SC/ST ಪಂಗಡದವರು ದಾಖಲಿಸುವ ಎಲ್ಲಾ ಕೇಸುಗಳು ಅಟ್ರಾಸಿಟಿ ಕಾಯ್ದೆಯಡಿ ದಾಖಲಿಸಬೇಡಿ: ಹೈಕೋರ್ಟ್

Prasthutha|

ಬೆಂಗಳೂರು : ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರು (SC-ST) ದಾಖಲಿಸುವ ಎಲ್ಲ ಕೇಸ್ ಗಳಲ್ಲೂ ಅಟ್ರಾಸಿಟಿ ಕಾಯ್ದೆ ಸೆಕ್ಷನ್ ಗಳಡಿ ಎಫ್ ಐಆರ್ ದಾಖಲಿಸುವುದು ಬೇಡ ಎಂದು ಹೈಕೋರ್ಟ್ ತೀರ್ಪು ನೀಡಿದೆ.

- Advertisement -

ಜಾತೀಯ ದಾಳಿ ನಡೆಸುವ ಉದ್ದೇಶವಿಲ್ಲದ ಕೃತ್ಯಗಳು ಸಂಭವಿಸಿದಾಗ ಆರೋಪಿಯ ವಿರುದ್ಧ ಆ ಘಟನೆಯ ಹಿನ್ನೆಲೆಯನ್ನು ಆಧರಿಸಿ ಐಪಿಸಿ ಸೆಕ್ಷನ್ ಗಳ ಅನುಸಾರ ಪ್ರಕರಣ ದಾಖಲಿಸಬೇಕು. ಎಸ್ಸಿ/ಎಸ್ಟಿಗೆ ಸೇರಿದವರು ಸಂತ್ರಸ್ತರಾಗಿರುವ ಎಲ್ಲ ಅಪರಾಧ ಪ್ರಕರಣಗಳಲ್ಲೂ ಆರೋಪಿಯ ವಿರುದ್ಧ ಎಸ್ಸಿ, ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ ಹೇರಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.


ಶ್ರೀಸಂಗಂ ಪ್ರಿಯ ಎಂಬುವರು ದಾಖಲಿಸಿದ್ದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 172, 173, ಉದ್ದೇಶಪೂರ್ವಕವಾಗಿ ಕೋರ್ಟ್ ಸಮನ್ಸ್ ಸ್ವೀಕಾರಕ್ಕೆ ನಕಾರ ಹಾಗೂ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 3(1) (ಎಫ್), 3(1)(ಜಿ) ಅಡಿ ಪೊಲೀಸರು ತಮ್ಮ ವಿರುದ್ಧ ದಾಖಲಿಸಿದ್ದ ಎಫ್ಐಆರ್ ರದ್ದುಪಡಿಸಲು ಕೋರಿ ಲೋಕನಾಥ್ ಎಂಬುವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಪೀಠ, ಈ ಆದೇಶ ನೀಡಿದೆ. ಜತೆಗೆ, ಅರ್ಜಿದಾರರ ವಿರುದ್ಧ ಬೆಂಗಳೂರಿನ 70ನೇ ಹೆಚ್ಚುವರಿ ಸಿಟಿ ಮತ್ತು ಸೆಷನ್ಸ್ ಕೋರ್ಟ್ನಲ್ಲಿ ನಡೆಯುತ್ತಿದ್ದ ವಿಚಾರಣೆಯನ್ನೂ ರದ್ದುಪಡಿಸಿದೆ.

