ಸದಾ ಸುದ್ದಿಯಲ್ಲಿರಬೇಕು ಎಂಬ ಕಾರಣಕ್ಕೆ ಹುಚ್ಚರು ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುತ್ತಾರೆ: ಡಿ.ಕೆ. ಶಿವಕುಮಾರ್ ಕಿಡಿ

Prasthutha|

ಬೆಂಗಳೂರು: ‘ಸದಾ ಸುದ್ದಿಯಲ್ಲಿರಬೇಕು ಎಂಬ ಕಾರಣಕ್ಕೆ ಹುಚ್ಚರು ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುತ್ತಿರುತ್ತಾರೆ. ಪ್ರಮುಖ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಇಂತಹ ಕುತಂತ್ರ ಅನುಸರಿಸುತ್ತಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.

- Advertisement -


ಸದಾಶಿವನಗರ ನಿವಾಸದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಹಾಗೂ ಅಫ್ಘಾನಿಸ್ತಾನದ ವಿದ್ಯಾರ್ಥಿಗಳ ಪ್ರತಿನಿಧಿಗಳ ಜತೆ ಸೋಮವಾರ ಪ್ರತ್ಯೇಕ ಮಾತುಕತೆ ನಡೆಸಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳ ಜತೆ ಮಾತನಾಡಿದರು. ಈ ವೇಳೆ, ರಾಹುಲ್ ಗಾಂಧಿ ಅವರ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಅವರು ಅವಹೇಳನಕಾರಿಯಾಗಿ ಮಾತನಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ದೇಶದಲ್ಲಿ ಕೋವಿಡ್ ಜತೆಗೆ ನಿರುದ್ಯೋಗ, ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಇನ್ನಿಲ್ಲದ ತೊಂದರೆ ಆಗುತ್ತಿದೆ. ಇದೆಲ್ಲವನ್ನು ಮರೆಸಲು ಈ ರೀತಿ ಮಾತನಾಡಿ ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರ ವಿರುದ್ಧ ಇಂತಹ ಹೇಳಿಕೆ ನೀಡಿ ಜನರ ದಾರಿ ತಪ್ಪಿಸುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.


ವಿನಯ್ ಕುಲಕರ್ಣಿ ಅವರ ಜತೆ ಕಾಂಗ್ರೆಸ್ ಪಕ್ಷ ಇದೆ: ‘ವಿನಯ್ ಕುಲಕರ್ಣಿ ಅವರು ಪಕ್ಷದ ಹಿರಿಯ ನಾಯಕರು, ಮಂತ್ರಿಯಾಗಿ ನನ್ನೊಟ್ಟಿಗೆ ಕೆಲಸ ಮಾಡಿದ್ದಾರೆ. ದ್ವೇಷ ರಾಜಕೀಯದಿಂದ ಅವರಿಗೆ ನೋವಾಗಿದೆ. ನ್ಯಾಯಾಲಯದಲ್ಲಿ ಅವರ ಪ್ರಕರಣ ಯಾವ ಹಂತದಲ್ಲಿದೆ ಎಂದು ಗೊತ್ತಿದೆ ಎಂದರು.

- Advertisement -


ಚುನಾವಣೆಗೂ ಮುನ್ನ ಹಾಗೂ ಚುನಾವಣೆ ನಂತರ ಯಾವ, ಯಾವ ನಾಯಕರು ಯಾವ ರೀತಿ ಭಾಷಣ ಮಾಡಿದ್ದಾರೆ ಎಂಬುದು ನಿಮ್ಮ ಬಳಿಯೇ ಇದೆ. ಅವರು ಜೈಲಿನಲ್ಲಿ ಹಾಗೂ ಹೊರಗೆ ಅನುಭವಿಸಿದ ನೋವು ಹಂಚಿಕೊಂಡಿದ್ದಾರೆ. ಅದರ ಬಗ್ಗೆ ನಾನು ಈಗ ಮಾತನಾಡುವುದಿಲ್ಲ. ಮುಂದಿನ ದಿನಗಳಲ್ಲಿ ಅವರು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡು ಹೋಗುತ್ತಾರೆ. ಅವರ ಕುಟುಂಬ, ಕಾರ್ಯಕರ್ತರು, ಪಕ್ಷ ಅವರ ಬೆನ್ನಿಗೆ ನಿಲ್ಲಲಿದೆ. ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಅವರಿಗೆ ಹಾಗೂ ನನಗೆ ಅರಿವಿದೆ. ಕಾನೂನಿನಲ್ಲಿ ಅವರಿಗೆ ನ್ಯಾಯ ಸಿಗಲಿದೆ ಎಂಬ ವಿಶ್ವಾಸವಿದೆ’ ಎಂದರು.

ಆಫ್ಘಾನ್ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಬೇಕು:
‘ಅಫ್ಘಾನಿಸ್ತಾನ ವಿದ್ಯಾರ್ಥಿಗಳ ಪ್ರತಿನಿಧಿಗಳು ಬಂದು ನನ್ನ ಭೇಟಿ ಮಾಡಿದ್ದರು. ಅಲ್ಲಿನ ಘಟನೆಯಿಂದ ಅವರು ಮಾನಸಿಕವಾಗಿ ಕುಗ್ಗಿದ್ದಾರೆ. ನಮ್ಮ ರಾಜ್ಯದಲ್ಲಿ ಅವರಿಗೆ ಧೈರ್ಯ ನೀಡಬೇಕು. ಅವರ ದೇಹ ಮಾತ್ರ ಇಲ್ಲಿದ್ದು, ಅವರ ಮನಸ್ಸು ಅಲ್ಲಿರುವ ಪೋಷಕರ ಮೇಲಿದೆ ಎಂದು ಶಿವಕುಮಾರ್ ಹೇಳಿದರು.


ಬೆಂಗಳೂರು ಶಿಕ್ಷಣ ಹಬ್ ಆಗಿದ್ದು, ಅನೇಕ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಅವರಿಗೆ ಧೈರ್ಯ ತುಂಬಬೇಕು. ಧರ್ಮ ಯಾವುದೇ ಆಗಿರಲಿ, ಮಾನವೀಯತೆ ದೃಷ್ಟಿಯಿಂದ ಅವರಿಗೆ ಧೈರ್ಯ ತುಂಬಬೇಕು. ಅಫ್ಘಾನಿಸ್ತಾನದಲ್ಲಿರುವ ಕನ್ನಡಿಗರನ್ನು ವಾಪಸ್ ಕರೆತರುವುದು ಭಾರತ ಸರ್ಕಾರಕ್ಕೆ ಸಂಬಂಧಿಸಿದ ವಿಚಾರ. ಈಗ ನಾನು ಆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಮಾತನಾಡಲಿ’ ಎಂದು ತಿಳಿಸಿದರು.

Join Whatsapp