ಚಿನ್ನದ ಬಳೆ ಕಳೆದುಕೊಂಡ ಮಹಿಳೆಗೆ ಬಳೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಸ್ ಕಂಡೆಕ್ಟರ್, ಡ್ರೈವರ್

Prasthutha|

ಮಂಗಳೂರು: ಪ್ರಯಾಣಿಕ ಮಹಿಳೆಯೊಬ್ಬರು ಬಿಟ್ಟು ಹೋಗಿದ್ದ 18 ಗ್ರಾಂ ತೂಕದ ಚಿನ್ನದ ಬಳೆಯನ್ನು ಬಸ್ ಚಾಲಕ ಹಾಗೂ ಬಸ್ ಕಂಡೆಕ್ಟರ್ ಸುರಕ್ಷಿತವಾಗಿ ಮಹಿಳೆಗೆ ಪೊಲೀಸರ ಮೂಲಕ ಹಸ್ತಾಂತರಿಸಿ, ಪ್ರಾಮಾಣಿಕತೆ ಮೆರೆದಿದ್ದಾರೆ.

- Advertisement -

ಜನವರಿ 1ರಂದು ಮಂಗಳೂರಿನಿಂದ ಉಳ್ಳಾಲ ಕಡೆಗೆ ಶಾಲಿಮಾರ್ (ರೋಟ್ ನಂಬರ್ 44(C)) ಬಸ್’ನಲ್ಲಿ ಬಿ.ಸಿ.ರೋಡ್ ಮೂಲದ ಮಹಿಳೆ ತಸ್ಲಿಮಾ ಫಾರೂಕ್ ಎಂಬವರು ಉಳ್ಳಾಲದ ತನ್ನ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ತಾಜ್ ಮಹಲ್  ಹಾಲ್’ಗೆ ಬಂದಿದ್ದರು. ಈ ವೇಳೆ ಬಸ್’ನಲ್ಲಿ 18 ಗ್ರಾಂ ಬಂಗಾರದ ಬಳೆಯನ್ನು ಕಳೆದುಕೊಂಡಿದ್ದರು.

ಬಸ್’ನ ಕಂಡಕ್ಟರ್ ಇಬ್ರಾಹಿಂ ಮಂಜನಾಡಿ ಸ್ವಲ್ಪ ಹೊತ್ತಿನ ಬಳಿಕ ಚಿನ್ನದ ಬಳೆ ನೋಡಿದ್ದಾರೆ. ತಕ್ಷಣ ಅವರು ಚಾಲಕ ನಿಸಾರ್ ಅಹಮ್ಮದ್ ಅವರ ಗಮನಕ್ಕೆ ತಂದಿದ್ದಾರೆ. ಅವರಿಬ್ಬರೂ ಈ ವಿಷಯವನ್ನು ಶಾಲಿಮಾರ್ ಬಸ್’ನ ಮಾಲಿಕರಾದ ಅಬ್ದುಲ್ ರಝಾಕ್ ಶಾಲಿಮಾರ್’ಗೆ ಕರೆ ಮಾಡಿ ತಿಳಿಸಿದ್ದಾರೆ. ಅಬ್ದುಲ್ ರಝಾಕ್ ಅವರು ಈ ವಿಷಯವನ್ನು ಉಳ್ಳಾಲ ಪೊಲೀಸರಿಗೆ ತಿಳಿಸಿದ್ದರು.

- Advertisement -

ಜನವರಿ 2ರಂದು ಉಳ್ಳಾಲ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಶಿವಕುಮಾರ್ ಅವರ ಮೂಲಕ ಬಳೆಯನ್ನು ಕಳೆದುಕೊಂಡ ಮಹಿಳೆಗೆ ಹಸ್ತಾಂತರಿಸಲಾಯಿತು.

ಬಸ್ ಕಂಡೆಕ್ಟರ್, ಚಾಲಕನ ಪ್ರಾಮಾಣಿಕ ನಡತೆಯನ್ನು ಪೊಲೀಸರು ಹಾಗೂ ಸಾರ್ವಜನಿಕರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.



Join Whatsapp