ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರಿನಲ್ಲಿ ನಕಲಿ ಪತ್ರ ಕಳುಹಿಸಿ 80 ಲಕ್ಷ ವಂಚನೆ

Prasthutha|

ಬೆಂಗಳೂರು; ಉಡುಗೊರೆಯ ಆಸೆಗೆ ಬಿದ್ದು ಹಣ ಕಳೆದುಕೊಳ್ಳುವವರ ಸಂಖ್ಯೆ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಾಗುತ್ತಲೇ ಇದೆ.
ನಕಲಿ ಹೃದಯ ತಜ್ಞನೊಬ್ಬ ಮಹಿಳೆಯನ್ನು ಮರಳು ಮಾಡಿ ಸುಮಾರು 80 ಲಕ್ಷ ರೂ. ಪಡೆದು ವಂಚಿಸಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

- Advertisement -


ಘಟನೆಯ ವಿವರ:
ಹೃದ್ರೋಗ ತಜ್ಞ ಎಂದು ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿಕೊಂಡ ನಕಲಿ ವೈದ್ಯನೊಬ್ಬ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೆಸರಿನಲ್ಲಿ ನಕಲಿ ಪತ್ರ ಕಳುಹಿಸಿ 80 ಲಕ್ಷ ರೂ. ವಂಚಿಸಿರುವ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬನಶಂಕರಿ ನಿವಾಸಿ ಸಂಧ್ಯಾ ಗಾಯತ್ರಿ ನೀಡಿದ‌ ದೂರಿನ ಮೇರೆಗೆ ವಿದೇಶಿ ಪ್ರಜೆ ಡೇವಿಸ್ ಹಾರ್ಮನ್‌ ಎಂಬಾತನ ವಿರುದ್ಧ ಬನಶಂಕರಿ ಠಾಣೆ ಪೊಲೀಸರು ಎಫ್ಐಆರ್​ ದಾಖಲಿಸಲಾಗಿದೆ.
ಕಳೆದ ಜ.23ರಂದು ಸಂಧ್ಯಾಗೆ ಇನ್ ಸ್ಟಾಗ್ರಾಂನಲ್ಲಿ ಡೇವಿಸ್, ರಿಕ್ವೆಸ್ಟ್ ಕಳುಹಿಸಿದ್ದ. ಸಂಧ್ಯಾ ರಿಕ್ವೆಸ್ಟ್ ಸ್ವೀಕರಿಸಿದ ಕೂಡಲೇ ಆಪ್ತವಾಗಿ ಮಾತನಾಡಲು ಅರಂಭಿಸಿ ಕ್ರಮೇಣ ಇಬ್ಬರೂ ಸ್ನೇಹಿತರಾಗಿದ್ದರು.
ಡೇವಿಸ್ ತನ್ನನ್ನು ಹೃದಯ ತಜ್ಞನೆಂದು ಪರಿಚಯಿಸಿಕೊಂಡಿದ್ದ. ಸಂಧ್ಯಾ ಸಹ ಹೃದಯ ಸಂಬಂಧಿತ ಖಾಯಿಲೆಗಳಿಂದ ಬಳಲುತ್ತಿದ್ದರಿಂದ ಈತನಿಂದ ಸಲಹೆ ಪಡೆಯುತ್ತಿದ್ದಳು.


ಕಳೆದ ಫೆ.6ರಂದು ಇನ್ ಸ್ಟಾಗ್ರಾಂನಿಂದ ಮೆಸೇಜ್ ಕಳುಹಿಸಿ 35 ಸಾವಿರ ಪೌಂಡ್ ಮೌಲ್ಯದ ವಿದೇಶಿ‌ ಕರೆನ್ಸಿ ಹಾಗೂ ಒಡವೆಗಳು ಕಳುಹಿಸಿ ಕಸ್ಟಮ್ಸ್ ಶುಲ್ಕ ಪಾವತಿಸಿ ಪಡೆದುಕೊಳ್ಳಿ ಎಂದಿದ್ದಾನೆ‌.‌ ಇದಾದ ಕೆಲ ಸಮಯ ಬಳಿಕ ಅಪರಿಚಿತೆ ಮಹಿಳೆ ಸಂಧ್ಯಾಗೆ ಕರೆ ಮಾಡಿ ತನ್ನನ್ನು ಕಸ್ಟಮ್ಸ್ ಕೊರಿಯರ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಳು. ಕಸ್ಟಮ್ಸ್ ಶುಲ್ಕ ಪಾವತಿಸಿದರೆ ನಿಮಗೆ ವಿದೇಶದಿಂದ ಬಂದಿರುವ ಐಶಾರಾಮಿ ಉಡುಗೊರೆಯನ್ನು ಸ್ವೀಕರಿಸುವಂತೆ ಒತ್ತಾಯಿಸಿದ್ದಳು.
ಈಕೆಯ ಮೇಲೆ ಅನುಮಾನ ಬಂದು ಸಂಧ್ಯಾ ಹಣ ಕಳುಹಿಸಿರಲಿಲ್ಲ. ಎರಡು ದಿನದ ನಂತರ ಮತ್ತೆ ಕಸ್ಟಮ್ಸ್ ಎಂದು ಹೇಳಿ ಕರೆ ಮಾಡಿದ ಯುವತಿ, ನೀವು ತುಂಬಾ ದಿನವಾದರೂ ಉಡುಗೊರೆ ಪಾರ್ಸೆಲ್ ಸ್ವೀಕರಿಸಿಲ್ಲ. ವಿತ್ತ ಸಚಿವಾಲಯದಿಂದ ನಿಮ್ಮ ಹೆಸರಿಗೆ ನೋಟಿಸ್ ಬಂದಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೆಸರಿನಲ್ಲಿ ತಯಾರಿಸಿದ ನಕಲಿ ನೋಟಿಸ್ ಪತ್ರದ ಸ್ಕ್ರೀನ್‌ಶಾಟ್‌ವೊಂದನ್ನು ಸಂಧ್ಯಾ ಅವರ ವಾಟ್ಸಾಪ್ ಗೆ ಕಳುಹಿಸಿದ್ದಾಳೆ.
ಈ ಪತ್ರ ನೋಡಿದ ಸಂಧ್ಯಾ ನಿಜವಾಗಿಯೂ ತನಗೆ ಉಡುಗೊರೆ ಬಂದಿರಬಹುದು ಎಂದು ನಂಬಿದ್ದರು. ಆರೋಪಿಗಳ ಸೂಚನೆಯಂತೆ ಹಂತ-ಹಂತವಾಗಿ ಅವರು ಸೂಚಿಸಿದ ಬ್ಯಾಂಕ್ ಖಾತೆಗೆ ಒಟ್ಟು 80 ಲಕ್ಷ ರೂ. ವರ್ಗಾವಣೆ ಮಾಡಿದ್ದರು. 80 ಲಕ್ಷ ರೂ. ಜಮೆಯಾಗುತ್ತಿದ್ದಂತೆ ಡೇವಿಸ್ ಸಂಧ್ಯಾ ಸಂಪರ್ಕಕ್ಕೆ ಸಿಗದೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.
ಹೀಗಾಗಿ ಸಂಧ್ಯಾ ಬನಶಂಕರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

- Advertisement -

Join Whatsapp