ಇದು ಮೇಕಿನ್ ಇಂಡಿಯಾ ಅಲ್ಲ ಮಾರಾಟವಾಗುತ್ತಿರುವ ಇಂಡಿಯಾ; ಸಿದ್ದರಾಮಯ್ಯ

Prasthutha|

ದೇಶದ ಪ್ರಗತಿ-ನೆಮ್ಮದಿಗಳೆರಡೂ ಆ ದೇಶದ ತೆರಿಗೆ ನೀತಿ ಹೇಗಿದೆ ಎಂಬುದರ ಮೇಲೆ ತೀರ್ಮಾನವಾಗುತ್ತದೆ. ಸದ್ಯ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ತೆರಿಗೆ ನೀತಿ ದೇಶದ ಮಧ್ಯಮ ಮತ್ತು ದುಡಿಯುವ ವರ್ಗಗಳ ಮೇಲೆ ಬೀರುತ್ತಿರುವ ಭೀಕರ ಪರಿಣಾಮಗಳ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

- Advertisement -


ಪತ್ರದ ಸಾರಾಂಶ:
ಮಹಾಭಾರತದಲ್ಲಿ ಭೀಷ್ಮನು ಧರ್ಮರಾಯನಿಗೆ, ‘ರಾಜನು ತೋಟವನ್ನು ಕಾಯುವ ಮಾಲಿಯಂತಿರಬೇಕೆ ಹೊರತು ಇದ್ದಿಲನ್ನು ಮಾರುವವನಂತಾಗಬಾರದು. ಹಣ್ಣಿನ ಮರಗಳನ್ನು ಕಡಿದು ಇದ್ದಿಲು ಮಾರುವಂತಹ ಸ್ವಭಾವದ ರಾಜನು ಜನಪೀಡಕನಾಗಿರುತ್ತಾನೆ. ಆಕಳನ್ನು ಪ್ರೀತಿಯಿಂದ ಸಾಕುವ ಗೋವಳಿಗನು ನವಿರಾಗಿ ಹಾಲು ಕರೆದುಕೊಳ್ಳುವಂತೆ ತೆರಿಗೆ ಇರಬೇಕು. ಹಾಲು ಕರೆಯುವ ನೆಪದಲ್ಲಿ ರಕ್ತ ಹೀರಿಕೊಂಡರೆ ಹಸು ಮತ್ತು ಕರುಗಳೆರಡೂ ಮರಣ ಹೊಂದುತ್ತವೆ. ಕರುವಿಗೂ ಹಾಲು ಸಿಗುವಂತಾದರೆ ಅದು ಮುಂದೆ ಎತ್ತಾಗಿ ಅಥವಾ ಹಸುವಾಗಿ ರಾಜ್ಯದ ಸಂಪತ್ತನ್ನು ಹೆಚ್ಚಿಸುತ್ತದೆ. ಇಲ್ಲದಿದ್ದರೆ ತೆರಿಗೆ ಮೂಲಗಳೆಲ್ಲ ಬತ್ತಿ ಹೋಗಿ ರಾಜ್ಯ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತದೆ. ತೆರಿಗೆಯು, ದುಂಬಿಯು ಹೂವಿನಿಂದ ಮಕರಂದವನ್ನು ಹೀರುವ ರೀತಿಯಲ್ಲಿರಬೇಕು. ಇದರಿಂದ ಹೂವು ಫಲ ಕಟ್ಟುತ್ತದೆ ಜೇನು ಸಂತತಿಯನ್ನೂ ಹೆಚ್ಚಿಸಿಕೊಳ್ಳುತ್ತದೆ’ ಎಂದು ತೆರಿಗೆ ನೀತಿಯನ್ನು ಬೋಧಿಸುತ್ತಾನೆ.
ಮಾತೆತ್ತಿದರೆ ರಾಮಾಯಣ, ಮಹಾಭಾರತದ ಹೆಸರುಗಳನ್ನು ಪ್ರಸ್ತಾಪಿಸುವ ಮೋದಿಯವರಿಗೆ ಯಾರಾದರೂ ಭೀಷ್ಮರ ಈ ಮಾತುಗಳನ್ನು ಓದಿ ಹೇಳಬೇಕು.
