ಕೆ.ಸಿ.ಜನರಲ್ ನಲ್ಲೂ ತಾಯಿ-ಶಿಶು ಆಸ್ಪತ್ರೆ, ‘ವಾಣಿ ವಿಲಾಸ’ ಮಾದರಿಯಲ್ಲಿ ನಿರ್ಮಾಣ: ಸಚಿವ ಡಾ.ಕೆ.ಸುಧಾಕರ್

Prasthutha|

ಬೆಂಗಳೂರು: ವಾಣಿ ವಿಲಾಸ ತಾಯಿ-ಶಿಶು ಆಸ್ಪತ್ರೆಯ ಮಾದರಿಯಲ್ಲೇ ಕೆ.ಸಿ.ಜನರಲ್ ಆಸ್ಪತ್ರೆಯಲ್ಲೂ ತಾಯಿ-ಶಿಶು ಆಸ್ಪತ್ರೆ ನಿರ್ಮಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

- Advertisement -

ನಿರ್ಮಾಣ್ ಹಾಗೂ ಓಪನ್ ಟೆಕ್ಸ್ಟ್ ನೆರವಿನಲ್ಲಿ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಐಸಿಯು ಉನ್ನತೀಕರಣ ಹಾಗೂ ಹೊಸ ವೈದ್ಯಕೀಯ ಉಪಕರಣಗಳ ಅಳವಡಿಕೆ ಕಾರ್ಯಕ್ರಮದಲ್ಲಿ ಸಚಿವರು ಪಾಲ್ಗೊಂಡು ಮಾತನಾಡಿದರು.

ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 100 ಹಾಸಿಗೆಗಳ ತಾಯಿ-ಶಿಶು ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಲಾಗಿದೆ. ಇದನ್ನು ವಾಣಿ ವಿಲಾಸ ಮಾದರಿಯಲ್ಲಿ ನಿರ್ಮಿಸಲಾಗುವುದು. ಈಗಾಗಲೇ ಆಯವ್ಯಯದಲ್ಲಿ ಘೋಷಿಸಿದಂತೆ, ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿ ಕನಿಷ್ಠ 500 ಹಾಸಿಗೆ ಸಾಮರ್ಥ್ಯ ಇರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಿಸಲಾಗುತ್ತದೆ. ಈ ವರ್ಷದಲ್ಲೇ ಎಲ್ಲಾ ಪ್ರಸ್ತಾವಗಳು ಬರಲಿದ್ದು, ಜಾಗಗಳನ್ನು ಗುರುತಿಸಲಾಗುವುದು. ಶೀಘ್ರದಲ್ಲೇ ಶಿಲಾನ್ಯಾಸ ನೆರವೇರಲಿದೆ ಎಂದರು.

- Advertisement -

ಖಾಸಗಿ ಸಂಸ್ಥೆಗಳು ಕೆ.ಸಿ.ಜನರಲ್ ನಲ್ಲಿ 10 ಹಾಸಿಗೆಗಳ ಐಸಿಯು ವ್ಯವಸ್ಥೆಯನ್ನು ಮಾಡಿಕೊಟ್ಟಿವೆ. ಜೊತೆಗೆ ಅದಕ್ಕೆ ಬೇಕಿರುವ ಉಪರಣಗಳನ್ನೂ ನೀಡಲಾಗಿದೆ. 5 ವರ್ಷದೊಳಗಿನ ಮಕ್ಕಳು ನ್ಯುಮೋನಿಯಾದಿಂದ ಸಾವಿಗೀಡಾಗುವುದನ್ನು ತಪ್ಪಿಸಲು ರಾಜ್ಯಮಟ್ಟದ ಅರಿವು ಕಾರ್ಯಕ್ರಮ ಹಾಗೂ ಆಶಾ ಕಾರ್ಯಕರ್ತೆಯರು, ಇತರೆ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮ ನೀಡಲಾಗುತ್ತಿದೆ. ಇದು ಶ್ಲಾಘನೀಯವಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಬೇಟಿ ಬಚಾವೊ, ಬೇಟಿ ಪಡಾವೊ ಎಂದು ಘೋಷಿಸಿ ಹೆಣ್ಣುಮಕ್ಕಳ ರಕ್ಷಣೆಗೆ ಒತ್ತು ನೀಡಿದ್ದಾರೆ. ಇದೇ ರೀತಿ ಭ್ರೂಣ ಪತ್ತೆ ಮಾಡಿ ಹತ್ಯೆ ಮಾಡುವುದನ್ನು ತಡೆಯಲು ಕಠಿಣ ಕಾನೂನು ಜಾರಿಯಲ್ಲಿದೆ. ಹೊಸ ಎನ್ಟಿಪಿ ಕಾನೂನಿನಲ್ಲಿ, ಆಪತ್ತು ಇರುವ ತಾಯಂದಿರು ಹಾಗೂ ಆರೋಗ್ಯಕರವಾಗಿ ಬೆಳೆಯದ ಭ್ರೂಣಕ್ಕೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಗರ್ಭಪಾತ ಮಾಡಲು ಅವಕಾಶವಿದೆ. ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು.

