ಔರಂಗಜೇಬ್ ಜಾತ್ಯಾತೀತನಾಗಿರಲಿಲ್ಲ : ಉದ್ಧವ್ ಠಾಕ್ರೆ

Prasthutha|

- Advertisement -

ಔರಂಗಾಬಾದ್ ಮರುನಾಮಕರಣದ ಬಗ್ಗೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಶಿವಸೇನೆ ವಾಕ್ಸಮರ ಮುಂದುವರಿಯುತ್ತಲೇ ಇದೆ. ಔರಂಗಾಬಾದ್ ಅನ್ನು ಸಾಂಬಾಜಿ ನಗರ ಎಂದು ಮರುನಾಮಕರಣ ಮಾಡುವ ಶಿವಸೇನೆಯ ಕ್ರಮವನ್ನು ಕಾಂಗ್ರೆಸ್ ಆರಂಭದಲ್ಲೇ ವಿರೋಧಿಸಿತ್ತು. ಈಗ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೂಡ ಮರುನಾಮಕರಣದ ಪರವಾಗಿ ಮಾತನಾಡಲು ಪ್ರಾರಂಭಿಸಿದ್ದಾರೆ.

ಮಹಾರಾಷ್ಟ್ರ ಸರಕಾರದ ಮೈತ್ರಿಯು ಜಾತ್ಯತೀತತೆಯ ಪರಿಕಲ್ಪನೆಯನ್ನು ಆಧರಿಸಿದೆ. ಆದರೆ ಮೊಘಲ್ ಚಕ್ರವರ್ತಿ ಔರಂಗಜೇಬ್ ಜಾತ್ಯಾತೀತತೆಗೆ ವಿರುದ್ಧವಾಗಿದ್ದರು ಎಂದು ಠಾಕ್ರೆ ಹೇಳಿಕೊಂಡಿದ್ದಾರೆ. ಔರಂಗಜೇಬನನ್ನು ನೆನಪಿಸುವ  ಔರಂಗಾಬಾದ್ ಎಂಬ ಹೆಸರನ್ನು ಬದಲಾಯಿಸಿ ಮರಾಠಾ ಆಡಳಿತಗಾರನ ನೆನಪಿಗಾಗಿ ಸಂಬಾಜಿ ನಗರ ಎಂದು ಹೆಸರಿಡಲು ಶಿವಸೇನೆ ನಿರ್ಧರಿಸಿದೆ.

- Advertisement -

“ಔರಂಗಜೇಬ್ ಜಾತ್ಯತೀತವಾದಿಯಾಗಿರಲಿಲ್ಲ. ನಮ್ಮ ಕಾರ್ಯಸೂಚಿ ಜಾತ್ಯತೀತತೆಯನ್ನು ಆಧರಿಸಿದೆ. ಆದ್ದರಿಂದ ಔರಂಗಬಾದ್ ಎಂಬ ಹೆಸರನ್ನು ಬದಲಿಸಲಿದ್ದೇವೆ. ಇದು ಶಿವಸೇನೆಯ ಸರ್ವೋಚ್ಚ ನಾಯಕ ಬಾಳ್ ಠಾಕ್ರೆ ಅವರ ಆಶಯ ”ಎಂದು ಠಾಕ್ರೆ ಸುದ್ದಿಗಾರರಿಗೆ ತಿಳಿಸಿದ್ದಾರೆ. ಬಿಜೆಪಿಯಿಂದ ಶಿವಸೇನೆಗೆ ಮರಳಿದ ವಸಂತ್ ಗೀತೆ ಮತ್ತು ಸುನಿಲ್ ಗಾಗುಲ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು. ನಿನ್ನೆ ತಮ್ಮ ಅಧಿಕೃತ ಟ್ವಿಟರ್ ಪುಟದಲ್ಲಿ ಕ್ಯಾಬಿನೆಟ್ ಮಾಹಿತಿಯನ್ನು ಹಂಚಿಕೊಂಡಾಗ ಠಾಕ್ರೆ ಔರಂಗಾಬಾದ್ ಅನ್ನು ಸಾಂಬಾಜಿ ನಗರ ಎಂದು ಬಣ್ಣಿಸಿದ್ದರು.

Join Whatsapp