ಸ್ವಾತಂತ್ರ್ಯ: 2020ರ ಪಾಠ

Prasthutha|

– ಎಚ್. ಪಟ್ಟಾಭಿರಾಮ ಸೋಮಯಾಜಿ

- Advertisement -

ನಮ್ಮ ದೇಶದಲ್ಲಿ ಈಗ ಕೊರೋನ ಬಂದ ಮೇಲೆ ನಮ್ಮ ಸಮಾಜದಲ್ಲಿ ಅಂತರ್ಗತವಾಗಿದ್ದ ಹಲವು ಛಿದ್ರಗಳು ಬೆಳಕಿಗೆ ಬರುತ್ತಿವೆ. ಬಡವರು, ಬಡಕೂಲಿ ಕಾರ್ಮಿಕರನ್ನು ಅತ್ಯಂತ ನಿಕೃಷ್ಟವಾಗಿ ಮತ್ತು ಕ್ರೂರವಾಗಿ ನಡೆಸಿಕೊಳ್ಳಲಾಗುತ್ತಿದೆ. ಬಹುದೊಡ್ಡ ಸಂಖ್ಯೆಯ ಬಡವರ ಜೀವನ ಅತ್ಯಂತ ಅತಂತ್ರವಾಗಿದೆ. ಮನೆ ಮಠಗಳು ಇರುವವರು ಮನೆಯೊಳಗೆ ಕೂತು ಹೊಸ ಹೊಸ ರುಚಿಯ ಖಾದ್ಯಗಳನ್ನು ತಿಂದು ಜಾಗಟೆ ಬಡಿದುಕೊಂಡು ಕೂತಲ್ಲೇ ಸಂಪಾದನೆ ಮಾಡುತ್ತಿದ್ದಾರೆ.

 ಸರಕಾರ ಮತ್ತು ಅದರ ಅಂಗಸಂಸ್ಥೆಗಳು, ಪರಿಸರ ಸೇರಿದಂತೆ ಬಡವರನ್ನು ಅಪರಾಧಿಗಳಂತೆ ನಡೆಸಿಕೊಳ್ಳುತ್ತಿದೆ. 135 ಕೋಟಿ ಜನರ ದೇಶವನ್ನು ನಾಲ್ಕೇ ಗಂಟೆಗಳಲ್ಲಿ ಲಾಕ್‌ಡೌನ್ ಮಾಡಿ ಬಡವರಿಗೆ ಗಾಯಮಾಡಿ ಬರೆ ಎಳೆಯಲಾಗಿದೆ. ತಮ್ಮ ಹಕ್ಕುಗಳೇನು, ಸಮಾಜದ ಮತ್ತು ಸರಕಾರದ ಜವಾಬ್ದಾರಿಗಳೇನು ಎಂಬುದು ಅವರಿಗೆ ತಿಳಿಯದಂತಾಗಿದೆ. ಕೇವಲ ಮೂರು ದಶಕಗಳಲ್ಲಿ ಏಳೆಂಟು ದಶಕಗಳ ಹಿಂದಿನ ತನಕ ಹೋರಾಟ ಮಾಡಿ ಬೆಳೆಸಿಕೊಂಡ ಸ್ವಾತಂತ್ರ, ಸ್ವಾಭಿಮಾನ, ಸ್ವಾವಲಂಬನೆ, ಭವ್ಯ ಭವಿತವ್ಯಗಳ ಕನಸುಗಳೆಲ್ಲ ಈಗ ಮೂರಾಬಟ್ಟೆಯಾಗಿ ಕವಿ ಸಿದ್ದಲಿಂಗಯ್ಯ ಬಹಳ ಹಿಂದೆಯೇ ಕೇಳಿದ ಪ್ರಶ್ನೆ, ‘‘ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ?’’ ಈಗ ಇನ್ನಷ್ಟು ಪ್ರಸುತ್ತವೆನಿಸುತ್ತಿದೆ.