ಮನಮೋಹನ್‌ಸಿಂಗ್ ರವರು ಅಧಿಕಾರದಲ್ಲಿದ್ದಾಗ ಇಡೀ ಜಗತ್ತಿನಲ್ಲೇ ವೇಗವಾಗಿ ಬೆಳೆಯುತ್ತಿದ್ದ ಆರ್ಥಿಕತೆಗಳಲ್ಲಿ ಭಾರತ 5 ನೇ ಸ್ಥಾನದಲ್ಲಿತ್ತು. ಆದರೆ 2020 ರ ಜಿ.ಡಿ.ಪಿ. ಬೆಳವಣಿಗೆಯನ್ನು ಆಧರಿಸಿ ಕೌಶಿಕ್ ಬಸು ಮುಂತಾದ ಅರ್ಥಶಾಸ್ತ್ರಜ್ಞರು ವಿಶ್ವದ 193 ದೇಶಗಳಲ್ಲಿ ಭಾರತ 164 ನೇ ಸ್ಥಾನಕ್ಕೆ ಕುಸಿದಿದೆ ಎಂದು ಅಂದಾಜು ಮಾಡಿದ್ದಾರೆ. ನಮ್ಮ ಪಕ್ಕದಲ್ಲೇ ಇರುವ ಬಾಂಗ್ಲಾದೇಶದ ತಲಾವಾರು ಜಿ.ಡಿ.ಪಿ. ಶೇ. 4 ರಷ್ಟು ಬೆಳವಣಿಗೆ ಹೊಂದಿದೆ. ಬಾಂಗ್ಲಾದಲ್ಲಿ ತಲಾವಾರು ಜಿ.ಡಿ.ಪಿ. 1888 ಡಾಲರ್ ಇದೆ. 2020 ರಲ್ಲಿ ಭಾರತದ ತಲಾವಾರು ಜಿ.ಡಿ.ಪಿ. 1877 ಡಾಲರ್‌ಗೆ ಕುಸಿದಿದೆ. 2014 ರಲ್ಲಿ ಬಾಂಗ್ಲಾದೇಶಕ್ಕಿಂತ ಸುಮಾರು 40 ಪಟ್ಟು ಮುಂದೆ ಇದ್ದ ದೇಶದ ಆರ್ಥಿಕತೆ ನರೇಂದ್ರ ಮೋದಿಯವರ ಅಪಕ್ವ, ಕಾರ್ಪೊರೇಟ್ ಪರ ಆರ್ಥಿಕ ನೀತಿಗಳಿಂದಾಗಿ ನೆಲ ಕಚ್ಚುವಂತಾಗಿದೆ.
2004 ರಲ್ಲಿ ವಾಜಪೇಯಿಯವರ ನೇತೃತ್ವದ ಕೇಂದ್ರ ಸರ್ಕಾರವು ಜನರಿಂದ ಶೇ.72 ರಷ್ಟು ಮತ್ತು ಕಾರ್ಪೊರೇಟ್ ಬಂಡವಾಳಿಗರಿಂದ ಶೇ.28 ರಷ್ಟು ತೆರಿಗೆಯನ್ನು ಸಂಗ್ರಹಿಸುತಿತ್ತು. ಆದರೆ 2010 ಕ್ಕೆ ಬರುವ ವೇಳೆಗೆ ಮನಮೋಹನಸಿಂಗ್ ಅವರು ಜನರಿಂದ ಸಂಗ್ರಹಿಸುವ ತೆರಿಗೆಯನ್ನು ಶೇ.58 ಕ್ಕೆ ಇಳಿಸಿದರು. ಕಾರ್ಪೊರೇಟ್ ಕಂಪೆನಿಗಳಿಂದ ಸಂಗ್ರಹಿಸುವ ತೆರಿಗೆಯನ್ನು ಶೇ 28 ರಿಂದ ಶೇ.40 ಕ್ಕೆ ಹೆಚ್ಚಿಸಿದರು. ಅವರು ಅಧಿಕಾರದಿಂದ ಇಳಿದಾಗಲೂ ತೆರಿಗೆ ಸಂಗ್ರಹಣೆಯಲ್ಲಿ ಪರೋಕ್ಷ ತೆರಿಗೆ ಶೇ.63 ಮತ್ತು ಪ್ರತ್ಯಕ್ಷ ತೆರಿಗೆ ಶೇ.37 ರಷ್ಟು ಇತ್ತು.

ಜನರ ಮೇಲಿನ ತೆರಿಗೆ ಹೊರೆ ಕಡಿಮೆ ಇದ್ದರೆ ಜನ ನೆಮ್ಮದಿಯಿಂದಿರುತ್ತಾರೆ. ಆದರೆ ಮೋದಿಯವರ ಸರ್ಕಾರದ ನೀತಿಗಳಿಂದಾಗಿ ಜನರ ಮೇಲಿನ ತೆರಿಗೆ ಹೊರೆ ಹೆಚ್ಚಾಗುತ್ತಿದೆ. ಎಂದರೆ, “15 ನೇ ಹಣಕಾಸು ಆಯೋಗವು ಅಂದಾಜು ಮಾಡಿರುವಂತೆ 2024-25 ಕ್ಕೆ ಕಾರ್ಪೊರೇಟ್ ತೆರಿಗೆ ಸಂಗ್ರಹದ ಗುರಿ ಕೇವಲ ಶೇ. 34.75 ರಷ್ಟು ಹೆಚ್ಚಾಗುತ್ತದೆ. ಅದೇ ಸಂದರ್ಭದಲ್ಲಿ ಜನರು ಪಾವತಿಸುವ ಜಿ.ಎಸ್‌ಟಿ ಯು ಶೇ.45.48 ರಷ್ಟು ಹಾಗೂ ಪೆಟ್ರೋಲ್, ಡೀಸೆಲ್ ಮುಂತಾದವುಗಳ ಮೇಲೆ ವಿಧಿಸುತ್ತಿರುವ ಸುಂಕಗಳು ಶೇ. 62 ರಷ್ಟು ಹೆಚ್ಚಾಗುತ್ತವೆ” ಎಂದಿದೆ. ಅಂದರೆ ಜನರು ಇನ್ನಷ್ಟು ಅನುಭವಿಸಬೇಕಾಗಿದೆ ಎಂದು ಅರ್ಥವಾಗುತ್ತದೆ.
ಏಕೆ ಈ ಮಟ್ಟದ ತೆರಿಗೆ ಸುಲಿಗೆ ಎಂದರೆ ಮೋದಿ ಸಮರ್ಥಕರು, “ಕಾಂಗ್ರೆಸ್ ಸರ್ಕಾರ ಮಾಡಿದ್ದ ಸಾಲದ ಬಡ್ಡಿ ತೀರಿಸಲು ಮೋದಿ ಅವರು ತೆರಿಗೆ ವಸೂಲಿ ಮಾಡಿದ್ದಾರೆ” ಎನ್ನುವ ಹಾಸ್ಯಾಸ್ಪದ ಕಾರಣ ನೀಡುತ್ತಿದ್ದಾರೆ.

- Advertisement -


ವಾಸ್ತವ ಏನೆಂದರೆ, ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ 2014 ರ ಮಾರ್ಚ್ ವರೆಗೆ 67 ವರ್ಷಗಳ ಆಡಳಿತದಲ್ಲಿ ಮಾಡಿದ್ದ ಸಾಲ 53.11 ಲಕ್ಷ ಕೋಟಿ ರೂಗಳು. ಆದರೆ 2014 ರ ಜೂನ್ ನಿಂದ 2021 ರ ವೇಳೆಗೆ 7 ವರ್ಷದಲ್ಲಿ ಮಾಡಿರುವ ಸಾಲ 82.7 ಲಕ್ಷ ಕೋಟಿ ರೂಪಾಯಿ. ಈ ಎರಡೂ ಸೇರಿ ಈ ವರ್ಷದ ಅಂತ್ಯಕ್ಕೆ 135.87 ಲಕ್ಷ ಕೋಟಿಗಳಾಗುತ್ತವೆ. ಮತ್ತೊಂದು ಕಡೆ ಅದಾನಿ ಮುಂತಾದ ಕೆಲ ಮೋದಿ ಪರಮಾಪ್ತ ಕಾರ್ಪೊರೇಟ್ ಬಂಡವಾಳಿಗರ ಸುಮಾರು 11 ಲಕ್ಷ ಕೋಟಿಗಳಷ್ಟು ಸಾಲವನ್ನು ಎನ್‌ಪಿಎ (ವಸೂಲಾಗದ ಸಾಲ) ಎಂದು ಘೋಷಿಸಲಾಗಿದೆ. 2018 ರಿಂದ ಈಚೆಗೆ ಕಳೆದ ನಾಲ್ಕು ವರ್ಷಗಳಲ್ಲಿ 7 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತವನ್ನು ರೈಟ್ ಆಫ್ [ಮನ್ನಾ?] ಮಾಡಲಾಗಿದೆ.


