ಕರ್ನಾಟಕದಲ್ಲಿ ಇನ್ನೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ 80 ಪರ್ಸೆಂಟ್ ಕಮಿಷನ್ ಸರ್ಕಾರ: ಕೇಜ್ರಿವಾಲ್ ವಾಗ್ದಾಳಿ

Prasthutha|

ದಾವಣಗೆರೆ: ಕರ್ನಾಟಕದಲ್ಲಿ ಇನ್ನೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ 80 ಪರ್ಸೆಂಟ್ ಕಮಿಷನ್ ಸರ್ಕಾರ ಆಡಳಿತ ನಡೆಸಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.

- Advertisement -

ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ನಗರದ ಹೈಸ್ಕೂಲ್ ಮೈದಾನದಲ್ಲಿ ಸಂಘಟಿಸಿದ್ದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಈ ಹಿಂದೆ 20 ಪರ್ಸೆಂಟ್ ಕಮಿಷನ್‌ನ ಕಾಂಗ್ರೆಸ್ ಸರ್ಕಾರ ಇತ್ತು. ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಮಿಷನ್ ಡಬಲ್ ಆಗಿದ್ದು 40 ಪರ್ಸೆಂಟ್ ಕಮಿಷನ್ ಸರ್ಕಾರ ಬಂದಿದೆ. ಇದುವೇ ಡಬಲ್ ಎಂಜಿನ್ ಸರ್ಕಾರದ ಕೊಡುಗೆ. ಜನತೆ ಮತ್ತೆ ಡಬಲ್ ಎಂಜಿನ್ ಸರ್ಕಾರವನ್ನು ಅಧಿಕಾರಕ್ಕೆ ತಂದರೆ ಕಮಿಷನ್ ಮತ್ತೆ ಡಬಲ್ ಆಗಿ 80 ಪರ್ಸೆಂಟ್ ಕಮಿಷನ್ ಸರ್ಕಾರ ಬರಲಿದೆ. ರಾಜ್ಯದ ಜನರು ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು ಎಂದರು.

ಕರ್ನಾಟಕದಲ್ಲಿ ಜನರು ವಿದ್ಯಾವಂತರಿದ್ದಾರೆ. ಜಾಣರಿದ್ದಾರೆ. ದೇಶಭಕ್ತರೂ ಇದ್ದಾರೆ. ಆದರೆ, ಇಲ್ಲಿಯ ನಾಯಕರು ಮಾತ್ರ ಕೆಟ್ಟು ಹೋಗಿದ್ದಾರೆ. ರಾಜ್ಯದಲ್ಲಿ ಶೇ. 40 ಪರ್ಸೆಂಟ್ ಕಮಿಷನ್ ಸರ್ಕಾರವಿದ್ದು ಇಲ್ಲಿಯ ರಾಜಕೀಯ ನಾಯಕರು ಕರ್ನಾಟಕದ ಹೆಸರನ್ನು ದೇಶ ಮಟ್ಟದಲ್ಲಿ ಹಾಳು ಮಾಡಿದ್ದಾರೆ ಎಂದು ಅವರು ಟೀಕಿಸಿದರು.

- Advertisement -

ದೇಶದಲ್ಲಿ ಮಹಾರಾಷ್ಟ್ರ ಬಳಿಕ ಕರ್ನಾಟಕದಲ್ಲಿಯೇ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಆಮ್ ಆದ್ಮಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಎಲ್ಲ ಸಾಲ ಮನ್ನಾ ಮಾಡಿ ಅವರನ್ನು ಒಮ್ಮೆ ಸಾಲಮುಕ್ತರನ್ನಾಗಿ ಮಾಡಲಾಗುವುದು. ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಒದಗಿಸುವ ಜತೆಗೆ ರೈತರ ಎಲ್ಲ ಸಮಸ್ಯೆಗಳ ಬಗ್ಗೆ ರೈತರೊಂದಿಗೆ ಚರ್ಚಿಸಿ ಪರಿಹರಿಸಲಾಗುವುದು.

ಕರ್ನಾಟಕಕ್ಕೆ ಬೇಕಾಗಿರುವುದು ಡಬಲ್ ಎಂಜಿನ್ ಸರ್ಕಾರವಲ್ಲ. ಆಮ್ ಆದ್ಮಿ ಪಕ್ಷದ ಹೊಸ ಎಂಜಿನ್ ಸರ್ಕಾರ. ಆಮ್ ಆದ್ಮಿ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ಸರ್ಕಾರಿ ಶಾಲೆ, ಸರ್ಕಾರಿ ಆಸ್ಪತ್ರೆಗಳನ್ನು ಅಭಿವೃದ್ಧಿಸಲಾಗುವುದು. ಉಚಿತ ವಿದ್ಯುತ್, ಮನೆಗೊಬ್ಬರಿಗೆ ಉದ್ಯೋಗ ಒದಗಿಸಿಕೊಡಲಾಗುವುದು. ನಿರುದ್ಯೋಗಿಗಳಿಗೆ ಮಾಸಿಕ 3000ರೂ. ಭತ್ಯೆ ನೀಡಲಾಗುವುದು ಎಂದರು.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಪಕ್ಷದ ರಾಜ್ಯ ಪ್ರಮುಖರಾದ ಪೃಥ್ವಿ ರೆಡ್ಡಿ, ಬ್ರಿಜೇಶ್ ಕಾಳಪ್ಪ, ವಿಜಯ ಶರ್ಮ, ಬಿ.ಟಿ. ನಾಗಣ್ಣ, ಮುಖ್ಯಮಂತ್ರಿ ಚಂದ್ರು, ಟೆನ್ನಿಸ್ ಕೃಷ್ಣ, ತುಷಾರ ಸ್ವಾಮಿ, ಡಾ. ವೆಂಕಟೇಶ್, ಶಾಂತಲಾ ದಾಮ್ಲೆ, ಉಷಾ ಮೋಹನ್, ಜಫರ್ ಮೊಹಿದ್ದೀನ್, ಶಿವರಪ್ಪ ಜೋಗಿನ್, ರವಿಚಂದ್ರ ನರವಂಶಿ ಇನ್ನಿತರರು ವೇದಿಕೆಯಲ್ಲಿದ್ದರು.

Join Whatsapp