- Advertisement -

 ಅಧಿಕಾರರೂಢ ಜನ ಧರ್ಮೋನ್ಮಾದ ಮತ್ತು ಯುದ್ಧೋನ್ಮಾದಗಳಲ್ಲಿ ಮೈ ಮರೆತಿದ್ದರೆ, ಮಹಾತ್ಮ ಗಾಂಧಿ ತಮ್ಮ ‘‘ಹಿಂದ್ ಸ್ವರಾಜ್’’ ಎಂಬ ಕೃತಿಯಲ್ಲಿ ಅಪರಿಮಿತ ಆಶಾವಾದದಿಂದ ಆಡಿರುವ ಒಂದು ಮಾತು ಹೀಗಿದೆ; ‘‘ಚರಿತ್ರೆಯಲ್ಲಿ ಯಾವುದು ಇದುವರೆಗೆ ಘಟಿಸಿಲ್ಲವೋ ಅದು ಇನ್ನೆಂದೂ ಘಟಿಸಲಾರದು ಎಂದು ವಾದಿಸಿದರೆ ಅದು ಮನುಷ್ಯರ ಘನತೆಯ ಕುರಿತು ಅಪನಂಬಿಕೆಯನ್ನು ಪ್ರತಿಪಾದಿಸಿದಂತೆ’’. ಸ್ವಾತಂತ್ರ್ಯ ಹೋರಾಟದ ಉದ್ದಕ್ಕೂ ಅಂದರೆ ಮಹಾತ್ಮ ಗಾಂಧಿಯ ಕಾಲಕ್ಕೂ ಮೊದಲು ಮತ್ತು ಮಹಾತ್ಮ ಗಾಂಧಿಯ ಕಾಲದಲ್ಲಿ ಹಾಗೂ ಮಹಾತ್ಮ ಗಾಂಧಿಯ ಪ್ರಭಾವ ದಟ್ಟವಾಗಿದ್ದ ಸ್ವಾತಂತ್ರೋತ್ತರ ಕಾಲದಲ್ಲಿ, ಅಂದರೆ ಸರಿಸುಮಾರು 1990ರ ದಶಕದ ವರೆಗೆ ಈ  ಅಪರಿಮಿತ ಆಶಾವಾದ ಚಾಲ್ತಿಯಲ್ಲಿತ್ತು. ಸಮಾಜವನ್ನು ದಟ್ಟವಾಗಿ ಪ್ರಭಾವಿಸಿತ್ತು, ಹೊಸ ಸಮಾಜದ ಕನಸು ಕಮರದೆ ಉಳಿದಿತ್ತು. ಆದರೆ ಈಗ ಚಾಲ್ತಿಯಲ್ಲಿರುವ ವಿಷಪೂರಿತ ರಾಜಕೀಯ ಮತ್ತು ಧಾರ್ಮಿಕ ಸಿದ್ಧಾಂತ ಈ ಆಶಾವಾದವನ್ನು ಹೊಸಕಿ ಹಾಕುವುದರಲ್ಲಿ ತಲ್ಲೀನವಾಗಿದೆ.

 ಮೇಲೆ ಹೇಳಲಾದ ಗಾಂಧಿಯ ಮಾತುಗಳನ್ನು, ಅದರ ಆಶಾವಾದವನ್ನು ಸಂಪೂರ್ಣ ತಿರುಚಿ ಕ್ರೂರ ವ್ಯಂಗ್ಯವನ್ನಾಗಿ ಪರಿವರ್ತಿಸಲಾಗಿದೆ. ಸ್ವರ್ಗದ ಪ್ರಾಬಲ್ಯ ಕುಗ್ಗಿ ನರಕದ ಸಾಮ್ರಾಜ್ಯ ವಿಸ್ತರಿಸುತ್ತದೆ. ಈ ವಿಕಟ ವಿದ್ಯಮಾನ ನಮ್ಮ ಜೀವಿತಾವಧಿಯಲ್ಲಿಯೇ ಜರಗುತ್ತಿರುವ ವರ್ತಮಾನದ ಚರಿತ್ರೆಯಾಗಿದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ 74 ವರ್ಷಗಳು ಎಂಬುದು ಸುದೀರ್ಘ ಕಾಲವೇ ಆಗಿದ್ದರೂ ಒಂದು ದೇಶದ ಚರಿತ್ರೆಯ  ವಿಷಯದಲ್ಲಿ ಇದು ನಿಜವಲ್ಲ.

 ಕಾಲಾಂತರದಲ್ಲಿ ಲಾಗಾಯಿತಿ ನಿಂದಲೂ ಸಮಾಜ ಸುಧಾರಕರು, ಧರ್ಮ ಸುಧಾರಕರು, ಸಂತರು, ದ್ರಷ್ಟಾರರು, ಕವಿಗಳು ಹವಣಿಸಿದ ಸುಧಾರಣೆಯ ಕ್ರಮಗಳಿಗೆ ಸ್ವಾತಂತ್ರ ಹೋರಾಟದ ಕಾಲದಲ್ಲಿ ಹೊಸ ವೇಗ ಮತ್ತು ಉತ್ಕರ್ಷ ಪ್ರಾಪ್ತವಾಗಿತ್ತು. ಪ್ರಮುಖವಾಗಿ ಮಹಾತ್ಮ ಗಾಂಧಿಯ ನೇತೃತ್ವದಲ್ಲಿ ಇಡೀ ದೇಶವೇ ತನ್ನನ್ನು ತಾನು ಆತ್ಮ ವಿಮರ್ಶೆಗೆ ಒಡ್ಡಿಕೊಂಡಿತ್ತು. ಇದರಲ್ಲಿ ಪಾಶ್ಚಾತ್ಯ ಪ್ರಭಾವದಿಂದ ಒದಗಿ ಬಂದ ಆಧುನಿಕತೆಯ ಕೊಡುಗೆಯೂ ಸಾಕಷ್ಟಿತ್ತು. ಪ್ರಜಾತಂತ್ರವೆಂಬ ಅದುವರೆಗೆ ಅಷ್ಟಾಗಿ ಪರಿಚಿತವಲ್ಲದ ಹೊಸ ಸಿದ್ಧಾಂತವೊಂದು ಬೇರು ಬಿಡಲು ಮತ್ತು ಬೆಳೆಯಲು ಪ್ರಾರಂಭಿಸಿತು. ಇದೇನೂ ಒಂದೆರಡು ದಿನಗಳಲ್ಲಿ ನಡೆದ ಪವಾಡವಾಗಿರಲಿಲ್ಲ. ಬದಲಾಗಿ ಶತಮಾನಗಳ ಕಾಲದ ಮತ್ತು ದೇಶಾಂತರದ ಪ್ರಭಾವದಿಂದ ಈ ಹೊಸ ವಿದ್ಯಮಾನ ಘಟಿಸಿತ್ತು.

 ನಮ್ಮ ಕಣ್ಣಾರೆ, ನಮ್ಮ ಜೀವಿತಾವಧಿಯಲ್ಲಿಯೇ ಜರಗುತ್ತಿರುವ ಘೋರ ದುರಂತ ಇದೆಲ್ಲವನ್ನು ಬುಡಮೇಲು ಮಾಡಲು, ಮೂಲೋತ್ಪಾಟನೆ  ಮಾಡಲು ಹೊರಟಿದೆ ಎಂಬುದು ಸಣ್ಣ ಸಂಗತಿಯೇನಲ್ಲ. ಜಾತಿ ತಾರತಮ್ಯ, ಅಸ್ಪಶ್ಯತೆ, ಲಿಂಗ ತಾರತಮ್ಯ, ಬಡತನ, ಆರ್ಥಿಕ ಅಸಮಾನತೆ, ಪರಾವಲಂಬನೆ ಮುಂತಾದವು ಈಗ ಮತ್ತೆ ರೂಢಿಗೊಳ್ಳುತ್ತಿರುವ ವಿಷಮ ಕಾಲಘಟ್ಟದಲ್ಲಿ ನಾವಿದ್ದೇವೆ. ವ್ಯಂಗ್ಯ ಎಂಬಂ ಇವತ್ತು, ಕೊರೋನಾದ ಹೆಸರಿನಲ್ಲಿ, ಸಾಮಾಜಿಕ ಅಂತರ ಎಂಬುದನ್ನು ಮಾನ್ಯಗೊಳಿಸಲು ಹೊರಟಿದೆ. ಭೌತಿಕ ಅಂತರ ಅಗತ್ಯವಿರುವಲ್ಲಿ ಸಾಮಾಜಿಕ ಅಂತರ ರಾರಾಜಿಸುತ್ತಿದೆ. ನಾವು ಯಾವುದನ್ನು ಸ್ವಾತಂತ್ರ್ಯ  ಎಂದು ಕರೆಯುತ್ತಿದ್ದೇವೆಯೋ ಅದು ಬಹಳ ಜನರಿಗೆ ರಾಜಕೀಯ ಸ್ವಾತಂತ್ರ್ಯ ಎಂಬ ಸಂಕುಚಿತ ವಿಷಯವಾಗಿದೆ. ಸ್ವಾತಂತ್ರ ಹೋರಾಟದ ಕಾಲದಲ್ಲಿ ಮಹಾತ್ಮ ಗಾಂಧಿಯವರು ಸ್ವಾತಂತ್ರ್ಯ ಎಂಬ ಪರಿಕಲ್ಪನೆಯ ಬದಲು ಸ್ವರಾಜ್ಯ ಎಂಬ ಪರಿಕಲ್ಪನೆಯನ್ನು ಚಾಲ್ತಿಗೆ ತಂದಿದ್ದರು.