ಭಾರತ ಮತ್ತು ಇತರೆ ದೇಶಗಳ ತೆರಿಗೆ ಪದ್ಧತಿ: ಜಗತ್ತಿನ ಮುಂದುವರೆದ ದೇಶಗಳು ಮತ್ತು ನಮ್ಮ ಅಕ್ಕ ಪಕ್ಕದ ದೇಶಗಳ ತೆರಿಗೆ ವ್ಯವಸ್ಥೆ ಹೇಗಿದೆ ಎಂಬುದರ ಮಾಹಿತಿ ಇದು. ಈ ದೇಶಗಳು ಹೇಗೆ ಮುಂದುವರೆದಿವೆ? ಏಕೆ ಮುಂದುವರೆದಿವೆ? ಎಂಬುದು ಈ ಮೇಲಿನ ಪಟ್ಟಿಯನ್ನು ನೋಡಿದರೆ ಅರ್ಥವಾಗುತ್ತದೆ. ಅತ್ಯಂತ ಕಡಿಮೆ ಕಾರ್ಪೊರೇಟ್ ತೆರಿಗೆ ವಿಧಿಸುತ್ತಿರುವ ದೇಶ ಭಾರತ. ಹಾಗೆಯೇ ಕೋಟ್ಯಾಂತರ ಆದಾಯವಿರುವವರಿಗೂ ಸಹ ಅತ್ಯಂತ ಕಡಿಮೆ ಆದಾಯ ತೆರಿಗೆ ವಿಧಿಸುತ್ತಿರುವುದೂ ಸಹ ಭಾರತದಲ್ಲೆ. ಆದರೆ ಇದೇ ಸಂದರ್ಭದಲ್ಲಿ ಕಡಿಮೆ ಆದಾಯದವರಿಗೆ 5-10% ತೆರಿಗೆ ಇದೆ. ಅಂದರೆ 10 ಲಕ್ಷ ದುಡಿಯುವವರು ಶೇ. 20 ರಷ್ಟು ತೆರಿಗೆ ಕಟ್ಟಬೇಕು. 15 ಲಕ್ಷದ ಒಂದು ರೂಪಾಯಿ ದುಡಿಯುವವರು ಶೇ.30 ರಷ್ಟು ತೆರಿಗೆ ಕಟ್ಟಬೇಕು. ಅದೇ ಸಂದರ್ಭದಲ್ಲಿ ಸಾವಿರಾರು ಕೋಟಿ ಆದಾಯ ಇರುವವರೂ ಶೇ.30 ಕಟ್ಟಬೇಕು. ನಮ್ಮ ದೇಶದಲ್ಲಿ ಅತಿ ಹೆಚ್ಚು ಆದಾಯವಿರುವವರು ಮತ್ತು ಕಾರ್ಪೊರೇಟ್ ಬಂಡವಾಳಿಗರು ಕಡಿಮೆ ತೆರಿಗೆ ಕಟ್ಟುತ್ತಾರೆ. ಅದೆ ಸಂದರ್ಭದಲ್ಲಿ ಪರೋಕ್ಷ ತೆರಿಗೆ ಕಟ್ಟುವ ನಮ್ಮ ದೇಶದ ಜನರು ಅಮೆರಿಕ, ಚೀನಾ, ಇಂಗ್ಲೆAಡ್ ಮಾತ್ರವಲ್ಲ ಪಾಕಿಸ್ತಾನ, ಬಾಂಗ್ಲಾದೇಶದ ಜನರಿಗಿಂತಲೂ ಹೆಚ್ಚು ತೆರಿಗೆಯನ್ನು ಪಾವತಿಸುತ್ತಾರೆ.
