ವ್ಯವಸ್ಥಿತ ಯೋಜನೆಯೊಂದಿಗೆ ಪ್ರಜಾಪ್ರಭುತ್ವ ಅಳಿಸುವ ಯತ್ನ: ಎಸ್.ಡಿ.ಪಿ.ಐ

Prasthutha|

ಫ್ಯಾಶಿಸಂ ಸೋಲಿಸಲು ರಾಷ್ಟ್ರೀಯ ಅಧ್ಯಕ್ಷರ ಕರೆ

- Advertisement -

ಹೊಸದಿಲ್ಲಿ: ಬಾಬರಿ ಮಸೀದಿ ಧ್ವಂಸ ಪ್ರಕರಣದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದ ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು, ಪ್ರಸ್ತುತ ಭಾರತೀಯ ರಾಜಕೀಯ ಸನ್ನಿವೇಶದಲ್ಲಿ ಅನಿರೀಕ್ಷಿತವಲ್ಲದಿದ್ದರೂ, ಇದು ಅತ್ಯಂತ ನಿರಾಶಾದಾಯಕವಾಗಿದೆ ಮತ್ತು ಇದು ಭಾರತೀಯ ನ್ಯಾಯಾಂಗದ ಮೇಲಿನ ಸಾಮಾನ್ಯ ಜನರ ಭರವಸೆಯನ್ನು ಕಳೆದುಕೊಳ್ಳುವಂತೆ ಮಾಡಿದೆ. ಮಸೀದಿ ಧ್ವಂಸ ಪೂರ್ವನಿಯೋಜಿತವಲ್ಲ ಮತ್ತು ಆರೋಪಿಗಳು ಅಪರಾಧದಲ್ಲಿ ಭಾಗಿಯಾಗಿಲ್ಲ ಎಂಬ ನ್ಯಾಯಾಲಯದ ಅವಲೋಕನವು ನ್ಯಾಯವನ್ನು ಅಪಹಾಸ್ಯ ಮಾಡುವಂತಿದೆ ಎಂದು ತೀರ್ಪಿನ ಬಗ್ಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಪ್ರತಿಕ್ರಿಯಿಸಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವವನ್ನು ಅಳಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದೂ ಅವರು ಪತ್ರಿಕಾ ಪ್ರಕಟನೆಯಲ್ಲಿ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆಯಲ್ಲಿನ ಐತಿಹಾಸಿಕ ಬಾಬರಿ ಮಸೀದಿಯ ವಿಷಯದಲ್ಲಿ ಸುಪ್ರೀಂಕೋರ್ಟ್ ಗೆ ನೀಡಿದ ಎಲ್ಲ ಭರವಸೆಗಳು ಮತ್ತು ವಾಗ್ದಾನಗಳನ್ನು ಉಲ್ಲಂಘಿಸಿ, ಹಿರಿಯ ಬಿಜೆಪಿ ನಾಯಕ ಮತ್ತು ಹಿಂದುತ್ವ ಸಂಘಟನೆಗಳ ಮುಖಂಡರಾದ ಎಲ್.ಕೆ.ಅಡ್ವಾಣಿ, ಉಮಾ ಭಾರತಿ, ವಿನಯ್ ಕಟಿಯಾರ್ ಮತ್ತು ಇತರರ ನೇತೃತ್ವದ ಬಲಪಂಥೀಯ ಹಿಂದುತ್ವ ಫ್ಯಾಸಿಸ್ಟ್ ಕರಸೇವಕರು ಮಸೀದಿಯನ್ನು ನೆಲಸಮ ಮಾಡಿದ್ದನ್ನು ಇಡೀ ಜಗತ್ತು ನೇರವಾಗಿ ವೀಕ್ಷಿಸಿದೆ. ಮಸೀದಿ ಧ್ವಂಸಗೊಳಿಸುವಾಗ ಆಗಿನ ಪ್ರಧಾನ ಮಂತ್ರಿ ನರಸಿಂಹ ರಾವ್ ಅವರು ಕಂಡೂ ಕಾಣದಂತೆ ನಟಿಸಿದ್ದರು. ಉತ್ತರ ಪ್ರದೇಶ ಮತ್ತು ಕೇಂದ್ರದಲ್ಲಿ ಇಡೀ ಸರ್ಕಾರಗಳು ಮಸೀದಿ ಧ್ವಂಸವನ್ನು ನೋಡುತ್ತಾ ಮೌನವಾಗಿ ಬೆಂಬಲಿಸಿದವು. ಕರಸೇವಕರು ಮಸೀದಿ ನೆಲಸಮ ಮಾಡುವುದನ್ನು ತಡೆಯಲು ಯಾವುದೇ ಪ್ರಯತ್ನವನ್ನೂ ಈ ಸರ್ಕಾರಗಳು ಮಾಡಲಿಲ್ಲ ಎಂದು ಅವರು ಹೇಳಿದ್ದಾರೆ.

