ಅಪಾಯಕಾರಿ ಇ-ತ್ಯಾಜ್ಯ ನಿರ್ವಹಣೆ ಕುರಿತು ಲಯನ್ಸ್ ಇಂಟರ್ ನ್ಯಾಷನಲ್ ನಿಂದ ಬೃಹತ್ ಜನ ಜಾಗೃತಿ

Prasthutha|

► “ಎಸೆಯಿರಿ ಇಲ್ಲವೆ ದಾನ ಮಾಡಿ” ಎಂಬ ವಿಶೇಷ ಅಭಿಯಾನ

- Advertisement -

ಬೆಂಗಳೂರು: ಪರಿಸರಕ್ಕೆ ಮಾರಕವಾಗಿ ಪರಿಣಮಿಸಿರುವ ಇ-ತ್ಯಾಜ್ಯ ಕುರಿತು ಬಾರತದ ಲಯನ್ಸ್ ಇಂಟರ್ ನ್ಯಾಷನಲ್ ಸಂಸ್ಥೆ ಜಗತ್ತಿನ ಅತಿ ದೊಡ್ಡ ಜನ ಜಾಗೃತಿ ಅಭಿಯಾನ ಆಯೋಜಿಸಿದೆ. ಈ ತ್ಯಾಜ್ಯವನ್ನು “ಎಸೆಯಿರಿ ಇಲ್ಲವೆ ದಾನ ಮಾಡಿ” ಎಂಬ ಅಭಿಯಾನ ಕೈಗೊಂಡಿದೆ.

ಜನ ಸಮುದಾಯದಲ್ಲಿ ಜಾಗೃತಿ ಜೊತೆಗೆ ಶಿಕ್ಷಣ ಕೊಡುವ ಅಭಿಯಾನ ಇದಾಗಿದ್ದು, ಪ್ಯಾನ್ ಇಂಡಿಯಾದಡಿ ದೇಶಾದ್ಯಂತ ಜನವರಿ 13 ರಿಂದ ಫೆಬ್ರವರಿ 13 ರ ವರೆಗೆ ಒಂದು ತಿಂಗಳ ಕಾಲ ಅರಿವು ಮೂಡಿಸುವ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. 8 ಸಾವಿರಕ್ಕೂ ಹೆಚ್ಚು ಕ್ಲಬ್ ಗಳು, 27,500 ಲಯನ್ಸ್ ಕ್ಲಬ್ ಸದಸ್ಯರು 77 ಲಯನ್ಸ್ ಜಿಲ್ಲೆಗಳಲ್ಲಿ ಅಭಿಯಾನ ಕೈಗೊಂಡಿದ್ದಾರೆ.

- Advertisement -

ಇದರ ಭಾಗವಾಗಿ ಬೆಂಗಳೂರಿನ ರಾಜಾಜಿನಗರದ ಓರಿಯನ್ ಮಾಲ್ ನಲ್ಲಿ ಜ.13 ರಂದು ಲಯನ್ಸ್ ಅಡ್ಮಿನಿಸ್ಟ್ರೇಟಿವ್ ಡಿಸ್ಟ್ರಿಕ್ಟ್ 317ಎ – ನೇತೃತ್ವ ವಹಿಸಿರುವ ಜಿಲ್ಲಾ ಗವರ್ನರ್ ಶ್ರೀ ವಿದ್ಯಾ, 317ಇ ಜಿಲ್ಲಾ ಗವರ್ನರ್ ಬಿ.ಎಸ್. ರಾಜಶೇಖರಯ್ಯ ಅವರು ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಬೆಂಗಳೂರು ನಗರ ಮತ್ತು ಹೊರ ಭಾಗದಲ್ಲಿ ಜನ ಜಾಗೃತಿ ಮೂಡಿಸಲಿದ್ದಾರೆ.

