕೆ ಹೋಗಿ ನೋಡಿದಾಗ ಮಗು ಬಕೆಟ್ ನಲ್ಲಿ ತಲೆಕೆಳಗಾಗಿ ಬಿದ್ದಿರುವುದು ಕಂಡುಬಂತು. ತಕ್ಷಣ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಮಗು ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದ್ದಾರೆ.


ಮಗುವನ್ನು ಕಳೆದುಕೊಂಡ ತಂದೆ, ತಾಯಿ, ಕುಟುಂಬದವರ ಆಕ್ರಂದನ ಎಂತಹ ಕಲ್ಲೆದೆಯನ್ನೂ ಕರಗಿಸುವಂತಿತ್ತು.
ವಿಷಯ ತಿಳಿದ ಸುತ್ತಮುತ್ತಲ ಮನೆಯವರು ದುಃಖದ ಮಡುವಿನಲ್ಲಿ ಮುಳುಗಿದ್ದಾರೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Join Whatsapp