ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ| ಕೊಹ್ಲಿ, ಬುಮ್ರಾ, ಚಾಹಲ್’ಗೆ ವಿಶ್ರಾಂತಿ

Prasthutha|

ವೆಸ್ಟ್ ಇಂಡೀಸ್ ವಿರುದ್ಧ ಜುಲೈ 29ರಿಂದ ಪ್ರಾರಂಭವಾಗಲಿರುವ ಐದು ಪಂದ್ಯಗಳ ಟಿ20 ಸರಣಿಗೆ 18 ಸದಸ್ಯರ ಟೀಮ್ ಇಂಡಿಯಾವನ್ನು‌ ಪ್ರಕಟಿಸಲಾಗಿದೆ.
ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ, ಯಜುವೇಂದ್ರ ಚಹಾಲ್’ಗೆ ವಿಶ್ರಾಂತಿ ನೀಡಲಾಗಿದ್ದು, ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ.

- Advertisement -

ಕಳೆದ ಕೆಲ ಸಮಯದಿಂದ ಫಾರ್ಮ್ ಕಂಡುಕೊಳ್ಳಲು ವಿಫಲರಾಗುತ್ತಿರುವ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ, 2019ರ ನವೆಂಬರ್ ಬಳಿಕ ಕ್ರಿಕೆಟ್‌ನ ಮೂರೂ ಮಾದರಿಗಳಲ್ಲಿಯೂ ಒಂದೇ ಒಂದು ಶತಕ ದಾಖಲಿಸಿಲ್ಲ. 15ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಕ್ತಾಯದ ಬಳಿಕ ದಕ್ಷಿಣ ಆಫ್ರಿಕಾ ಹಾಗೂ ಐರ್ಲೆಂಡ್ ಎದುರಿನ ಟಿ20 ಸರಣಿಯಿಂದ  ಕೊಹ್ಲಿ, ಹೊರಗುಳಿದಿದ್ದರು. ಇತ್ತೀಚೆಗಷ್ಟೇ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಮತ್ತು ಟಿ20 ಸರಣಿಯಲ್ಲಿಯೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲು ಕೊಹ್ಲಿ ವಿಫಲವಾಗಿದ್ದರು. ಗಾಯದ ಸಮಸ್ಯೆಯಿಂದಾಗಿ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ವಿರಾಟ್ ಕೊಹ್ಲಿ  ಹೊರಗುಳಿದಿದ್ದರು.

ಕೆ.ಎಲ್.ರಾಹುಲ್ ಮತ್ತು ಕುಲ್ದೀಪ್ ಯಾದವ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಈ ಇಬ್ಬರು ಆಟಗಾರರು ದೈಹಿಕ ಸಾಮರ್ಥ್ಯವನ್ನು ಸಾಬೀತು ಪಡಿಸಬೇಕಾಗಿದ್ದು, ಆ ಬಳಿಕವಷ್ಟೆ ಆಡುವ ಬಳಗಕ್ಕೆ ಪರಿಗಣಿಸುವ ಸಾಧ್ಯತಯಿದೆ.

- Advertisement -

*ಅಶ್ವಿನ್ ಗೆ ಅವಕಾಶ, ಮಲಿಕ್, ಸ್ಯಾಮ್ಸನ್ ಗೆ ನಿರಾಸೆ*
ಕಳೆದ ಕೆಲ ವರ್ಷಗಳಿಂದ ಟೆಸ್ಟ್ ತಂಡಕ್ಕೆ ಸೀಮಿತವಾಗಿದ್ದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಟಿ20 ತಂಡಕ್ಕೆ ಮರಳಿದ್ದಾರೆ. ರಾಂಚಿಯಲ್ಲಿ ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧ ನಡೆದ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಅಶ್ವಿನ್ ಕೊನೇಯದಾಗಿ ಆಡಿದ್ದರು. ಇತ್ತೀಚೆಗಷ್ಟೇ ನಡೆದ ಇಂಗ್ಲೆಂಡ್ ವಿರುದ್ಧದ ಮಹತ್ವದ ಟೆಸ್ ಪಂದ್ಯದಲ್ಲಿಯೂ ಆಡುವ ಬಳಗದಿಂದ ಅಶ್ವಿನ್ ಹೊರಗುಳಿದಿದ್ದರು.
ಮತ್ತೊಂದೆಡೆ ಐಪಿಎಲ್ ನಲ್ಲಿ ಅಮೋಘ ಪ್ರದರ್ಶನ ನೀಡಿ ಟೀಮ್ ಇಂಡಿಯಾ ಸೇರಿದ್ದ ಜಮ್ಮು ಕಾಶ್ಮೀರದ ವೇಗಿ ಉಮ್ರಾನ್ ಮಲಿಕ್, ಮತ್ತು ಐರ್ಲೆಂಡ್ ವಿರುದ್ದ ಅತ್ಯುತ್ತಮ ಪ್ರದರ್ಶನ ನೀಡಿದ್ದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರನ್ನು ಬಿಸಿಸಿಐ ಆಯ್ಕೆ ಸಮಿತಿ ಕಡೆಗಣಿಸಿದೆ.

*ವೆಸ್ಟ್ ಇಂಡೀಸ್ ಎದುರಿನ 5 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡ*
ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ಕೆ ಎಲ್ ರಾಹುಲ್*, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ರವಿ ಬಿಷ್ಣೋಯಿ, ಕುಲ್ದೀಪ್ ಯಾದವ್*, ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಹರ್ಷಲ್ ಪಟೇಲ್, ಆರ್ಶದೀಪ್ ಸಿಂಗ್.

Join Whatsapp