 ಸ್ವರಾಜ್ಯ ಎಂಬ ಪರಿಕಲ್ಪನೆಯಲ್ಲಿ ಕೊನೆಯ ಪಕ್ಷ ಮೂರು ಅಂಶಗಳು ಅಂತರ್ಗತವಾಗಿವೆ. ಅವುಗಳೆಂದರೆ ಅರ್ಥಿಕ ಸ್ವಾವಲಂಬನೆ, ಸಾಂಸ್ಕೃತಿಕ ಸ್ವಾಯತ್ತತೆ ಮತ್ತು ರಾಜಕೀಯ ಸ್ವಾತಂತ್ರ. ಮಹಾತ್ಮ ಗಾಂಧಿಯವರಿಗೆ ರಾಜಕೀಯ ಸ್ವಾತಂತ್ರ ಎಂಬುದೊಂದೇ ದೊಡ್ಡ  ವಿಷಯವಾಗಿರಲಿಲ್ಲ. ಕಟ್ಟ ಕಡೆಯ ಪ್ರತಿ ಮನುಷ್ಯನ ಕಣ್ಣೀರನ್ನು ತೊಡೆಯುವುದು ಅಥವಾ ಸರ್ವೋದಯ ಗಾಂಧಿ ಚಿಂತನೆಯ ಒಂದು ತುದಿಯಾದರೆ, ಎಲ್ಲ ಬಗೆಯ ಅಧಿಕಾರದ ದರ್ಪದ ಎದುರು ಅಧಿಕಾರದ ಮುಖಕ್ಕೆ ಸತ್ಯವನ್ನು ನುಡಿಯುವುದು ಗಾಂಧಿ ಚಿಂತನೆಯ ಇನ್ನೊಂದು ತುದಿ. ಈ ಚಿಂತನೆಯ ಹರಹು ಅತ್ಯಂತ ವ್ಯಾಪಕವಾದದ್ದು. ಇದು ಐಹಿಕವನ್ನಷ್ಟೇ ಅಲ್ಲದೇ ಪಾರಮಾರ್ಥಿಕತೆಗೆ ವಿಶೇಷ ಪ್ರಾಶಸ್ತ್ಯ ನೀಡುವಂತದ್ದು. ಗಾಂಧಿಯ ಪ್ರಕಾರ ಮನುಷ್ಯ ಜೀವನವೆಂಬುವುದು ಧರ್ಮದ ಭದ್ರ ಬುನಾದಿಯ ಮೇಲೆ ಅರಳುವಂತದ್ದು. ಗಾಂಧಿಗೆ ಧರ್ಮವೆಂದರೆ ಗುಡಿ ಚರ್ಚು ಮಸೀದಿಗಳಲ್ಲ, ಬದಲಾಗಿ ತನ್ನ ದೈವದ ಜೊತೆಗೆ ನಿರಂತರ ಅನುಸಂಧಾನದ ಆಧ್ಯಾತ್ಮಿಕತೆ.

 ಇವತ್ತು ಬದುಕಿನ ಎಲ್ಲ ರಂಗಗಳು ಕಲುಷಿತವಾಗುತ್ತಿವೆ ಎಂಬುವುದು ಒಂದು ಬಗೆಯ ದುರಂತವಾದರೆ, ಧಾರ್ಮಿಕ ದೊಂಬರಾಟದಲ್ಲಿ ಆಧ್ಯಾತ್ಮಿಕತೆ ಎಂಬುದು ಹೇಳ ಹೆಸರಿಲ್ಲದಂತಾಗಿರುವುದು ಇನ್ನೊಂದು ಘೋರ ದುರಂತವಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವೂ ಒಂದು ಹೊಸ ಆಡಂಬರವಾಗಿದೆ. ಹಾಗೆಂದೇ ನಮ್ಮ ಈ ಕಾಲಘಟ್ಟ ಮತ್ತು ಈ ಸ್ವಾತಂತ್ರ್ಯಾಚಾರಣೆಗಳು ತಳಸ್ಪರ್ಶಿಯಾದ ಆತ್ಮ ವಿಮರ್ಶೆಗೆ ಕೂಡ ಸಕಾಲವಾಗಿದೆ.

Join Whatsapp