ತಂದೆಯ ಜೊತೆ ಜಗಳವಾಡಿ ನೇಣಿಗೆ ಕೊರಳೊಡ್ಡಿದ 4ನೇ ತರಗತಿ ಬಾಲಕ

Prasthutha|

ಚಿಕ್ಕಮಗಳೂರು: ತಂದೆಯ ಜೊತೆ ಜಗಳವಾಡಿ ನಾಲ್ಕನೇ ತರಗತಿ ಓದುತ್ತಿದ್ದ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆ ತಾಲೂಕಿನ ಆಲ್ದೂರು ಗ್ರಾಮದಲ್ಲಿ ನಡೆದಿದೆ.

- Advertisement -

ಆಲ್ದೂರಿನ ಚೇತನ್ (9) ನೇಣಿಗೆ ಶರಣಾದ ಬಾಲಕ. ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಶೇಷಗಿರಿ ಮೂಲದ  ಬಾಲಕನ ಪೋಷಕರು ಕಳೆದ ನಾಲ್ಕೈದು ವರ್ಷಗಳ ಹಿಂದೆ ಆಲ್ದೂರಿಗೆ ಬಂದು ನೆಲೆಸಿದ್ದರು.

ಇಬ್ಬರು ಗಂಡು ಮಕ್ಕಳೊಂದಿಗೆ ಆಲ್ದೂರು ಸಮೀಪದ ಹೊಸಳ್ಳಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಕುಟುಂಬದ ಸದಸ್ಯರು ಕಾಫಿತೋಟಗಳಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು.

- Advertisement -

ಕುಟುಂಬವು ಆಗಾಗ್ಗೆ ರಾಣಿಬೆನ್ನೂರಿಗೆ ಹೋಗಿ ಬರುತ್ತಿತ್ತು. ಮೃತನು ತುಸು ಸಿಟ್ಟಿನ ಬಾಲಕನಾಗಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದು, ಆಗಾಗ್ಗೆ ಕೆಲ ವಿಚಾರಗಳಿಗೆ ಅಪ್ಪ-ಅಮ್ಮನ ಜೊತೆ ಜಗಳವಾಡುತ್ತಿದ್ದ ಎನ್ನಲಾಗಿದೆ.

ನಾಲ್ಕು ದಿನಗಳ ಹಿಂದೆ ಸ್ವಂತ ಊರು ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ಜಾತ್ರೆ ಇದ್ದ ಕಾರಣ ಎಲ್ಲರೂ ಹೋಗಿದ್ದರು. ಈ ವೇಳೆ ಅಪ್ಪನ ಜೊತೆ ಜಗಳವಾಡಿದ ಬಾಲಕ ಮನೆಯಲ್ಲಿನ ಜೋಕಾಲಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಓದಿನಲ್ಲಿ ಚುರುಕು ಹಾಗೂ ಸದಾ ಲವಲವಿಕೆಯಿಂದ ಇರುತ್ತಿದ್ದ. ಬಾಲಕನ ಸಾವಿಗೆ ಶಾಲೆಯ ಶಿಕ್ಷಕ ವರ್ಗ ಆಘಾತಗೊಂಡಿದೆ.     ಆತ್ಮಹತ್ಯೆ ಪದದ ಅರ್ಥವೇ ತಿಳಿಯದ ಎಳೆ ವಯಸ್ಸಿನ ಮಕ್ಕಳು ಈ ರೀತಿಯ ದುಸ್ಸಾಹಕ್ಕೆ ಕೈಹಾಕುತ್ತಿರುವುದು ಆಘಾತಕಾರಿ ಹಾಗೂ ಕಳವಳಕಾರಿ ಎಂದು ಶಿಕ್ಷಕರು ಮಮ್ಮಲ ಮರುಗಿದ್ದಾರೆ. ಬಾಲಕನ ಸಾವಿನ ಸುದ್ದಿ ಕೇಳಿ ಇಡೀ ಗ್ರಾಮ ದುಃಖತಪ್ತವಾಗಿದೆ.

Join Whatsapp