ಆರಗ ಜ್ಞಾನೇಂದ್ರ ರಾಜ್ಯದ ಇತಿಹಾಸದಲ್ಲೇ ಕಳಪೆ ಗೃಹ ಸಚಿವ: ಬಿ.ಕೆ. ಹರಿಪ್ರಸಾದ್ ವಾಗ್ದಾಳಿ

Prasthutha|

ಶಿವಮೊಗ್ಗ: ತೀರ್ಥಹಳ್ಳಿಯವರೇ ಆದ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜ್ಯದ ಇತಿಹಾಸದಲ್ಲೇ ಕಳಪೆ ಗೃಹ ಸಚಿವರಾಗಿದ್ದಾರೆ.  ಅವರು ಗೃಹಸಚಿವರಾದ ನಂತರ ಹೆಚ್ಚಾಗಿ ಅವರು ಕುಖ್ಯಾತಿಯಿಂದಲೇ ಹೆಸರು ಮಾಡಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

- Advertisement -

ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತಾಡಿದ ಬಿ.ಕೆ. ಹರಿಪ್ರಸಾದ್, ರಾಜ್ಯದಲ್ಲಿನ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಸಮಸ್ಯೆ ಉದ್ಭವಿಸಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪಾದಯಾತ್ರೆ ನಡೆಸುತ್ತಿದ್ದಾರೆ. ಕುಪ್ಪಳ್ಳಿ ಇಡೀ ವಿಶ್ವಕ್ಕೆ ಖ್ಯಾತಿ ತಂದ ಊರು, ಕುವೆಂಪುರವರು ವಿಶ್ವ ಮಾನವ ಸಂದೇಶ ನೀಡಿದರು. ಕುವೆಂಪು ಅವರಿಗೆ ಪಠ್ಯಪುಸ್ತಕದಲ್ಲಿ ಅವಮಾನ ಮಾಡಿದಾಗ ಇಲ್ಲಿನ ಶಾಸಕ-ಗೃಹ ಸಚಿವ ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಟೀಕಿಸಿದರು.

ರಾಷ್ಟ್ರಕವಿ ಕುವೆಂಪು ಅವರೇನು ಕಾಂಗ್ರೆಸ್ ಪಕ್ಷದವರಲ್ಲ. ಕುವೆಂಪು ಅವರಿಗೆ ಅಪಮಾನವಾದಾಗ ಆರಗ ಜ್ಞಾನೇಂದ್ರ ಪ್ರತಿಭಟಿಸಬಹುದಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಇದೀಗ ಬಿಜೆಪಿ ಪಠ್ಯ ಪರಿಷ್ಕರಣೆ ಮೂಲಕ ನಾಗಪುರ ಯೂನಿವರ್ಸಿಟಿ  ಅಂಶಗಳನ್ನು ಮಕ್ಕಳ ಮೇಲೆ ಹೇರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

- Advertisement -

 ಗೃಹ ಸಚಿವರಾದ ಬಳಿಕ ಒಂದೂ ಸರಿಯಾದ ಹೇಳಿಕೆ ನೀಡಿಲ್ಲ. ಅವರಿಂದಾಗಿ ಕರ್ನಾಟಕ ಉತ್ತರ ಪ್ರದೇಶದಂತೆ ಆಗುತ್ತಿದೆ. ಇಡೀ ಕರ್ನಾಟಕಕ್ಕೆ ಗೃಹ ಸಚಿವರಾಗಬೇಕಿದ್ದ ಆರಗ ಜ್ಞಾನೇಂದ್ರ ಪಿಎಸ್ ಐ ಹಗರಣದ ಬಳಿಕ ಕೇವಲ ಗುಡ್ಡೆಕೊಪ್ಪ ಗ್ರಾಮಕ್ಕೆ ಮಾತ್ರ ಗೃಹಸಚಿವರಾಗಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪಿಎಸ್ ಐ ಹಗರಣದಲ್ಲಿ ಮೊದಲು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿರುದ್ಧ ಮೊದಲ ದೂರು ದಾಖಲಾಗಬೇಕಿತ್ತು. ಆದರೆ ಆರಗ ಜ್ಞಾನೇಂದ್ರ ಇನ್ನು ಸಚಿವ ಸ್ಥಾನದಲ್ಲೇ ಇದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡಲೇ ಆರಗ ಜ್ಞಾನೇಂದ್ರ ಅವರನ್ನು ಸಚಿವ ಸ್ಥಾನದಿಂದ ಕಿತ್ತುಹಾಕಬೇಕು. ಬಿಜೆಪಿ ಜಾಯಮಾನವೇ ಬರಿ ಸುಳ್ಳು ಹೇಳುವುದು. ಮೋದಿ ತಮ್ಮ ಡಿಗ್ರಿ ಮಾರ್ಕ್ಸ್ ಕಾರ್ಡ್ ಗಳನ್ನು ಹುಡುಕುತ್ತಿದ್ದಾರೆ. ಅದಕ್ಕೂ ಒಂದು ಕೈ ಮೀರಿ ಶಿಕ್ಷಣ ಸಚಿವ ನಾಗೇಶ್ ಸುಳ್ಳುಗಾರ.  ಆರಂಭದಲ್ಲಿ ರೋಹಿತ್ ಚಕ್ರತೀರ್ಥ ಐಐಟಿ ಪ್ರಾಧ್ಯಾಪಕ ಎಂದು ಬಿಜೆಪಿಗರು ಹೇಳಿದ್ದರು. ಇತಿಹಾಸವನ್ನು ರಸ್ತೆಯಲ್ಲಿ ಹೋಗುವ ಪೋಕರಿಗಳು ಮಾಡುವಂತದ್ದಲ್ಲ. ಇತಿಹಾಸವನ್ನು ತಜ್ಞರು, ವಿದ್ವಾಂಸರು ರಚಿಸಬೇಕು. ಈಗ ಪಠ್ಯ ಪುಸ್ತಕ ಪರಿಷ್ಕರಣೆ 200 ಕೋಟಿ ಖರ್ಚಾಗಿರಬಹುದು ಎಂದು ಬಿಜೆಪಿಯ ವಿರುದ್ಧ ಹರಿಹಾಯ್ದರು.