- Advertisement -


ಕೋರ್ಟ್ ಹೇಳಿದ್ದೇನು?
ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ ವ್ಯಕ್ತಿ ಸಂತ್ರಸ್ತರಾಗಿರುವ ಎಲ್ಲ ಅಪರಾಧ ಕೃತ್ಯಗಳಲ್ಲೂ ಎಸ್ ಸಿ, ಎಸ್ಟಿ ಕಾಯ್ದೆಯ ಸೆಕ್ಷನ್ 3 ಹೇರಲು ಅವಕಾಶವಿಲ್ಲ. ಕೃತ್ಯದ ಉದ್ದೇಶ ಜಾತಿ ಆಧಾರಿತ ದಾಳಿ ಅಲ್ಲವೆಂದಾದರೆ, ಆರೋಪಿಯ ವಿರುದ್ಧ ಆ ಕೃತ್ಯದ ಹಿನ್ನೆಲೆ ಪರಿಗಣಿಸಿ ಸೂಕ್ತ ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸಬಹುದು ಅಥವಾ ಘಟನೆಯ ಸತ್ಯಾಸತ್ಯತೆ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ಇತರ ಕಾನೂನುಗಳ ಆಧಾರದಲ್ಲಿ ದೋಷಾರೋಪ ಹೊರಿಸಬಹುದು.
ಅಸ್ಪೃಶ್ಯತೆ ನಿರ್ಮೂಲನೆ, ಪರಿಶಿಷ್ಟ ಜಾತಿ, ಪಂಗಡದವರ ಮೇಲಿನ ದಾಳಿಗಳಿಂದ ರಕ್ಷಣೆ ಹಾಗೂ ಜಾತಿ ತಾರತಮ್ಯ ತಡೆಯುವ ಉದ್ದೇಶದಿಂದ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ತರಲಾಗಿದೆ.
ಆರೋಪಿ ವಿರುದ್ಧ ಕಾಯ್ದೆಯ ಸೆಕ್ಷನ್ 3 ಅನ್ವಯಿಸಲು ಪ್ರಾಥಮಿಕವಾಗಿ ಅಲ್ಲಿ ಜಾತಿ ಆಧಾರಿತ ದಾಳಿಗಳು ಅಥವಾ ಆ ಜಾತಿ ಬಗ್ಗೆ ದ್ವೇಷ ಭಾವನೆಯಿಂದ ಎಸಗಿರುವ ಕೃತ್ಯವಾಗಿರಬೇಕು. ಪ್ರಕರಣದಲ್ಲಿ ಸೆಕ್ಷನ್ 3 ಅನ್ವಯವಾಗುತ್ತದೆ ಎನ್ನುವುದು ತನಿಖೆಯಲ್ಲಿ ಕಂಡು ಬರಬೇಕು.

ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರದ ವ್ಯಕ್ತಿಯಿಂದ ಎಸ್ಸಿ/ಎಸ್ಟಿ ವರ್ಗಕ್ಕೆ ಸೇರಿದ ವ್ಯಕ್ತಿಯನ್ನು ದಮನಿಸುವ, ಅಪಮಾನಿಸುವ, ಶೋಷಣೆ ಮಾಡುವ ಅಥವಾ ಅಪಹಾಸ್ಯ ಮಾಡುವಂಥ, ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 3ರ ಅಡಿ ಯಾವುದೇ ಅಪರಾಧ ಎಸಗಿರುವುದನ್ನು ತನಿಖೆಯು ಬಹಿರಂಗಪಡಿಸದಿದ್ದರೂ, ಸಂತ್ರಸ್ತ ವ್ಯಕ್ತಿ ಕೇವಲ ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ್ದಾರೆಂಬ ಕಾರಣಕ್ಕೆ ದೋಷಾರೋಪಪಟ್ಟಿಯಲ್ಲಿ ಸೆಕ್ಷನ್ 3 ಸೇರಿಸಲು ಸಾಧ್ಯವಿಲ್ಲ.


ತುಳಿತ, ಜಾತಿನಿಂದನೆಗಳಿಂದ ಪರಿಶಿಷ್ಟ ಜಾತಿ, ಪಂಗಡದವರನ್ನು ರಕ್ಷಿಸುವುದೇ ಕಾಯ್ದೆಯ ಮೂಲ ಉದ್ದೇಶವಾಗಿದ್ದರೂ, ಆ ಕಾಯ್ದೆಯ ದುರ್ಬಳಕೆಗೆ ಅವಕಾಶ ನೀಡಬಾರದು. ಆದ್ದರಿಂದ, ಇಂಥ ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸುವಾಗ ತನಿಖಾಧಿಕಾರಿಗಳು ವಿವೇಚನೆಯಿಂದ ವರ್ತಿಸಬೇಕಾದ ಜವಾಬ್ದಾರಿ ಹೊಂದಿರುತ್ತಾರೆ



Join Whatsapp