ಆಳಂದ ನಿಷೇಧಾಜ್ಞೆ ಉಲ್ಲಂಘಿದವರ ಬಂಧನಕ್ಕೆ ಪೊಲೀಸ್ ಕಾರ್ಯಾಚರಣೆ: ಹೃದಯಾಘಾತದಿಂದ ಇಬ್ಬರು ಮೃತ್ಯು

Prasthutha|

ಕಲಬುರಗಿ: ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಸಂಘಪರಿವಾರದ ಕಾರ್ಯಕರ್ತರು ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಉಂಟಾದ ಉದ್ವಿಗ್ನತೆ ಶಮನಗೊಳಿಸಲು ಪೊಲೀಸರು ವಿಧಿಸಿದ ಸೆಕ್ಷನ್ 144 ಉಲ್ಲಂಘಿಸಿದ 80ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿದ್ದು, ಪೊಲೀಸರ ಕಾರ್ಯಾಚರಣೆಯ ವೇಳೆ ಇಬ್ಬರು  ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ

- Advertisement -

ಬಿಜೆಪಿ ಶಾಸಕರ ನೇತೃತ್ವದಲ್ಲಿ ಸಂಘಪರಿವಾರದ ಕಾರ್ಯಕರ್ತರು ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದ ಕಡೆಗೆ ಪಾದಯಾತ್ರೆ ಬೆಳಸಿ ದರ್ಗಾ ಪ್ರವೇಶಕ್ಕೆ ಪಟ್ಟು ಹಿಡಿದಿದ್ದರು. ಬಳಿಕ ಪೊಲೀಸರ  ಮಾತುಕತೆಯಿಂದ ಪರಿಸ್ಥಿತಿ ತುಸು ತಹಬಂದಿಗೆ ಬಂದಿತ್ತು. 

ಇಂದು ಬೆಳಗ್ಗೆ 5 ಗಂಟೆಯಿಂದ ಪೊಲೀಸರು ಮನೆ ಮನೆಗಳಿಗೆ ನುಗ್ಗಿ ಮಹಿಳೆಯರನ್ನು ನಿಂದಿಸಿ, ಹಲವರನ್ನು ಬಂಧಿಸಿದ್ದಾರೆ. ಪೊಲೀಸರು ಏಕಾಏಕಿ ಮನೆಗೆ ನುಗ್ಗಿ ಮಕ್ಕಳನ್ನು ಬಂಧಿಸಿದಾಗ ಮಹಿಳೆಯರು, ವೃದ್ಧರು ಆತಂಕಗೊಂಡಿದ್ದಾರೆ. ಈ ವೇಳೆ ಮುಹಿನುದ್ದೀನ್ ಅನ್ಸಾರಿ ಅವರ ಪುತ್ರ ಫಾರೂಕ್ ಅನ್ಸಾರಿ ಫತುವುಲ್ಲಾ ಮತ್ತು ಖಂಬಾರ್ ಅನ್ಸಾರಿ ಮುಲ್ಲಾ ಅವರ ಪತ್ನಿ ಸುಫಿಯಾ ಬೇಗಮ್ ಎಂಬವರು ಮೃತಪಟ್ಟಿದ್ದಾರೆ.

- Advertisement -

ಶೇಖ್ ರೋಝಾ ದರ್ಗಾದ ನ್ಯಾಯವಾದಿ ವಾಹಾಝ್  ಬಾಬಾ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಪೊಲೀಸರು ಆಳಂದ ಪಟ್ಟಣದ ನಿವಾಸಿಗಳ ಮನೆಗಳಿಗೆ ನುಗ್ಗಿ ಸೋಮೋಟೋ ಅಡಿಯಲ್ಲಿ ಜನರನ್ನು ಬಂಧಿಸುತ್ತಿದ್ದಾರೆ. ಅದೆ ರೀತಿ ಘಟನೆಗೆ ಕಾರಣಕರ್ತರಾದ ಸಂಸದ ಭಗವಂತ ಖೂಬಾ, ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್, ಬಸವರಾಜ್ ಮತ್ತಿಮೂಡ್, ಸುಭಾಷ್ ಗುತ್ತೇದಾರ್, ಹರ್ಷಾನಂದ ಗುತ್ತೇದಾರ್ ಮತ್ತು ಪಾದಯಾತ್ರೆಯಲ್ಲಿ ಭಾಗವಹಿಸಿ  ಸೆಕ್ಷನ್ 144 ಉಲ್ಲಂಘಿಸಿದ ಬಿಜೆಪಿ ನಾಯಕರನ್ನು ಬಂಧಿಸಿ, ಪಟ್ಟಣದ ಶಾಂತಿ ವ್ಯವಸ್ಥೆ ಭಂಗ ತರುವ ಪ್ರಯತ್ನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಮಂಗಳವಾರ ಶಿವರಾತ್ರಿ ನಿಮಿತ್ತ ಆಳಂದ ಪಟ್ಟಣದಲ್ಲಿರುವ ಸೂಫಿ ಸಂತ ಲಾಡ್ಲೇ ಮಶಾಖ್ ದರ್ಗಾದಲ್ಲಿರುವ ರಾಘವ ಚೈತನ್ಯರ ಸಮಾಧಿ ಮೇಲಿರುವ ಶಿವಲಿಂಗದ ಪೂಜೆ ವಿವಾದವು ವಿಕೋಪಕ್ಕೆ ತಿರುಗಿತ್ತು.

Join Whatsapp