ದೇಶದ ದೊಡ್ಡ ಸಂಖ್ಯೆಯ ಯುವಕರು ಮೋದಿಯವರನ್ನು ನಂಬಿ ಕಣ್ಣು ಮುಚ್ಚಿಕೊಂಡು ಆಯ್ಕೆ ಮಾಡಿದರು. ಈಗ ಅವರೆಲ್ಲಾ ಕಣ್ ಕಣ್ ಬಿಡುತ್ತಿದ್ದಾರೆ. 2014 ರಲ್ಲಿ 20 ವರ್ಷದ ಯುವಕನಿಗೆ 2024 ರ ವೇಳೆಗೆ 30 ವರ್ಷ ವಯಸ್ಸಾಗುತ್ತದೆ. 30 ವರ್ಷದವರಿಗೆ 40 ವರ್ಷ ವಯಸ್ಸಾಗುತ್ತದೆ. ಅಲ್ಲಿಗೆ ಬದುಕು ಕಟ್ಟಿಕೊಳ್ಳುವ ಅವರ ಕನಸುಗಳೆಲ್ಲ ಕಣ್ಣೆದುರೇ ಕಮರಿ ಹೋಗಿವೆ. ದೇಶವೊಂದರ ದೊಡ್ಡ ಸಂಪತ್ತುಗಳಲ್ಲಿ ಮಾನವ ಸಂಪತ್ತೂ ಒಂದು. ಯಾವ ದೇಶ ದುಡಿಯುವ ಕೈಗಳಿಗೆ ಉದ್ಯೋಗ ನೀಡುತ್ತದೊ ಅಂಥಹ ದೇಶದ ಅಭಿವೃದ್ಧಿ ಚೆನ್ನಾಗಿರುತ್ತದೆ. ಇಲ್ಲದಿದ್ದರೆ ಆ ದೇಶದ ಆರ್ಥಿಕತೆ ವಿನಾಶದ ಹಾದಿ ಹಿಡಿಯುತ್ತದೆ.


ಇದು ಮೇಕಿನ್ ಇಂಡಿಯಾ ಅಲ್ಲ ಮಾರಾಟವಾಗುತ್ತಿರುವ ಇಂಡಿಯಾ
(ಡಾಲರ್ ಎದುರಿಗಿನ ಇಂದಿನ ರೂಪಾಯಿ ಮೌಲ್ಯದಲ್ಲಿ)
ಯಾವುದೇ ದೇಶ ಸ್ವಾವಲಂಭಿಯಾಗುವುದು ಎಂದರೆ ರಫ್ತನ್ನು ಜಾಸ್ತಿ ಮಾಡಿ ಆಮದನ್ನು ಕಡಿಮೆ ಮಾಡಬೇಕು. ಹಾಗಾಗಬೇಕಾದರೆ ಆಮದು ಶುಲ್ಕವನ್ನು ಅಂದರೆ ಕಸ್ಟಮ್ಸ್ ತೆರಿಗೆಗಳನ್ನು ಹೆಚ್ಚಿಸಬೇಕು. ಆದರೆ ಮೇಕ್ ಇನ್ ಇಂಡಿಯಾ ಎಂದು ಘೋಷಣೆ ಮಾಡಿದ ಭಾರತದಲ್ಲಿ ಇಂದು ಆಗುತ್ತಿರುವುದೇನು? 2013-14 ರಲ್ಲಿ ರೂ.32.20 ಲಕ್ಷ ಕೋಟಿ ಮೌಲ್ಯದಷ್ಟು ಆಮದು ಮಾಡುತ್ತಿದ್ದರೆ, 2019-20 ರಲ್ಲಿ ಅದು ಇನ್ನಷ್ಟು ಹೆಚ್ಚಾಗಿ ಹತ್ತತ್ತಿರ ರೂ.35 ಲಕ್ಷ ಕೋಟಿ ಮೌಲ್ಯದಷ್ಟು ವಸ್ತುಗಳ ಆಮದನ್ನು ಮಾಡಿಕೊಳ್ಳಲಾಗುತ್ತಿದೆ. ಮೇಕ್ ಇನ್ ಇಂಡಿಯಾ ಘೋಷಣೆ ನಿಜವೇ ಆಗಿದ್ದರೆ, ರಫ್ತಿನ ಪ್ರಮಾಣ ಸಿಕ್ಕಾಪಟ್ಟೆ ಹೆಚ್ಚಾಗಬೇಕಾಗಿತ್ತು. ಆದರೆ ಇಲ್ಲಿ ಸುಮಾರು ರೂ.1.25 ಲಕ್ಷ ಕೋಟಿ ಮೌಲ್ಯದಷ್ಟು 2013-14ಕ್ಕೆ ಹೋಲಿಸಿದರೆ ಕಡಿಮೆ ರಫ್ತು ಮಾಡುತ್ತಿದ್ದೇವೆ.
