ನಿನ್ನೆ ರಾಷ್ಟ್ರ ಧ್ವಜ, ಇಂದು ಹಿಜಾಬ್, ನಾಳೆ…? ದಿನೇಶ್ ಅಮೀನ್ ಮಟ್ಟು ಪ್ರಶ್ನೆ

Prasthutha|

ಬೆಂಗಳೂರು; ಈ ಮಕ್ಕಳದ್ದೇನು ಹಟ? ಹಿಜಾಬ್ ತೆಗೆದಿಟ್ಟು ಶಾಲೆಗೆ ಹೋಗಬಾರದಾ? ಎಂದು ಈಗ ನಮ್ಮವರೇ ಕೇಳುತ್ತಾರಲ್ಲಾ, ಇದೇ ರೀತಿ 1992ರಲ್ಲಿ ಹುಬ್ಬಳ್ಳಿ-ಧಾರವಾಡದ ಜನ “ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಿದರೆ ಇವರದ್ದೇನು ಗಂಟು ಹೋಗುತ್ತಾ? ಎಂದು ಕೇಳುತ್ತಿದ್ದರು.

- Advertisement -

ಅವರಿವರು ಮಾತ್ರ ಅಲ್ಲ, ಆ ಕಾಲದಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಬಂದಿದ್ದ ಶಿವರಾಮ ಕಾರಂತರೂ ನನ್ನೊಡನೆ ಕೇಳಿದ್ದರು. ಆಗ ನಾನು ಧಾರವಾಡದಲ್ಲಿ ಪ್ರಜಾವಾಣಿ ಪತ್ರಿಕೆಗೆ ವರದಿಗಾರನಾಗಿದ್ದೆ.

ಈ ಸಣ್ಣ ಪ್ರಶ್ನೆಯ ಕಿಡಿ ದೊಡ್ಡ ಬೆಂಕಿಯಾಗಿ ಈದ್ಗಾ ಮೈದಾನದ ಹೋರಾಟವಾಗಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಿತು. ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾ ಭಾರತಿಯವರಿಂದ ಹಿಡಿದು ಬಿಜೆಪಿ ಮತ್ತು ಪರಿವಾರದ
ಘಟಾನುಘಟಿ ನಾಯಕರೆಲ್ಲರೂ ಈದ್ಗಾ ಮೈದಾನಕ್ಕೆ ಧಾಂಗುಡಿ ಇಟ್ಟಿದ್ದರು.

- Advertisement -

ರಾಜ್ಯದಲ್ಲಿ ಬಿಜೆಪಿಗೆ ಬೇರು ಬಿಡಲು ಈದ್ಗಾ ಮೈದಾನ ಸಂಘರ್ಷ ನೆರವಾಯಿತು. ಈದ್ಗಾ ಮೈದಾನದ ಹೋರಾಟ ರಾಜ್ಯ ಮತ್ತು ರಾಷ್ಟ್ರ ರಾಜಕಾರಣಕ್ಕೆ ಮೂರು ಮುತ್ತುಗಳನ್ನು ನೀಡಿತು, ದಿವಂಗತ ಅನಂತಕುಮಾರ್, ಅನಂತಕುಮಾರ್ ಹೆಗಡೆ ಮತ್ತು ಪ್ರಹ್ಲಾದ ಜೋಷಿ. ಹೋರಾಟದಲ್ಲಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದರು. ಅವರ ಕುಟುಂಬ ಹೇಗಿದೆಯೋ ಗೊತ್ತಿಲ್ಲ.

ಮೊನ್ನೆ ಯಾರೋ ಹುಬ್ಬಳ್ಳಿಗೆ ಹೋಗಿ ಬಂದವರು ‘’ ಆ ಈದ್ಗಾ ಮೈದಾನ ಇದೆಯಲ್ಲಾ, ಅದು ಈಗ ಪಾರ್ಕಿಂಗ್ ಸ್ಪೇಸ್ ಆಗಿದೆ. ಒಂದು ಕಾಲದಲ್ಲಿ ಸುತ್ತುವರಿದಿದ್ದ ಪೊಲೀಸರು ಮತ್ತು ಅವರ ವ್ಯಾನ್ ಗಳೇ ಕಾಣುತ್ತಿಲ್ಲಾ’ ಎಂದರು. ಈಗ ಆ ಪೋಲಿಸರೆಲ್ಲ ಈದ್ಗಾ ಮೈದಾನದಿಂದ ವಿಧಾನಸಭೆ, ಲೋಕಸಭೆಗೆ ಹೋಗಿದ್ದಾರಲ್ಲಾ ಅವರನ್ನು ಕಾಯುತ್ತಿದ್ದಾರೆ’ ಎಂದೆ.

