ಮಂಗಳೂರು ಬಸ್ ನಿಲ್ದಾಣದಲ್ಲಿ ಸಂಘಪರಿವಾರದಿಂದ ಅನೈತಿಕ ಗೂಂಡಾಗಿರಿ: ಇಬ್ಬರ ಸೆರೆ

Prasthutha|

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ಬಸ್ ನಿಲ್ದಾಣದಲ್ಲಿ ನಡೆದಿದ್ದ ಸಂಘಪರಿವಾರದ ಅನೈತಿಕ ಗೂಂಡಾಗಿರಿಗೆ ಸಂಬಂಧಪಟ್ಟಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.  ಒಂದೇ ಕಾಲೇಜಿನ ಇಬ್ಬರು ಸಹಪಾಠಿಗಳು ಉಡುಪಿಗೆ ತರಳುವ ಬಸ್ಸಿನಲ್ಲಿ ಕುಳಿತಿದ್ದರು. ಇದನ್ನು ಪ್ರಶ್ನಿಸಿ ಸಂಘಪರಿವಾರದ ಕಾರ್ಯಕರ್ತರು ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದರು. ಪಾಂಡೇಶ್ವರ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದು,  ಇಬ್ಬರನ್ನು ಬಂಧಿಸಿದ್ದಾರೆ. ಅವರ ವಿರುದ್ಧ  ಸೆಕ್ಷನ್  153A ಮತ್ತು ಸೆಕ್ಷನ್ 354 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

- Advertisement -

“ಸಂತ್ರಸ್ತರ ಕುಟುಂಬಿಕರನ್ನೂ ಸಂಪರ್ಕಿಸಲಾಗಿದೆ. ಪ್ರಕರಣದಲ್ಲಿ ಬಸ್ ಸಿಬ್ಬಂದಿಗಳೂ ಭಾಗಿಯಾಗಿರುವ ಶಂಕೆಯಿದೆ. ಇತರೆ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಲಾಗಿದೆ” ಎಂದು ಮಂಗಳೂರು ನಗರ ಕಮಿಷನರ್ ಎನ್ ಶಶಿಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘಪರಿವಾರದ ಅನೈತಿಕ ಗೂಂಡಾಗಿರಿ  ನಿರಂತರವಾಗಿ ನಡೆಯುತ್ತಿದೆ. ಇದರ ಮುಂದುವರಿದ ಭಾಗವಾಗಿ ನಿನ್ನೆ ಮಂಗಳೂರಿನಲ್ಲಿ ಒಂದೇ ದಿನ ಅನೈತಿಕ ಗೂಂಡಾಗಿರಿಯ ಎರಡು ಪ್ರಕರಣಗಳು ನಡೆದಿತ್ತು. ನಗರದ ಹೃದಯ ಭಾಗದಲ್ಲಿರುವ ಸಿಟಿ ಬಸ್ ನಿಲ್ದಾಣದಲ್ಲಿ ತನ್ನ ಕಾಲೇಜು ಸಹಪಾಠಿಯೊಂದಿಗೆ ಬಸ್ಸಿನಲ್ಲಿ ಕುಳಿತಿದ್ದ ವೇಳೆ ಬಸ್ ಗೆ ದಾಳಿ ಮಾಡಿದ್ದ ಸಂಘಪರಿವಾರದ ಕಾರ್ಯಕರ್ತರು ಶಿವಮೊಗ್ಗ ಮೂಲದ ವಿದ್ಯಾರ್ಥಿಗೆ ತೀವ್ರ ತರದಲ್ಲಿ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಆ ಬಳಿಕ ನಿನ್ನೆ ರಾತ್ರಿ ನಗರದ ನೀರುಮಾರ್ಗ ಬಳಿಯಲ್ಲಿ ಅಬ್ದುಲ್ ರಝಾಕ್ ಎಂಬವರ ಮೇಲೆ ಸಂಘಪರಿವಾರದ ಕಾರ್ಯಕರ್ತರು ತಲವಾರು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದರು. ಮೂಲಗಳು ತಿಳಿಸುವಂತೆ ಅವರ ಕಣ್ಣಿಗೆ ಗಂಭೀರವಾದ ಗಾಯಗಳಾಗಿದೆ ಎನ್ನಲಾಗಿದೆ.

- Advertisement -

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp