ಪೆರೋಲ್ ಮೇಲೆ ಜೈಲಿಂದ ಹೊರ ಹೋಗಿ 14 ವರ್ಷ ತಲೆಮರೆಸಿಕೊಂಡ ಕೈದಿ ಸೆರೆ

Prasthutha|

ಬೆಂಗಳೂರು: ಪೆರೋಲ್ ಮೇಲೆ ಜೈಲಿಂದ ಹೊರ ಹೋಗಿ ಸುಮಾರು 14 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಕೈದಿಯನ್ನು ನಗರದ ಮಡಿವಾಳ ಪೊಲೀಸರು ಬಂಧಿಸಿದ್ದಾರೆ.

- Advertisement -

ಹಾವೇರಿ ಮೂಲದ ಕರುಣಾಕರ್ (48) ಬಂಧಿತ ಕೈದಿ. 1998ರಲ್ಲಿ ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯಲ್ಲಿ ಸಂಜೀವ್ ಎಂಬಾತನನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಕರುಣಾಕರ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಹಲವು ವರ್ಷಗಳಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಜೈಲು ಶಿಕ್ಷೆ ಅನುಭವಿಸಿದ್ದ. ಈ ನಡುವೆ 2008ರಲ್ಲಿ ತಾಯಿಗೆ ಆರೋಗ್ಯದ ಸಮಸ್ಯೆ ಎಂದು ಹೇಳಿ, ಪೆರೋಲ್ ಮೇಲೆ ಜೈಲಿನಿಂದ ಹೊರ ಹೋಗಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

- Advertisement -

ಪೆರೋಲ್ ಅವಧಿ ಮುಕ್ತಾಯಗೊಂಡರೂ ಜೈಲಿಗೆ ವಾಪಸ್ ಆಗಿರಲಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಮಡಿವಾಳ ಪೊಲೀಸರು ಶೋಧ ನಡೆಸುತ್ತಿದ್ದರು. ಇತ್ತೀಚೆಗೆ ಕರುಣಾಕರ್ ಹಾವೇರಿಯ ಸಮೀಪದ ಹಾನಗಲ್ ನಲ್ಲಿ ಇರುವ ಬಗ್ಗೆ ಸುಳಿವು ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ಹಾನಗಲ್ ಗೆ ತೆರಳಿದ ತಂಡ ಅಪರಾಧಿ ಕರುಣಾಕರ್ನ್ನು ಬಂಧಿಸಿ ನಗರಕ್ಕೆ ಕರೆ ತಂದು ಮತ್ತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ.

ಕರುಣಾಕರ್ ಜೈಲಿನಿಂದ ಹೊರ ಹೋದ ಬಳಿಕ ಸತತ 14 ವರ್ಷಗಳಿಂದ ಮನೆಗೂ ಹೋಗದೆ, ಹಾವೇರಿಯಲ್ಲಿ ಸಣ್ಣ ಹೋಟೆಲ್ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp