ಆದಿತ್ಯನಾಥ್ ಭೇಟಿಯಾದ ಮುಸ್ಲಿಮ್ ಧಾರ್ಮಿಕ ವಿದ್ವಾಂಸ: ವ್ಯಾಪಕ ಆಕ್ರೋಶ

Prasthutha|

ನವದೆಹಲಿ,ಜು.31: ಬರೇಲ್ವಿಯ ಪ್ರಸಿದ್ಧ ದರ್ಗಾ-ಎ-ಆಲಾ ಹಜರತ್‌ ನ ಸಮಿತಿಯ ವರಿಷ್ಠ, ಧಾರ್ಮಿಕ ಮುಖಂಡ ಸಲ್ಮಾನ್ ರಝಾ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆ ರಹಸ್ಯ ಮಾತುಕತೆ ನಡೆಸಿರುವುದು ಬಹಿರಂಗಗೊಂಡಿದ್ದು, ರಝಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

- Advertisement -


ಸಲ್ಮಾನ್ ರಝಾ ಅವರು ಜಮಾಅತ್ ರಝಾ-ಇ-ಮುಸ್ತಫಾ (ಜೆಆರ್‌ಎಂ) ನ ಉಪಾಧ್ಯಕ್ಷರಾಗಿದ್ದಾರೆ, ಇದು ಬರೇಲ್ವಿ ಮುಸ್ಲಿಮರ ಅತಿದೊಡ್ಡ ಸಂಘಟನೆಯಾಗಿದ್ದು, ಇದು ಯುಪಿಯಲ್ಲಿರುವ ಈ ದರ್ಗಾದ ಮೇಲುಸ್ತುವಾರಿ ನೋಡಿಕೊಳ್ಳುತ್ತದೆ. ಮಾತ್ರವಲ್ಲ ಸಲ್ಮಾನ್ ಅವರು ಜೆ ಆರ್‌ ಎಂ ಅಧ್ಯಕ್ಷ ಅಸ್ಜದ್ ರಝಾ ಅವರ ಅಳಿಯ ಕೂಡ ಆಗಿದ್ದಾರೆ.


ಸಲ್ಮಾನ್ ಸುಮಾರು 25 ದಿನಗಳ ಹಿಂದೆ ಯೋಗಿಯನ್ನು ಭೇಟಿಯಾಗಿದ್ದಾರೆ. ಆದರೆ ಸಭೆಯ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುವವರೆಗೆ ಈ ವಿಷಯ ಯಾರಿಗೂ ತಿಳಿದಿರಲಿಲ್ಲ. ಸಭೆಯಲ್ಲಿ ಕಾಂಗ್ರೆಸ್ ರಾಜಕಾರಣಿ ಮೆಹದಿ ಹಸನ್ ಮತ್ತು ಸಮಾಜವಾದಿ ಪಕ್ಷದ ರಾಜಕಾರಣಿ ಇಕ್ರಮ್ ಕೂಡ ಜೊತೆಗಿದ್ದರು.

- Advertisement -


ದರ್ಗಾ-ಎ-ಆಲಾ ಹಜರತ್‌ ನ ಹಿರಿಯ ಮುಖಂಡ ಮತ್ತು ಅದರ ಪ್ರಸ್ತುತ ಅಧ್ಯಕ್ಷ ಅಸ್ಜದ್ ರಝಾ ಅವರ ಚಿಕ್ಕಪ್ಪ ಮನ್ನಾನ್ ರಝಾ ಖಾನ್ ಈ ಭೇಟಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.
“ಸಲ್ಮಾನ್ ರಝಾ ಅವರು ದರ್ಗಾವನ್ನು ಮಾರಾಟ ಮಾಡಲು ಹೋಗಿದ್ದಾರೆ. ನಮ್ಮ ಮತಗಳನ್ನು ಬಯಸದ ಅಥವಾ ನಮ್ಮನ್ನು ಇಷ್ಟಪಡದ ಮತ್ತು ಮುಸ್ಲಿಮರಿಗೆ ತೊಂದರೆಗಳನ್ನು ಕೊಡುವ ವ್ಯಕ್ತಿಯ ಬಳಿಗೆ ಹೋಗಲು ಅವರಿಗೆ ಯಾರು ಅಧಿಕಾರ ಕೊಟ್ಟವರು” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಜೆ ಆರ್‌ ಎಂ ಇತಿಹಾಸದ ಕುರಿತು ಉರ್ದುವಿನಲ್ಲಿ ಪುಸ್ತಕ ಬರೆದಿರುವ ಲೇಖಕ ಮೌಲಾನಾ ಶಹಾಬುದ್ದೀನ್ ಕೂಡ ಖಂಡಿಸಿದ್ದು, ಸಲ್ಮಾನ್ ಅವರನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ.
ಅಂತಹ ಜನರನ್ನು ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ವೇದಿಕೆಗಳಲ್ಲಿ ಬಹಿಷ್ಕರಿಸಬೇಕು. ಯಾರೂ ಅವರ ಕಾರ್ಯಕ್ರಮಗಳಿಗೆ ಹೋಗಬಾರದು ಅಥವಾ ಅವರನ್ನು ಯಾವುದೇ ಕಾರ್ಯಕ್ರಮಗಳಿಗೆ ಕರೆಯಬಾರದು ಎಂದು ಅವರು ಹೇಳಿದರು.

Join Whatsapp