ವಾರೆಂಟಿ ಅವಧಿ ಪ್ರಾರಂಭಕ್ಕೆ ಮುನ್ನವೇ ಪ್ರಣಾಳಿಕೆಯಲ್ಲಿ ನೀಡಿದ 5 ಗ್ಯಾರೆಂಟಿಗಳು ಜಾರಿ: ಸಿದ್ದರಾಮಯ್ಯ

Prasthutha|

ಬೆಂಗಳೂರು : ಚುನಾವಣಾ ಪೂರ್ವದಲ್ಲಿ ತನ್ನ ಪ್ರಣಾಳಿಕೆಯಲ್ಲಿ ರಾಜ್ಯದ ಜನತೆಗೆ ನೀಡಿದ ಗ್ಯಾರೆಂಟಿ ( ಭರವಸೆ ) ಗಳನ್ನು ತನ್ನ ಅಧಿಕಾರ ( ವಾರಂಟಿ ) ಅವಧಿ ಪ್ರಾರಂಭವಾಗುವ ಮುನ್ನವೇ ಜಾರಿಗೆ ತರುವಲ್ಲಿ ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

- Advertisement -

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ನಡೆದ ಮೊದಲ ಸಚಿವ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿ ತನ್ನ ಸಹೋದ್ಯೋಗಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿದ ನಂತರ ಸಿದ್ದರಾಮಯ್ಯ ಅವರು ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಸಚಿವ ಸಂಪುಟದ ತೀರ್ಮಾನಗಳನ್ನು ಬಹಿರಂಗಪಡಿಸಿದರು.

ಗೃಹ ಜ್ಯೋತಿ ಯೋಜನೆ :

- Advertisement -

ಈ ಯೋಜನೆಯಡಿ ಗೃಹ ಬಳಕೆದಾರರಿಗೆ 200 ಯೂನಿಟ್ ಉಚಿತ ವಿದ್ಯುತ್

ಗೃಹ ಲಕ್ಷ್ಮೀ ಯೋಜನೆ ;

ಈ ಯೋಜನೆಯಡಿ ಮನೆಯೊಡತಿಗೆ ಪ್ರತಿ ಮಾಹೆ 2000 ರೂ. ಈ ಯೋಜನೆಗೆ 1200 ಕೋಟಿ ರೂ ವೆಚ್ಚವಾಗುತ್ತದೆ.

ಅನ್ನಭಾಗ್ಯ ಯೋಜನೆ  :

ಬಡತನ ರೇಖೆಗಿಂತಲೂ  ಕೆಳಗಿರುವ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಪ್ರತಿ ಸದಸ್ಯರಿಗೆ ಹತ್ತು ಕೆ ಜಿ ಅಕ್ಕಿ

ಯುವ ನಿಧಿ ನಿರುದ್ಯೋಗ ಭತ್ಯೆ ಯೋಜನೆ :

ಪದವಿ, ಸ್ನಾತಕೋತ್ತರ ಪದವಿ, ಪಿ ಹೆಚ್ ಡಿ ಪಡೆದವರಿಗೆ ಮೊದಲ ಎರಡು ವರ್ಷಗಳು ಅಥವಾ ಸರ್ಕಾರಿ ಅಥವಾ ಖಾಸಗಿ ಉದ್ಯೋಗ ದೊರೆಯುವವರೆಗೆ ಮಾಸಿಕ 3000 ರೂ ಭತ್ಯೆ, ಡಿಪ್ಲೋಮಾ ಹೊಂದಿರುವವರಿಗೆ ಮಾ‌ಸಿಕ 1500 ರೂ ಭತ್ಯೆ.

ಮಹಿಳೆಯರಿಗೆ ಉಚಿತ ಬಸ್ ಪಾಸ್ :

ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರ ಉಚಿತ ಸಂಚಾರಕ್ಕೆ ಅವಕಾಶ.

ಈ ಎಲ್ಲಾ ಯೋಜನೆಗಳ ಅನುಷ್ಠಾನಕ್ಕೆ , ರಾಜ್ಯ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದೆ. ಅಲ್ಲದೆ, ಸರ್ಕಾರಿ ಆದೇಶಗಳನ್ನು ಹೊರಡಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಈ ಎಲ್ಲಾ ಯೋಜನೆಗಳ ಜಾರಿಗೆ 50,000 ಕೋಟಿ ರೂ ಅಗತ್ಯವಿದೆ. ಎಷ್ಟೇ ಕಷ್ಟ ಎದುರಾದರೂ ಜನತೆಗೆ ನೀಡಿದ ಈ ಭರವಸೆಗಳನ್ನು ಜಾರಿಗೊಳಿಸಲಾಗುವುದು ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು.

ಈ ಗ್ಯಾರೆಂಟಿಗಳ ಬಗ್ಗೆ ಸಚಿವ ಇಂದಿನ ಸಂಪುಟದಲ್ಲಿ  ತೀರ್ಮಾನಿಸಲಾಗಿದೆಯಾದರೂ ಅಂಕಿ-ಅಂಶಗಳ ನಿಖರ ಮಾಹಿತಿ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಮುಂದಿನ ವಾರ ನಡೆಯಲಿರುವ ಸಚಿವ ಸಂಪುಟದ ವೇಳೆಗೆ ಗ್ಯಾರಂಟಿಗಳ ಜಾರಿ ಮಾಡುತ್ತೇವೆ ಎಂದರು.

ಕಳೆದ ಬಾರಿ 2013 ರಿಂದ 2018  ರವರೆಗಿನ ಅವಧಿಯಲ್ಲಿನ ತಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಇದಲ್ಲದೆ, ಇಂದಿರಾ ಕ್ಯಾಂಟೀನ್ ಸೇರಿದಂತೆ 30 ಅಪ್ರಕಟಿತ ಭರವಸೆಗಳನ್ನೂ ಜಾರಿಗೊಳಿಸಲಾಗಿದೆ.

ಕರ್ನಾಟಕದಿಂದ ನಾಲ್ಕು ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತ ಸಂಗ್ರಹವಾದರೂ,   ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ಧೂ ಕರ್ನಾಟಕಕ್ಕೆ ನ್ಯಾಯಯುತವಾಗಿ ದೊರೆಯಬೇಕಾದ ಪಾಲು ದೊರೆಯಲಿಲ್ಲ ಎಂಬ ಅಂಶವನ್ನು ಹೊರಹಾಕಿದ ಮುಖ್ಯಮಂತ್ರಿ ರಾಜಸ್ವ ಸಂಗ್ರಹಣೆಯಲ್ಲಿ ಕಠಿಣತೆ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಗೂ ಇನ್ನಿತರ ಆಡಳಿತ ಕ್ರಮಗಳನ್ನು ಜಾರಿಗೆ ತಂದು ಜನತೆಗೆ ಕೊಟ್ಟ ಮಾತಿನಂತೆ ಈ ಎಲ್ಲಾ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದೂ ಅವರು ಹೇಳಿದರು.

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸೇರಿದಂತೆ ಸಿದ್ದರಾಮಯ್ಯ ಸಂಪುಟದ ನೂತನ ಸದ‌ಸ್ಯರು ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದರು.



Join Whatsapp