ಅವರಿಗೂ ಈಗ ಗೊತ್ತಾಗಿ ಹೋಗಿದೆ. ಸ್ಟ್ರಾಟಜಿ ಸ್ಪಷ್ಟ.

ಬೀದಿಯಲ್ಲಿ ಹೋಗುವ ಒಬ್ಬ ಮುಸ್ಲಿಮನ ಕುತ್ತಿಗೆಗೆ ಕತ್ತಿ ಇಟ್ಟು ‘ ಭಾರತ ಮಾತಾ ಕೀ ಜೈ ಹೇಳೋ’ ಎಂದು ಗದರಿಸುವುದು. ಅವನು ನಿರಾಕರಿಸಿದ ಕೂಡಲೇ ‘ ನೋಡ್ರಿ ಈ ಸಾಬಿ ಭಾರತ್ ಮಾತಾ ಕೀ ಜೈ ಹೇಳೊಲ್ಲ’ ಅಂತಾನೆ ಎಂದು ಬೊಬ್ಬೆ ಹಾಕುವುದು. ಜನ ಸೇರುತ್ತಾರೆ.

ಅವಮಾನಿತನಾದ ಆ ಮುಸ್ಲಿಮ್ ವ್ಯಕ್ತಿ ‘ ನೀವು ಹೀಗೆ ಬಲವಂತ ಮಾಡಿದರೆ ಪ್ರಾಣ ಹೋದರೂ ಭಾರತ ಮಾತಾ ಕೀ ಜೈ ಅನ್ನೊಲ್ಲ’’ ಅಂತಾನೆ. ಆಗ ಇನ್ನೂ ಜೋರು ಬೊಬ್ಬೆ ಹಾಕುವುದು. ಇನ್ನಷ್ಟು ಜನ ಸೇರುತ್ತಾರೆ.

ಅಷ್ಟರಲ್ಲಿ ವಾಟ್ಸಪ್ ಗ್ರೂಪ್ ಗಳಲ್ಲಿ ‘ದೇಶದ್ರೋಹಿ’ ವಿಡಿಯೋಗಳು ಚಕಚಕನೆ ಹರಿದಾಡತೊಡಗಿ,ದೇಶದ್ರೋಹಿಯ ವಿರುದ್ದ ಜನಾಂದೋಲನ ಶುರುವಾಗಿರುತ್ತದೆ. ಟಿವಿ ಚಾನೆಲ್ ಕ್ಯಾಮೆರಾಗಳು ಬಂದು ಮುತ್ತಿಕೊಳ್ಳುತ್ತಿವೆ. ಮುಂದೆ ದೇಶದ್ರೋಹ, ಪಾಕಿಸ್ತಾನ, ಬೆಂಕಿ,ಬಿರುಗಾಳಿ, ಕಾಡ್ಗಿಚ್ಚು ಎಲ್ಲವೂ ಟಿವಿ ಪರದೆ ಮೇಲೆ ರಾರಾಜಿಸತೊಡಗುತ್ತದೆ.

ನಿನ್ನೆ ರಾಷ್ಟ್ರಧ್ವಜ, ಇಂದು ಹಿಜಾಬ್, ನಾಳೆ ಇನ್ನೊಂದು…
ಯಾರು ಹೇಳಿದ್ದು ಚುನಾವಣೆಯ ಕಾಲದಲ್ಲಿ ಪ್ರಜೆಗಳು
ಪ್ರಜಾ ಪ್ರತಿನಿಧಿಗಳಲ್ಲಿ ಶಾಲೆ,ಆಸ್ಪತ್ರೆ, ರಸ್ತೆ, ನೀರು, ಉದ್ಯೋಗಗಳ ಲೆಕ್ಕ ಕೇಳುತ್ತಾರೆಂದು..?

[ ದಿನೇಶ್ ಅಮೀನ್ ಮಟ್ಟು, ಫೇಸ್ ಬುಕ್‌’ನಲ್ಲಿ ]

Join Whatsapp