ಕೊರೊನಾ ಸಂಕಷ್ಟ | ಮಂಗಳೂರಿನಲ್ಲಿ ಮೀನುಗಾರಿಕೆ ಸೆ.1ಕ್ಕೆ ಮುಂದೂಡಿಕೆ

Prasthutha|

ಮಂಗಳೂರು : ಜಗತ್ತಿನಾದ್ಯಂತ ಹರಡಿರುವ ಕೊರೊನಾ ಸೋಂಕಿನ ಸಂಕಷ್ಟದ ಪರಿಣಾಮ ಕರಾವಳಿ ಮೀನುಗಾರರ ಮೇಲೂ ದೊಡ್ಡ ಪ್ರಮಾಣದಲ್ಲಿ ತಟ್ಟಿದೆ. ಆ.1ರಿಂದ ಆರಂಭಗೊಳ್ಳ ಬೇಕಿದ್ದ ಮೀನುಗಾರಿಕೆ ಚಟುವಟಿಕೆ ಕೊರೊನಾ ಸಂಕಷ್ಟದ ಕಾರಣ, ಇನ್ನೂ ಒಂದು ತಿಂಗಳು ಮುಂದೂಡಲ್ಪಟ್ಟಿದೆ. ಕರಾವಳಿಯಲ್ಲಿ ಸೆ.1ರಿಂದ ಮೀನುಗಾರಿಕೆ ಆರಂಭಿಸಲು ಮೀನುಗಾರರ ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ನಿರ್ಧರಿಸಲಾಗಿದೆ.

- Advertisement -

ಮೀನುಗಾರಿಕೆ ಆರಂಭವಾದ ಬಳಿಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಮೀನುಗಾರಿಕೆ ಒಂದು ತಿಂಗಳು ಮುಂದೂಡುವ ಬಗ್ಗೆ ಎಲ್ಲ ಸಂಘಟನೆಗಳ ಪ್ರಮುಖರು ಒಮ್ಮತದ ಒಪ್ಪಿಗೆ ಸೂಚಿಸಿದ್ದಾರೆ.

ಜಿಲ್ಲೆಯ ಬಂದರಿನಲ್ಲಿ ಸುಮಾರು 1,200 ಬೋಟುಗಳು ಮೀನುಗಾರಿಕೆಯಲ್ಲಿ ತೊಡಗುತ್ತವೆ. ಈ ವೇಳೆ ವಿವಿಧ ರಾಜ್ಯಗಳ ಕಾರ್ಮಿಕರು ಇಲ್ಲಿಗೆ ಆಗಮಿಸುತ್ತಾರೆ. ಹೀಗಾಗಿ ಸುರಕ್ಷಿತ ಮೀನುಗಾರಿಕೆಗೆ ಮಾರ್ಗಸೂಚಿ ರಚಿಸಬೇಕಾಗಿದೆ. ಈ ಕುರಿತು ಜಿಲ್ಲಾಡಳಿತದೊಂದಿಗೆ ಚರ್ಚಿಸಲಾಗುವುದು ಎಂದು ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ನಿತಿನ್ ಕುಮಾರ್ ಹೇಳಿದ್ದಾರೆ. ಸಭೆಯಲ್ಲಿ ಟ್ರಾಲ್ ಬೋಟ್, ಪರ್ಸಿನ್ ಬೋಟ್, ಮೀನು ಮಾರಾಟಗಾರರು, ಮೀನು ರಫ್ತು ಕಂಪೆನಿಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Join Whatsapp