ಒಕ್ಕಲಿಗರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಭಗವಾನ್ ವಿರುದ್ಧ ಎಫ್​ಐಆರ್​

Prasthutha|

ಮೈಸೂರು: ಒಕ್ಕಲಿಗರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಪ್ರೊ. ಕೆ.ಎಸ್​. ಭಗವಾನ್ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು,  ಕೊನೆಗೂ ಎಫ್​ಐಆರ್​ ದಾಖಲಾಗಿದೆ. ರಾಷ್ಟ್ರಕವಿ ಕುವೆಂಪುರವರ ಮಾತನ್ನು ಉಲ್ಲೇಖಿಸಿದ್ದಕ್ಕೆ ಭಗವಾನ್ ಒಕ್ಕಲಿಗರನ್ನು ನಿಂದಿಸಿದ್ದಾರೆಂದು ಆರೋಪಿಸಲಾಗಿತ್ತು.

- Advertisement -

ಕರ್ನಾಟಕ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಮೈಸೂರಿನ ಗಂಗಾಧರ್ ಎಂಬುವವರು ಪೊಲೀಸ್ ದೂರು ನೀಡಿದ್ದರು. ಪ್ರೊ. ಭಗವಾನ್ ಶ್ರೀರಾಮ ಹಾಗೂ ಒಕ್ಕಲಿಗ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುತ್ತಾರೆ ಎಂದು ಆರೋಪಿಸಿದ್ದರು.  ಆ ದೂರಿನ ಆಧಾರದ ಮೇಲೆ ಭಗವಾನ್ ವಿರುದ್ಧ  ಐಪಿಸಿ ಸೆಕ್ಷನ್ 153 ಹಾಗೂ 153A ಅಡಿಯಲ್ಲಿ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್​ ದಾಖಲಾಗಿದೆ.

ಅ. 13ರಂದು ಮೈಸೂರಿನ ಟೌನ್‌ಹಾಲ್ ಬಳಿ ಮಹಿಷ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಎಸ್.ಭಗವಾನ್, ಒಕ್ಕಲಿಗರ ಬಗ್ಗೆ ಕುವೆಂಪುರವರು ಕಾಳಜಿಯಿಂದ ಬರೆದುದನ್ನು ಉಲ್ಲೇಖಿಸಿದ್ದರು. ಬಳಿಕ  ಕೆ.ಎಸ್. ಭಗವಾನ್ ವಿರುದ್ಧ ಒಕ್ಕಲಿಗರು ಆಕ್ರೋಶ ವ್ಯಕ್ತಪಡಿಸಿ, ಸಾಲು ಸಾಲು ಪ್ರತಿಭಟನೆಗಳನ್ನು ನಡೆಸಿದ್ದರು. ರಾಜ್ಯದ ಅನೇಕ ಪೊಲೀಸ್​ ಠಾಣೆಗಳಲ್ಲಿ ಭಗವಾನ್​ ವಿರುದ್ಧ ಒಕ್ಕಲಿಗ ಸಂಘಟನೆಗಳು ದೂರು ಸಹ ದಾಖಲಿಸಿದ್ದವು. ಅಂತಿಮವಾಗಿ ಮೈಸೂರಿನ ದೇವರಾಜ ಪೊಲೀಸ್​ ಠಾಣೆಯಲ್ಲಿ ಭಗವಾನ್​ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

Join Whatsapp