ಮಂಗಳೂರಿನ ನೀರುಮಾರ್ಗದ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ಇರುವುದು ದೃಢ

Prasthutha|

ಮಂಗಳೂರು: ತಾಲೂಕಿನ ನೀರುಮಾರ್ಗ ಗ್ರಾಮದ ಕೆಲರಾಯಿ ಪ್ರದೇಶದಲ್ಲಿರುವ ಹಂದಿ ಸಾಕಾಣಿಕಾ ಕೇಂದ್ರವೊಂದರ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ಇರುವುದು ದೃಢಪಟ್ಟಿರುತ್ತದೆ. ಈ ರೋಗ ಹರಡುವುದನ್ನು ತಡೆಗಟ್ಟಲು ರಾಷ್ಟ್ರೀಯ ರೋಗ ನಿಯಂತ್ರಣ ಮಾರ್ಗಸೂಚಿಯಂತೆ ಅಗತ್ಯ ಕ್ರಮಕೈಗೊಳ್ಳಲಾಗಿರುತ್ತದೆ.

- Advertisement -

ಈ ಹಂದಿ ಸಾಕಾಣಿಕಾ ಕೇಂದ್ರದಿಂದ 1 ಕಿ.ಮೀ ವ್ಯಾಪ್ತಿಯನ್ನು ರೋಗಪೀಡಿತ ವಲಯ ಮತ್ತು 10ಕಿ.ಮೀ ವ್ಯಾಪ್ತಿಯನ್ನು ಜಾಗೃತ ವಲಯವೆಂದು ಘೋಷಿಸಲಾಗಿದೆ. ರೋಗಪೀಡಿತ ಹಂದಿಗಳನ್ನು ವಧೆ ಮಾಡಿ, ವೈಜ್ಞಾನಿಕವಾಗಿ ವಿಲೇವಾರಿ ಮಾಡಿ ಆಸ್ಥಳದಲ್ಲಿ ಕ್ರಿಮಿನಾಶಕ ಸಿಂಪಡಿಸಲು ಹಾಗೂ ಅಲ್ಲಿಗೆ ಸಾರ್ವಜನಿಕರು ಭೇಟಿ ನೀಡದಂತೆ ನಾಮಫಲಕ ಅಳವಡಿಸುವಂತೆ ಸೂಚಿಸಲಾಗಿದೆ.

ಆಫ್ರಿಕನ್ ಹಂದಿ ಜ್ವರವು ಮನುಷ್ಯರಿಗೆ ಯಾವುದೇ ರೀತಿಯ ರೋಗವುಂಟು ಮಾಡುವುದಿಲ್ಲ. ಹಂದಿ ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಲು ಸಲಹೆ ನೀಡಲಾಗಿದೆ. ಜಾಗೃತ ವಲಯದಲ್ಲಿರುವ ಹಂದಿ ಸಾಕಾಣಿಕೆದಾರರು ಮತ್ತು ಇತರರು ಸದ್ಯಕ್ಕೆ ರೋಗ ಪೀಡಿತವಲಯಕ್ಕೆ ಭೇಟಿ ನೀಡಬಾರದು ಮತ್ತು ಅಪರಿಚಿತರಿಂದ ಹಂದಿ ಮರಿಗಳನ್ನು ಮತ್ತು ಮಾಂಸವನ್ನು ಖರೀದಿಸಬಾರದು. ತಮ್ಮ ಹಂದಿ ಸಾಕಾಣಿಕಾ ಕೇಂದ್ರಗಳನ್ನು ಬಿಸಿ ನೀರಿನಿಂದ ತೊಳೆದು, ಕ್ರಿಮಿ ನಾಶಕಗಳನ್ನು ಸಿಂಪಡಿಸುತ್ತಿರಬೇಕು. ಹಂದಿಗಳಿಗೆ ನೀಡಲಾಗುವ ಹೋಟೆಲ್ ತ್ಯಾಜ್ಯಗಳನ್ನು ನೀಡದಿರುವುದು ಒಳಿತು, ಅನಿವಾರ್ಯ ಸಂದರ್ಭದಲ್ಲಿ ಚೆನ್ನಾಗಿ ಬೇಯಿಸಿ ನೀಡುವುದು. ಆಫ್ರಿಕನ್ ಹಂದಿ ಜ್ವರವು ಹಂದಿಗಳಿಂದ ಅಥವಾ ಮಾಂಸ ಸೇವಿಸುವುದರಿಂದ ಮನುಷ್ಯರಿಗೆ ಹರಡುವುದಿಲ್ಲ. ಆದ್ದರಿಂದ ಸಾರ್ವಜನಿಕರು ಮತ್ತು ಹಂದಿ ಪಾಲಕರು ಭಯಭೀತರಾಗುವ ಅವಶ್ಯಕತೆ ಇಲ್ಲ. ಹಂದಿ ಪಾಲಕರು ಸೂಕ್ತ ಮುಂಜಾಗೃತ ಕ್ರಮವನ್ನು ಕೈಗೊಳ್ಳುವಂತೆ ಜಿಲ್ಲಾ ಜಾನುವಾರು ರೋಗಗಳ ನಿರ್ವಹಣಾ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp