ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ; ಗೋವಾದಲ್ಲಿ ಆಕ್ರೋಶ | ಹೊಸವರ್ಷ ಆಚರಣೆ ಸಂದರ್ಭ ಬೀಫ್ ಭಾರೀ ಅಭಾವ

Prasthutha|

ಪಣಜಿ : ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಆಡಳಿತವಿರುವ ಗೋವಾ ಜನರು ಆಕ್ರೊಶಿತರಾಗಿದ್ದಾರೆ. ಪೂರೈಕೆಯ ಕೊರತೆಯಿಂದಾಗಿ ಗೋವಾದಲ್ಲಿ ಗೋಮಾಂಸದ ತೀವ್ರ ಅಭಾವ ಕಾಡುತ್ತಿದೆ ಎಂದು ವರದಿಗಳು ತಿಳಿಸಿವೆ.

- Advertisement -

ಕ್ರಿಸ್ ಮಸ್, ಹೊಸ ವರ್ಷದ ಈ ಸಂದರ್ಭದಲ್ಲಿ ಔತಣಕೂಟಕ್ಕೆ ಸಾಕಷ್ಟು ಪ್ರಮಾಣದ ಗೋಮಾಂಸ ಸಿಗುತ್ತಿಲ್ಲ ಎಂಬ ಸುದ್ದಿ ಕೇಳಿ ಗೋವಾದಲ್ಲಿ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿದೆ. ಆಕ್ರೋಶ ಎಷ್ಟರಮಟ್ಟಿಗಿದೆ ಎಂದರೆ, ಸ್ವತಃ ರಾಜ್ಯದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರೇ ಈ ಬಗ್ಗೆ ಪ್ರತಿಕ್ರಿಯಿಸುವಂತಾಗಿದೆ. ಸಮಸ್ಯೆ ಪರಿಹರಿಸುವುದಾಗಿ ಅವರು ಹೇಳಿದ್ದಾರೆ.

2015ರಲ್ಲಿ ಮಹಾರಾಷ್ಟ್ರದಲ್ಲಿ ಗೋ ಹತ್ಯೆ ನಿಷೇಧಿಸಿದ ಬಳಿಕ, ಕರ್ನಾಟಕದಿಂದ ದೊಡ್ಡ ಪ್ರಮಾಣದಲ್ಲಿ ಮಾಂಸ ಪೂರೈಕೆಯಾಗುತಿತ್ತು. ಮುಖ್ಯವಾಗಿ ಬೆಳಗಾವಿ ಜಿಲ್ಲೆ ಮೂಲಕ ಸಾಕಷ್ಟು ಪ್ರಮಾಣದ ಬೀಫ್ ಗೋವಾ ಗಡಿ ದಾಟುತಿತ್ತು.

- Advertisement -

ಕಡಿಮೆ ಜನಸಂಖ್ಯೆ ಇರುವ ಗೋವಾದಲ್ಲಿ ಪ್ರತಿದಿನ ಸುಮಾರು 25 ಟನ್ ಬೀಫ್ ಬಳಕೆಯಾಗುತ್ತದೆ. ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚುವುದರಿಂದ, ಇಲ್ಲಿ ಗೋಮಾಂಸಕ್ಕೆ ಈ ಸಂದರ್ಭ ಭಾರೀ ಬೇಡಿಕೆಯಿರುತ್ತದೆ.

ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧಿಸುವುದನ್ನು ತಡೆಯುವಂತೆ ತಮ್ಮ ಬಿಜೆಪಿ ನಾಯಕತ್ವದ ಮನವೊಲಿಸುವಂತೆ ಗೋವಾದ ಬೀಫ್ ಉದ್ಯಮಿಗಳು ಇತ್ತೀಚೆಗೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದರು.

ತಮಗೆ ಅನುಕೂಲವಿರುವ ರಾಜ್ಯಗಳಲ್ಲಿ ಗೋಮಾಂಸ ನಿಷೇಧಿಸಿರುವ ಬಿಜೆಪಿ, ಅನಾನುಕೂಲವಿರುವ ಗೋವಾದಂತಹ ರಾಜ್ಯಗಳಲ್ಲಿ ಅದನ್ನು ನಿಷೇಧಿಸಿಲ್ಲ. ಆ ಮೂಲಕ ಬಿಜೆಪಿಯು ಗೋವಿನ ವಿಚಾರದಲ್ಲಿ ರಾಜಕೀಯ ನಡೆಸುತ್ತಿರುವುದು ಸ್ಪಷ್ಟವಾಗಿ ಗಮನಕ್ಕೆ ಬರುತ್ತದೆ.  

Join Whatsapp