2015 ರಲ್ಲಿ ಮನಮೋಹನ್ ಸಿಂಗ್‌ರವರು ಅಧಿಕಾರದಿಂದ ಇಳಿದ ನಂತರದ ವರ್ಷದಲ್ಲೆ ರಫ್ತಿನ ಪ್ರಮಾಣ ರೂ. 19 ಲಕ್ಷ ಕೋಟಿಗಳಿಗೆ ಇಳಿಯಿತು. 2016 ರಲ್ಲಿ ರೂ.19 ಲಕ್ಷ ಕೋಟಿಗಳಿಗಿಂತಲೂ ಕಡಿಮೆಯಾಗುತ್ತದೆ. ಇದೇ ಅವಧಿಯ ಕಸ್ಟಮ್ಸ್ ತೆರಿಗೆಯ ಸಂಗ್ರಹಣೆ ಕೂಡ ವೇಗವಾಗಿ ಕಡಿಮೆಯಾಗುತ್ತಿದೆ. ಅಂದರೆ ಆಮದು ವಸ್ತುಗಳ ಮೇಲೆ ಅತ್ಯಂತ ಕಡಿಮೆ ಮಟ್ಟದ ತೆರಿಗೆಯನ್ನು ವಿಧಿಸಲಾಗುತ್ತಿದೆ. ಕಸ್ಟಮ್ಸ್ ತೆರಿಗೆ 1,72,085 ಕೋಟಿಗಳಿಂದ 1,09,282 ಕೋಟಿ ರೂಗಳಿಗೆ ಇಳಿಕೆಯಾಗಿದೆ. ಆಮದು ಶುಲ್ಕ ಕಡಿಮೆ ಮಾಡಿದರೆ ವಿದೇಶಿ ವಸ್ತುಗಳ ಬೆಲೆ ಕಡಿಮೆಯಾಗಿ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡರೆ ನಿಮ್ಮ ಮೇಕ್ ಇನ್ ಇಂಡಿಯಾ ಘೋಷಣೆ ಬರೀ ಬುರ್ನಾಸು ಎನ್ನಿಸಿಕೊಳ್ಳುವುದಿಲ್ಲವೆ?
ಯಾವಾಗ ಪ್ರಧಾನಿ ಮೋದಿಯವರು ಮೇಕ್ ಇನ್ ಇಂಡಿಯಾ ಎಂದು 2014 ರಲ್ಲಿ ಘೋಷಣೆ ಮಾಡಿದರೋ ದೇಶಕ್ಕೆ ಆಮದು ಮಾಡಿಕೊಳ್ಳುತ್ತಿದ್ದ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿಬಿಟ್ಟರು. ರೇಷ್ಮೆ ಮೇಲಿನ ಆಮದು ತೆರಿಗೆ ಶೇ. 30 ರಿಂದ ಶೇ.5 ಕ್ಕೆ ಇಳಿಯಿತು. ಅನೇಕ ಕೃಷಿ ಉತ್ಪನ್ನಗಳ ಮೇಲಿನ ತೆರಿಗೆ ಕಡಿಮೆಯಾಯಿತು. ಒಂದು ಕೆ.ಜಿ.ಗೆ 750/-ನಂತೆ ಮಾರಾಟವಾಗುತ್ತಿದ್ದ ಮೆಣಸು ಈಗ ರೂ.250/- ಕ್ಕೆ ಇಳಿದು ಬಿಟ್ಟಿದೆ. ರೇಷ್ಮೆ ಬೆಳೆಗಾರರು ಮತ್ತು ರೈತರ ಆತ್ಮಹತ್ಯೆಗಳು ಹೆಚ್ಚಾಗಲು ಇದು ಪ್ರಮುಖ ಕಾರಣ.
ಇಂಥ ಹಲವಾರು ಕಾರಣಗಳಿಂದಾಗಿ, ಪ್ರಧಾನಿ ಮೋದಿಯವರು ಮಾಡಿದ ಘೋಷಣೆಗಳನ್ನು, ಮಾತುಗಳನ್ನು ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿ ಅರ್ಥ ಮಾಡಿಕೊಂಡರೆ ಮಾತ್ರ ನಿಜ ಏನೆಂದು ಅರ್ಥವಾಗುತ್ತದೆ. ದೇಶವನ್ನು ಅಭಿವೃಧ್ಧಿ ಮಾಡುತ್ತಿದ್ದೇನೆ ಎಂದು ಅವರು ಘೋಷಣೆ ಕೂಗಿದರೆ ದೇಶವನ್ನು ಮಾರಾಟ ಮಾಡುತ್ತಿದ್ದೇನೆ ಎಂಬಂತೆ ಕೇಳಿಸುತ್ತದೆ.

Join Whatsapp