ಲಯನ್ಸ್ ಅಂತರರಾಷ್ಟ್ರೀಯ ನಿರ್ದೇಶಕರಾದ ಕೆ. ವಂಶಿಧರ್ ಬಾಬು ಮಾತನಾಡಿ, ಲಯನ್ಸ್ ಇಂಟರ್ ನ್ಯಾಷನಲ್ 105 ವರ್ಷಗಳಿಂದ ಜನಪರ ಸೇವೆ ಸಲ್ಲಿಸುತ್ತಿದೆ. ತಂತ್ರಜ್ಞಾನ ಬದುಕಿಗೆ ಅತ್ಯಂತ ಮುಖ್ಯ. ಆದರೆ ಇ – ತ್ಯಾಜ್ಯ ಹೆಚ್ಚಿನ ಪ್ರಮಾಣದಲ್ಲಿದ್ದು, ಇದು ಕಳವಳಕ್ಕೆ ಕಾರಣವಾಗಿದೆ. ಅನೌಪಚಾರಿಕ ಮರುಬಳಕೆ ವಲಯದಲ್ಲಿ ಅವೈಜ್ಞಾನಿಕ ಮತ್ತು ಅಪಾಯಕಾರಿ ಅಭ್ಯಾಸಗಳಿಂದ ಮಹಿಳೆಯರು ಮತ್ತು ಮಕ್ಕಳ ಮೇಲೆ ಇದು ಋಣಾತ್ಮಕ ಪರಿಣಾಮ ಬೀರುತ್ತಿದೆ. ಇದನ್ನು ತಪ್ಪಿಸಲು ಸಮುದಾಯದಲ್ಲಿ ಅರಿವು ಹೆಚ್ಚಾಗಬೇಕು ಎಂದರು.

ಲಯನ್ಸ್ ಅಂತರರಾಷ್ಟ್ರೀಯ ಮಾಜಿ ನಿರ್ದೇಶಕ ವಿ.ವಿ. ಕೃಷ್ಣ ರೆಡ್ಡಿ ಮಾತನಾಡಿ, ಸಮುದಾಯದ ಆರೋಗ್ಯ ಹಿತದೃಷ್ಟಿಯಿಂದ ಕೈಗೊಂಡಿರುವ ಅಭಿಯಾನದಲ್ಲಿ ಎಲ್ಲಾ ಪಾಲುದಾರರು ಪಾಲ್ಗೊಳ್ಳಬೇಕು. ಉತ್ತಮ ಪರಿಸರ ನಿರ್ಮಿಸಲು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಲಯನ್ಸ್ ಡಿಸ್ಟ್ರಿಕ್ಟ್ 317ಇ ಗವರ್ನರ್ ವಿನುತಾ ಪ್ರಕಾಶ್ ಮಾತನಾಡಿ, ಕರ್ನಾಟಕದಲ್ಲಿ ತಂತ್ರಜ್ಞಾನ ಅಗಾಧವಾಗಿ ಬೆಳವಣಿಗೆಯಾಗುತ್ತಿದ್ದು, ವಿದ್ಯುನ್ಮಾನ ಉಪಕರಣಗಳ ಬಳಕೆ ವೃದ್ದಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸುರಕ್ಷಿತ ಜೀವನ ವಿಧಾನ ಅಳವಡಿಸಿಕೊಳ್ಳಬೇಕು ಎಂದರು.

ಲಯನ್ಸ್ ಡಿಸ್ಟ್ರಿಕ್ಟ್ 317ಎಫ್ ಗವರ್ನರ್ ಬಿ.ಎಸ್. ರಾಜಶೇಖರ್ ಮಾತನಾಡಿ, ಸಂಗ್ರಹಿಸಿದ ಇ-ತ್ಯಾಜ್ಯವನ್ನು ಸಂಸ್ಕರಿಸಲು ವಿಶೇಷ ಒತ್ತು ನೀಡಲಾಗಿದೆ. ಶಿಕ್ಷಣ ಸಂಸ್ಥೆಗಳು, ಸಣ್ಣ ಮತ್ತು ದೊಡ್ಡ ಪ್ರಮಾಣದ ಕಚೇರಿಗಳು, ಸಾಮಾನ್ಯ ಜನತೆಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.

4ಆರ್ ರೀಸೈಕ್ಲಿಂಗ್ ಪ್ರವೈಟ್ ಲಿಮಿಟೆಡ್ ನ ಸಿಇಒ, ಲಯನ್ ರಾಮನಾಥ್ ನಾರಾಯಣ್ ಮಾತನಾಡಿ, ಇ – ತ್ಯಾಜ್ಯ ವಲಯದಲ್ಲಿ ಇದು ಐತಿಹಾಸಿಕ ಅಭಿಯಾನವಾಗಿದ್ದು, ಇಂದು ತ್ಯಾಜ್ಯವನ್ನು ಉತ್ತಮವಾಗಿ ನಿರ್ವಹಣೆ ಮಾಡಿದರೆ, ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ರೂಪಿಸಬಹುದು ಎಂದು ನುಡಿದರು.



Join Whatsapp