- Advertisement -

ಮಸೀದಿ ಧ್ವಂಸ ಪ್ರಕರಣದ ವಿಚಾರಣೆಗೆ ನೇಮಕಗೊಂಡ ಲಿಬರ್ಹಾನ್ ಆಯೋಗವು 17 ವರ್ಷಗಳ ನಂತರ ಸಲ್ಲಿಸಿದ ವರದಿಯಲ್ಲಿ ಬಾಬರಿ ಮಸೀದಿ ಧ್ವಂಸ ಕೃತ್ಯವು ಪೂರ್ವಯೋಜಿತ, ಉದ್ದೇಶಪೂರ್ವಕ ಹಾಗೂ ವ್ಯವಸ್ಥಿತವಾಗಿತ್ತು. ಬಿಜೆಪಿ ಸೇರಿದಂತೆ ಸಂಘ ಪರಿವಾರ ಮತ್ತು ಅದರ ಅಂಗಸಂಸ್ಥೆಗಳು ಉದ್ದೇಶಪೂರ್ವಕವಾಗಿ ಕೋಮು ಅಸಹಿಷ್ಣುತೆಯ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ರೂಪಿಸಿದ ಕೃತ್ಯವಾಗಿತ್ತು ಎಂದು ಹೇಳಿತ್ತು ಎಂದು ತಿಳಿಸಿದ್ದಾರೆ.

ವರದಿಯಲ್ಲಿ ಒಟ್ಟು 68 ಜನರನ್ನು ಹೆಸರಿಸಲಾಗಿದ್ದು, ಅವರಲ್ಲಿ ಹೆಚ್ಚಿನವರು ಸಂಘ ಪರಿವಾರದವರು. ಮಸೀದಿಯ ಧ್ವಂಸಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವ ಹಿಂದೂ ಪರಿಷತ್, ಭಜರಂಗದಳ ಮತ್ತು ಬಿಜೆಪಿ ಒಳಗೊಂಡ ಸಂಘ ಪರಿವಾರದ ಸದಸ್ಯರೇ ಜವಾಬ್ದಾರರಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಪಟ್ಟಿಯಲ್ಲಿ ಕೇವಲ ತೀವ್ರ ಹಿಂದೂತ್ವವಾದಿಗಳಾದ ಲಾಲ್ ಕೃಷ್ಣ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಮಾತ್ರವಲ್ಲ, ಸೌಮ್ಯವಾದಿ ಮುಖ ಎಂದೇ ಬಿಜೆಪಿ ಬಿಂಬಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಅವರೂ ಇದ್ದರು ಎಂದು ಅವರು ಹೇಳಿದ್ದಾರೆ.

‘ಎಲ್.ಕೆ. ಅಡ್ವಾಣಿ, ಎ.ಬಿ. ವಾಜಪೇಯಿ ಅಥವಾ ಎಂ.ಎಂ. ಜೋಶಿಗೆ ಮಸೀದಿ ಧ್ವಂಸ ಕೃತ್ಯದ ವಿಷಯ ತಿಳಿದಿರಲಿಲ್ಲ ಎಂಬುದು ನಂಬಲು ಸಾಧ್ಯವಿಲ್ಲ. ಈ ನಾಯಕರನ್ನು ಪರಿವಾರದವರು ಬಳಸುತ್ತಿದ್ದರು. ಅವರು ಪಕ್ಷ ತೆಗೆದುಕೊಂಡ ತೀರ್ಮಾನಗಳ ಪರವಾಗಿದ್ದರು’ ಎಂದು ಲಿಬರ್ಹಾನ್ ಹೇಳಿದ್ದರು ಎಂದು ಅವರು ನೆನಪಿಸಿದ್ದಾರೆ.

ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್ ಅವರಿಗೆ ಲಿಬರ್ಹಾನ್ ಆಯೋಗದ ಅಂಶಗಳು ತಿಳಿದಿಲ್ಲವೆಂದು ತೋರುತ್ತದೆ. ಮಸೀದಿ ಧ್ವಂಸಗೊಳಿಸಿದ ಪ್ರಕರಣದಲ್ಲಿ ಇಂದು ದೋಷಮುಕ್ತರಾದ ಎಲ್ಲರೂ ಧ್ವಂಸದ ಸೂತ್ರಧಾರಿಗಳೆಂದು ಸ್ಪಷ್ಟವಾಗಿ ವರದಿಯಲ್ಲಿ ಹೇಳಲಾಗಿದೆ ಎಂದು ಫೈಝಿ ಹೇಳಿದ್ದಾರೆ.

“ಆಶ್ಚರ್ಯಕರ ಅಂಶವೆಂದರೆ, ನ್ಯಾಯಾಧೀಶ ಯಾದವ್ ಅವರು ಮಸೀದಿ ಧ್ವಂಸವನ್ನು ತಡೆಯಲು ಎಲ್.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರು ಪ್ರಯತ್ನಿಸಿದ್ದಾರೆ ಎಂಬ ಮನ್ನಣೆಯನ್ನೂ ಕೊಟ್ಟಿದ್ದಾರೆ. ಅಸ್ತಿತ್ವದಲ್ಲಿದ್ದ ಬಾಬರಿ ಮಸೀದಿಯ ಜಾಗದಲ್ಲಿ ರಾಮ ಮಂದಿರ ನಿರ್ಮಿಸಲು ದೇಶಾದ್ಯಂತ ಎಲ್.ಕೆ.ಅಡ್ವಾಣಿ ನಡೆಸಿದ ರಥಯಾತ್ರೆ ರಹಸ್ಯ ಚಟುವಟಿಕೆಯಾಗಿರಲಿಲ್ಲ. ಬಾಬರಿ ಮಸೀದಿಯನ್ನು ಕೆಡವಲು ಮತ್ತು ಧ್ವಂಸಗೊಳಿಸಲು ಸಂಘ ಪರಿವಾರದ ಪ್ರತಿಯೊಂದು ಚಲನವಲನಗಳಿಗೆ ಇಡೀ ಜಗತ್ತು ಸಾಕ್ಷಿಯಾಗಿತ್ತು. ನ್ಯಾಯಮೂರ್ತಿ ಸುರೇಂದ್ರ ಕುಮಾರ್ ಯಾದವ್ ಅವರು ಇಂದು ತಮ್ಮ ತೀರ್ಪಿನಲ್ಲಿ ಉತ್ತಮ ನಡವಳಿಕೆ ಪ್ರಮಾಣಪತ್ರ ನೀಡಿದ ಎಲ್ಲ ನಾಯಕರು ಮಸೀದಿಯನ್ನು ಧ್ವಂಸಗೊಳಿಸಲು ಕರಸೇವಕರಿಗೆ ಪ್ರೋತ್ಸಾಹಿಸಿದ್ದರು ಮತ್ತು ಮಸೀದಿ ಧ್ವಂಸಗೊಂಡಾಗ ಆನಂದಿಸುತ್ತಿದ್ದರು” ಎಂದು ಫೈಝಿ ತಿಳಿಸಿದ್ದಾರೆ.

ಸಿಬಿಐ ವಿಶೇಷ ನ್ಯಾಯಾಲಯವು ಲಿಬರ್ಹಾನ್ ಆಯೋಗದ ಅಥವಾ ಸಿಬಿಐನ ತನಿಖಾ ವರದಿಯ ಯಾವುದೇ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಬದಲಾಗಿ ಕ್ರಿಮಿನಲ್ ಅಪರಾಧದಲ್ಲಿ ಅಪರಾಧಿಗಳನ್ನು ಗೌರವಿಸುವ ಮೂಲಕ ವಿಶ್ವದ ಮುಂದೆ ದೇಶದ ವರ್ಚಸ್ಸಿಗೆ ಧಕ್ಕೆ ತಂದಿದೆ ಎಂದು ಹೇಳಿದ್ದಾರೆ.

“ಕಾಲು ಶತಮಾನಕ್ಕೂ ಹೆಚ್ಚು ಹಳೆಯದಾದ ಈ ಕ್ರಿಮಿನಲ್ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಇಂದು ತೀರ್ಪು ಪ್ರಕಟಿಸಿದೆ. ಬಾಬರಿ ಮಸೀದಿ ಜಮೀನು ವಿವಾದದ ಬಗ್ಗೆ ದಶಕಗಳ ಸುದೀರ್ಘ ಸಿವಿಲ್ ಮೊಕದ್ದಮೆಯನ್ನು 2019ರ ನವೆಂಬರ್‌ನಲ್ಲಿ ದೇಶದ ಸುಪ್ರೀಂ ಕೋರ್ಟ್ ವಿಲೇವಾರಿ ಮಾಡಿ, ಮಸೀದಿ ಧ್ವಂಸವು ಕಾನೂನುಬಾಹಿರ ಮತ್ತು ಕ್ರಿಮಿನಲ್ ಅಪರಾಧ ಎಂಬ ತನ್ನ ತೀರ್ಪಿನ ಹೊರತಾಗಿಯೂ ಮಂದಿರ ನಿರ್ಮಾಣಕ್ಕಾಗಿ ಮಸೀದಿಯ ಭೂಮಿಯನ್ನು ಹಸ್ತಾಂತರಿಸುವಂತೆ ತೀರ್ಪು ನೀಡಿತ್ತು ಎಂದು ಅವರು ಹೇಳಿದ್ದಾರೆ.

ಈ ವಿಲಕ್ಷಣ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನು ಬಳಿಕ ಕೇಂದ್ರದ ಸಂಘಿ ಸರ್ಕಾರ, ರಾಜ್ಯಸಭಾ ಸದಸ್ಯ ಸ್ಥಾನ ನೀಡಿ ಗೌರವಿಸಿತು. ಇಂದಿನ ತೀರ್ಪು ಕೇಂದ್ರ ಸರ್ಕಾರದ ಪ್ರಭಾವದಡಿ ಬಂದಿದೆ ಎಂಬ ಅಂಶವನ್ನು ನಿಸ್ಸಂದಿಗ್ಧವಾಗಿ ಬಲಪಡಿಸುತ್ತದೆ. ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್ ಅವರು ಸರ್ಕಾರದಿಂದ ಉನ್ನತ ಗೌರವಗಳನ್ನು ಪಡೆಯುವ ಕನಸಿನೊಂದಿಗೆ, ಕೊಡು-ಕೊಳ್ಳುವ ಆಸೆಗೆ ಬಿದ್ದಿರುವುದು ಗೊತ್ತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ವ್ಯವಸ್ಥಿತ ಯೋಜನೆಯ ಮೂಲಕ ಸಂಘ ಪರಿವಾರ ಕ್ರಮೇಣ ಪ್ರಜಾಪ್ರಭುತ್ವವನ್ನು ಅಳಿಸಿಹಾಕಲಿದೆ. ಸಂಘಪರಿವಾರದ ಎಲ್ಲಾ ಕಾನೂನುಬಾಹಿರ ಮತ್ತು ಪ್ರಜಾಪ್ರಭುತ್ವ ವಿರೋಧಿ ಕಾರ್ಯಗಳು ಮತ್ತು ಚಟುವಟಿಕೆಗಳನ್ನು ಬೆಂಬಲಿಸಲು ಸಂಘದ ಪರವಾಗಿರುವ ಅಧಿಕಾರಶಾಹಿ ಮತ್ತು ನ್ಯಾಯಾಂಗದ ಜಾಲವನ್ನು ಅಭಿವೃದ್ಧಿಪಡಿಸಿದೆ. ವೈವಿಧ್ಯತೆಯ ರಾಷ್ಟ್ರ ಅಸ್ತಿತ್ವದಲ್ಲಿರಬೇಕಾದರೆ ಮತ್ತು ಭವಿಷ್ಯದ ಪೀಳಿಗೆಗಳು ಶಾಂತಿ ಮತ್ತು ಸಾಮರಸ್ಯದಿಂದ ಬದುಕಬೇಕಾದರೆ ಸಾರ್ವಜನಿಕರು, ಸಮಾಜದಲ್ಲಿ ನಡೆಯುವ ಅನ್ಯಾಯಕ್ಕೆ ಮೌನವಾಗಿ ಶರಣಾಗುವ ಬದಲು, ಎಚ್ಚೆತ್ತುಕೊಂಡು ಅದರ ವಿರುದ್ಧ ಹೋರಾಟ ನಡೆಸಬೇಕು ಮತ್ತು ಫ್ಯಾಸಿಸಂ ಅನ್ನು ಸೋಲಿಸಬೇಕು ಎಂದು ಫೈಝಿ ಕರೆ ನೀಡಿದ್ದಾರೆ.

Join Whatsapp