NSA ಅಡಿ ದಾಖಲಿಸಿದ್ದ 94 ಪ್ರಕರಣಗಳನ್ನು ರದ್ದುಪಡಿಸಿದ ಅಲಹಾಬಾದ್ ಹೈಕೋರ್ಟ್ | ಆದಿತ್ಯನಾಥ್ ಸರ್ಕಾರಕ್ಕೆ ತೀವ್ರ ಮುಖಭಂಗ !

Prasthutha|

►ಪ್ರಕರಣದ ಬಹುತೇಕ ಆರೋಪಿಗಳು ಮುಸಲ್ಮಾನರು !
►94 ರಲ್ಲಿ 40 ಗೋಹತ್ಯೆ ಪ್ರಕರಣಗಳು !

- Advertisement -

ನವದೆಹಲಿ: ಉತ್ತರ ಪ್ರದೇಶ ಸರ್ಕಾರ  2018 ಜನವರಿ ಮತ್ತು 2020ರ ಡಿಸೆಂಬರ್ ನಡುವೆ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ – ಎನ್ ಎಸ್ ಎ ಅಡಿಯಲ್ಲಿ ದಾಖಲಿಸಿದ್ದ 120 ಪ್ರಕರಣಗಳ ಪೈಕಿ 94 ಪ್ರಕರಣಗಳನ್ನು ಅಲಹಾಬಾದ್ ಹೈಕೋರ್ಟ್ ರದ್ದುಪಡಿಸಿದೆ. ಈ ಅವಧಿಯಲ್ಲಿ ಒಟ್ಟು 120 ಪ್ರಕರಣಗಳನ್ನು ದಾಖಲಿಸಲಾಗಿತ್ತು. ಈ ಪೈಕಿ ಮೂರನೇ ಒಂದರಷ್ಟು ಅಂದರೆ 41 ಪ್ರಕರಣಗಳು ಗೋ ಹತ್ಯೆಗೆ ಸಂಬಂಧಿಸಿದ್ದಾಗಿತ್ತು. ಗೋ ಹತ್ಯೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಎಲ್ಲಾ ಆರೋಪಿಗಳು ಮುಸ್ಲಿಮರಾಗಿದ್ದಾರೆ. ಎನ್ ಎಸ್ ಎ ಕಾಯ್ದೆಯು ಯಾವುದೇ ವಿಚಾರಣೆ ಇಲ್ಲದೆ ಬಂಧಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ಕೋರ್ಟಿನ ಈ ನಿರ್ಧಾರದಿಂದಾಗಿ ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರಕ್ಕೆ ತೀವ್ರ ಮುಖಭಂಗವಾದಂತಾಗಿದೆ.

ಉತ್ತರ ಪ್ರದೇಶದ 32 ಜಿಲ್ಲೆಗಳಲ್ಲಿ ದಾಖಲಾದ 94 ಪ್ರಕರಣಗಳನ್ನು ರದ್ದುಪಡಿಸಿದ ಬಳಿಕ ಬಂಧಿತರನ್ನು ಬಿಡುಗಡೆ ಮಾಡಲು ಹೈಕೋರ್ಟ್ ಆದೇಶಿಸಿದೆ. ಜಿಲ್ಲೆಗಳಾದ್ಯಂತ ದಾಖಲಾದ ಎಫ್ ಐ ಆರ್ ಗಳಲ್ಲಿ ಪೊಲೀಸ್ ಅಧಿಕಾರಿಗಳು ಕಟ್ ಆಂಡ್ ಪೇಸ್ಟ್ ಮಾಡಿರುವುದು ಎನ್ ಎಸ್ ಎ ಪ್ರಕರಣಗಳನ್ನು ಪರಿಶೀಲಿಸಿದಾಗ ಬಹಿರಂಗಗೊಂಡಿವೆ.

- Advertisement -

  ಆರೋಪಿಗಳಿಗೆ ಸರಿಯಾಗಿ ಕಾನೂನು ಪ್ರಕ್ರಿಯೆ ನಡೆಸಲು ಅವಕಾಶ ನಿರಾಕರಿಸಿರುವುದು ಮತ್ತು ಆರೋಪಿಗಳಿಗೆ ಜಾಮೀನು ಸಿಗದಂತೆ ಮಾಡಲು ಕಾನೂನನ್ನು ಪದೇ ಪದೇ ಬಳಸಿದ ಕಾರಣಕ್ಕೆ ನ್ಯಾಯಾಲಯವು ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ. ಅದೇ ರೀತಿ ಅಧೀನ ನ್ಯಾಯಾಲಯಗಳು ಕೂಡ ಸರಿಯಾಗಿ ಪರಿಶೀಲನೆ ನಡೆಸಿಲ್ಲ ಎಂದು ಕೋರ್ಟ್ ಹೇಳಿದೆ.

41 ಗೋ ಹತ್ಯೆ ಪ್ರಕರಣಗಳಲ್ಲಿ ಹೈಕೋರ್ಟ್ 30 ಪ್ರಕರಣಗಳಲ್ಲಿ ಎನ್ ಎಸ್ ಎ ಕೇಸನ್ನು ರದ್ದುಪಡಿಸಿ ಅರ್ಜಿದಾರರ ಬಿಡುಗಡೆಗೆ ಆದೇಶಿಸಿದೆ. ಒಂದು ಪ್ರಕರಣವನ್ನು ಹೊರತುಪಡಿಸಿ ಉಳಿದ 11 ಪ್ರಕರಣಗಳಲ್ಲಿ ಆರೋಪಿಗಳ ಬಂಧನವನ್ನು ನ್ಯಾಯಾಲಯವು ಮೊದಲಿಗೆ ಎತ್ತಿಹಿಡಿದಿದ್ದರೂ, ನಂತರ ಆರೋಪಿಗಳಿಗೆ ಜಾಮೀನು ನೀಡಿ ಅವರ ಕಸ್ಟಡಿ ಅಗತ್ಯವಿಲ್ಲ ಎಂದು ಹೇಳಿದೆ.

ಉತ್ತರ ಪ್ರದೇಶ ಸರ್ಕಾರ “ಎನ್ ಎಸ್ ಎ ಕಾನೂನನ್ನು ದುರುಪಯೋಗಪಡಿಸಿಕೊಂಡಿದೆ’ ಎಂದು ನ್ಯಾಯಾಲಯ ಹೇಳಿದೆ. ಬಹುತೇಕ ಎಫ್ ಐಆರ್ ಗಳ ಪ್ರಮುಖ ಮಾಹಿತಿಯನ್ನು “ಕತ್ತರಿಸಿ ಅಂಟಿಸಲಾಗಿದೆ” (ಕಟ್ ಆಂಡ್ ಪೇಸ್ಟ್) ಎಂದು ನ್ಯಾಯಾಲಯ ಹೇಳಿದೆ.

Join Whatsapp