ಎಳೆಯ ಮಕ್ಕಳಲ್ಲಿ ವಿಷ ಬೀಜ ಬಿತ್ತುವ ಪಠ್ಯ ಪುಸ್ತಕವನ್ನು ಕೂಡಲೇ ಹಿಂದೆಗೆದುಕೊಳ್ಳಬೇಕು. ಮಕ್ಕಳ ಭವಿಷ್ಯದ ಮೇಲೆ ಆಟ ಆಡುವುದು ಬಿಜೆಪಿಗೆ ಸಾಮಾನ್ಯವಾಗಿದೆ.  ಕಾಂಗ್ರೆಸ್ 70 ವರ್ಷದಿಂದ ಏನು ಮಾಡಿಲ್ಲ ಎಂದು ಹೇಳುವವರು ಮೂರ್ಖರು. ಮೂರ್ಖರ ಪ್ರಶ್ನೆಗಳಿಗೆ ಉತ್ತರ ಕೊಡಲು ಹೋಗುವುದಿಲ್ಲ. 70 ವರ್ಷದಲ್ಲಿ ನಾವು ಏನು ಮಾಡಿಲ್ಲ ಅಂದಾದರೆ, ವಿಶ್ವದ ಐದನೇ ಆರ್ಥಿಕ ಶಕ್ತಿಯಾಗಲ ನಮಗೆ ಸಾಧ್ಯವಾಗುತ್ತಿತ್ತೇ ಎಂದು ಅವರು ಪ್ರಶ್ನಿಸಿದರು. 

ಗೋ ಮಾಂಸ ಮಾರಾಟ ಮಾಡುವವರೇ ಸಂಘ ಪರಿವಾರದವರು. ಮಕ್ಕಳ ಮೇಲೆ ಧರ್ಮದ ವಿಷ ಬೀಜ ಬಿತ್ತಲಾಗುತ್ತಿದೆ. ಈಗಾಗಿಯೇ ಕರಾವಳಿ ಭಾಗದಲ್ಲಿ ಪರ್ಸಂಟೇಜ್ ಕಡಿಮೆಯಾಗುತ್ತಿದೆ ಎಂದು ಹರಿಪ್ರಸಾದ್ ಹೇಳಿದರು.

ನ್ಯಾಷನಲ್ ಹೆರಾಲ್ಡ್ ವಿಷಯದಲ್ಲಿ ಈಡಿ ವಿಚಾರಣೆ ವಿಚಾರದ ಬಗ್ಗೆ ಮಾತನಾಡಿದ ಅವರು, 2017 ರಲ್ಲಿ ಈಡಿ ಈ ಕೇಸ್ ಮುಚ್ಚಿ ಹಾಕಿತ್ತು. ನೂಪುರ್ ಶರ್ಮಾ, ನವೀನ್ ಜಿಂದಾಲ್ ಪ್ರಕರಣದ ದಿಕ್ಕು ತಪ್ಪಿಸಲು ಈಡಿ ಮುಂದಿಟ್ಟಿದ್ದಾರೆ. ಈಡಿ ಐಟಿ ಸಿಬಿಐಗೆ ಕಾಂಗ್ರೆಸ್ ಹೆದರುವುದಿಲ್ಲ. ಕೇಂದ್ರ ಗೃಹ ಸಚಿವರನ್ನು ಸುಪ್ರೀಂ ಕೋರ್ಟ್ ಎರಡು ವರ್ಷ ಗಡಿಪಾರು ಮಾಡಿತ್ತು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Join Whatsapp