ಸುರಂಗದಲ್ಲಿ ಸಿಲುಕಿದ ಕಾರ್ಮಿಕರು: ಏಳು ಮಂದಿಯ ರಕ್ಷಣೆ

Prasthutha|

ಭೋಪಾಲ್: ಬಾರ್ಗಿ ಕಾಲುವೆ ಯೋಜನೆಯ ನಿರ್ಮಾಣ ಹಂತದ ಸುರಂಗದಲ್ಲಿ ಒಂಬತ್ತು ಕಾರ್ಮಿಕರು ಸಿಲುಕಿಕೊಂಡಿರುವ ಘಟನೆ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ಸ್ಲೀಮನಾಬಾದ್‌ನಲ್ಲಿನಡೆದಿದೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಒಂಬತ್ತು ಕಾರ್ಮಿಕರಲ್ಲಿ ಏಳು ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ತಡರಾತ್ರಿ ಈ ಘಟನೆ ನಡೆದಿದ್ದು, ಜಬಲ್‌ಪುರದಿಂದ ಆಗಮಿಸಿದ ರಾಜ್ಯ ವಿಪತ್ತು ತುರ್ತು ನಿರ್ವಹಣಾ ಪಡೆ(ಎಸ್‌ಡಿಇಆರ್‌ಎಫ್)ಯೊಂದಿಗೆ ಸ್ಥಳೀಯ ಅಧಿಕಾರಿಗಳು ಉಳಿದ ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಟ್ನಿ ಜಿಲ್ಲಾಧಿಕಾರಿ ಪ್ರಿಯಾಂಕ್ ಮಿಶ್ರಾ ತಿಳಿಸಿದ್ದಾರೆ.
ಮಧ್ಯಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಶ್ ರಾಜೋರಾ ಅವರು ರಾಜ್ಯ ಸಚಿವಾಲಯದಿಂದ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
“ಅಗತ್ಯ ಸಾಧನಗಳೊಂದಿಗೆ ಎಸ್‌ಡಿಇಆರ್‌ಎಫ್ ತಂಡವು ಶಾಫ್ಟ್ ಅಗೆಯುವ ಮೂಲಕ ಕಾರ್ಮಿಕರನ್ನು ತಲುಪಲು ಪ್ರಯತ್ನಿಸುತ್ತಿದೆ. ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಸ್ಥಳದಲ್ಲಿದ್ದಾರೆ” ಎಂದು ರಾಜೋರಾ ಪಿಟಿಐಗೆ ತಿಳಿಸಿದರು.

Join Whatsapp