ದೇಶದಲ್ಲಿ ಒಂದೂವರೆ ಲಕ್ಷದಷ್ಟು ಮಕ್ಕಳು 5 ವರ್ಷದೊಳಗೆ ನ್ಯುಮೋನಿಯಾಗೆ ತುತ್ತಾಗುತ್ತಿದ್ದಾರೆ. ರಾಜ್ಯದಲ್ಲಿ 1,000 ಶಿಶು ಜನನದಲ್ಲಿ 28 ಸಾವುಗಳು ನ್ಯುಮೋನಿಯಾದಿಂದ ಸಂಭವಿಸುತ್ತಿವೆ. ಇದನ್ನು ನಾಲ್ಕು, ಐದಕ್ಕೆ ಇಳಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಗುರಿ ನೀಡಿದೆ. ಇದಕ್ಕಾಗಿ ಹೆಚ್ಚು ಅರಿವು ತರುವ ಕಾರ್ಯಕ್ರಮ ನಡೆಯಬೇಕಿದೆ. ಮುನ್ನೆಚ್ಚರಿಕೆಯಿಂದಲೇ ಅನೇಕ ರೋಗಗಳನ್ನು ತಡೆಗಟ್ಟಲು ಸಾಧ್ಯವಿದೆ. ಮಕ್ಕಳ ಆರೋಗ್ಯ ರಕ್ಷಣೆ ಮಾಡುವುದು ಎಲ್ಲರ ಕರ್ತವ್ಯ ಎಂದರು.

ಕೆ.ಸಿ.ಜನರಲ್ ಆಸ್ಪತ್ರೆ ನಗರದ ಹೃದಯಭಾಗದಲ್ಲಿದ್ದು, ಉತ್ತಮ ಆಸ್ಪತ್ರೆಯಾಗಿದೆ. ಇಲ್ಲಿಗೆ ಬರುವ ರೋಗಿಗಳನ್ನು ಮನೆಯವರಂತೆ ಆರೈಕೆ ಮಾಡುವ ಅಗತ್ಯವಿದೆ. ಆದರೆ ಅಂತಹ ನಿರೀಕ್ಷಿತ ಬದಲಾವಣೆ ಈ ಆಸ್ಪತ್ರೆಯಲ್ಲಿ ಕಂಡುಬಂದಿಲ್ಲ. ಜಯದೇವ, ವಾಣಿ ವಿಲಾಸ ಮೊದಲಾದ ಆಸ್ಪತ್ರೆಗಳಲ್ಲಿ ಖಾಸಗಿಗಿಂತ ಹೆಚ್ಚು ಗುಣಮಟ್ಟದ ಸೇವೆ ದೊರೆಯುತ್ತಿದೆ. ಇದೇ ರೀತಿ ಕೆ.ಸಿ.ಜನರಲ್ ಆಸ್ಪತ್ರೆಯಲ್ಲೂ ಏಕೆ ಸೇವೆ ದೊರೆಯುತ್ತಿಲ್ಲ ಎಂದು ಚಿಂತಿಸಬೇಕಿದೆ. ಆಸ್ಪತ್ರೆಯ ಎಲ್ಲರೂ ಈ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಬೇಕು. ಆಸ್ಪತ್ರೆಯ ಸಂಪೂರ್ಣ ವ್ಯವಸ್ಥೆಯನ್ನು ನಿರ್ವಹಣೆ ಮಾಡುವವರು ಉತ್ತಮವಾಗಿ ಕೆಲಸ ಮಾಡಬೇಕು. ಒಳ್ಳೆಯ ಸೇವೆ ನೀಡಿದರೆ ಜನರಿಗೆ ಒಳ್ಳೆಯದಾಗುತ್ತದೆ. ಇದರಿಂದ ಸರ್ಕಾರಕ್ಕೂ ಹೆಸರು ಬರುತ್ತದೆ ಎಂದು ಕಿವಿಮಾತು ಹೇಳಿದರು.

Join Whatsapp